SHIMOGA, 5 AUGUST 2024
ಲಾರಿ ಬ್ಯಾಟರಿ ಕಳ್ಳತನ
ಶಿವಮೊಗ್ಗ ಲೈವ್.ಕಾಂ : ರಸ್ತೆ ಬದಿ ನಿಲ್ಲಿಸಿದ್ದ ಲಾರಿಯಿಂದ (Lorry) ಎರಡು ಬ್ಯಾಟರಿಗಳನ್ನು ಕಳವು ಮಾಡಲಾಗಿದೆ. ಶಿವಮೊಗದ 80 ಅಡಿ ರಸ್ತೆಯ ಮಂಜುನಾಥ ಬಡಾವಣೆಯಲ್ಲಿರುವ ಕೆಎಸ್ಆರ್ಟಿಸಿ ಡಿಪೋ ಬಳಿ ನಿಲ್ಲಿಸಿದ್ದ ನಿಹಾಲ್ ಪಾಷಾ ಎಂಬುವವರ ಲಾರಿಯಲ್ಲಿ ಕಳ್ಳತನವಾಗಿದೆ. ಗೇರ್ ಬಾಕ್ಸ್ ಸಮಸ್ಯೆಯಾಗಿದ್ದರಿಂದ ಲಾರಿಯನ್ನು ಅಲ್ಲಿ ನಿಲ್ಲಿಸಿ ನಿಹಾಲ್ ಪಾಷಾ ಮನೆಗೆ ತೆರಳಿದ್ದರು. ಮರುದಿನ ಬೆಳಗ್ಗೆ ಬಂದಾಗ ಎರಡು ಬ್ಯಾಟರಿ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಘಟನೆ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡ್ಯಾಂ ನೋಡಲು ಹೊರಟವನಿಗೆ ಮಚ್ಚಿನೇಟು
ಶಿವಮೊಗ್ಗ ಲೈವ್.ಕಾಂ : ಭದ್ರಾ ಜಲಾಶಯದಿಂದ ನೀರು ಬಿಟ್ಟಿದ್ದು ನೋಡಲು ತೆರಳುತ್ತಿದ್ದ ವ್ಯಕ್ತಿ ಮೇಲೆ ಮಚ್ಚಿನಿಂದ ಹೊಡೆದು ಹಲ್ಲೆ ನಡೆಸಲಾಗಿದೆ. ಶಿವಮೊಗ್ಗ ತಾಲೂಕು ಉಂಬ್ಳೆಬೈಲು ಗ್ರಾಮದ ಆನೆಕಲ್ಲು ಗಣಪತಿ ದೇಗುಲದ ಬಳಿ ಘಟನೆ ನಡೆದಿದೆ. ವಿಶ್ವನಾಥ ಎಂಬುವವರು ಬೈಕಿನಲ್ಲಿ ತೆರಳುತ್ತಿದ್ದಾಗ ಗೋಪಾಲ ಎಂಬಾತ ಅಡ್ಡಗಟ್ಟಿ ಸಾವಿರ ರೂ. ಹಣ ಕೇಳಿದ್ದ. ಹಣ ಇಲ್ಲ ಎಂದಿದ್ದಕ್ಕೆ ತನ್ನ ಬಳಿ ಇದ್ದ ಕೊಡಲಿಯಿಂದ ವಿಶ್ವನಾಥನ ಕತ್ತು, ಭುಜದ ಭಾಗಕ್ಕೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಗಾಯಗೊಂಡಿದ್ದ ವಿಶ್ವನಾಥನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 20 ಹೊಲಿಗೆ ಹಾಕಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೊಳೆಹೊನ್ನೂರಿನಲ್ಲಿ ಬೈಕ್ ಕಳ್ಳತನ
ಶಿವಮೊಗ್ಗ ಲೈವ್.ಕಾಂ : ಹೊಳೆಹೊನ್ನೂರಿನ ಶಿವಮೊಗ್ಗ ರಸ್ತೆಯಲ್ಲಿ ನಿಲ್ಲಿಸಿದ್ದ ಪಲ್ಸರ್ ಎನ್ಎಸ್ ಬೈಕ್ ಕಳ್ಳತನವಾಗಿದೆ. ಶಂಕರಯ್ಯ ಎಂಬುವವರು ಗ್ಯಾಸ್ ಏಜೆನ್ಸಿಯೊಂದರ ಮುಂದೆ ಬೈಕ್ ನಿಲ್ಲಿಸಿ ಕೆಲಸದ ನಿಮಿತ್ತ ತೆರಳಿದ್ದರು. ಮರಳಿ ಬಂದಾಗ ಬೈಕ್ ಇರಲಿಲ್ಲ. ಎಲ್ಲೆಡೆ ಹುಡುಕಾಡಿ ಬಳಿಕ ಹೊಳೆಹೊನ್ನೂರು ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.