SHIMOGA : ನ್ಯಾಯಾಲಯದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ರಾಣೆಬೆನ್ನೂರಿನ ದಂಪತಿಗೆ ವ್ಯಕ್ತಿಯೊಬ್ಬ 30 ಲಕ್ಷ ರೂ. ವಂಚಿಸಿದ (Job Scam) ಆರೋಪ ಕೇಳಿ ಬಂದಿದೆ. ಕೊಟ್ಟ ಹಣವು ಸಿಗದೆ, ಕೆಲಸವು ದೊರೆಯದೆ ಆತಂಕಕ್ಕೀಡಾದ ದಂಪತಿ ದೂರು ನೀಡಿದ್ದಾರೆ.
ಕೋವಿಡ್ ಸಂದರ್ಭ ರಾಣೆಬೆನ್ನೂರಿನ ಕಿರಣ್ ಮತ್ತು ದೀಪಾ ದಂಪತಿ ಬೆಂಗಳೂರಿನಲ್ಲಿ ಕೆಲಸ ಕಳೆದುಕೊಂಡರು. ತಮ್ಮೂರಿಗೆ ಮರಳಿ ಜೀವನ ನಡೆಸುತ್ತಿದ್ದರು. ಶಿವಮೊಗ್ಗದಲ್ಲಿರುವ ಸಂಬಂಧಿಯೊಬ್ಬರ ಅಂಗಡಿ ಬಳಿ ಬಂದಾಗ ವೆಂಕಟರೆಡ್ಡಿ ಎಂಬಾತನ ಪರಿಚಯವಾಗಿದೆ. ಎಸ್ಸೆಸ್ಸೆಲ್ಸಿ ಪಾಸಾದವರಿಗೆ ನ್ಯಾಯಾಲಯದಲ್ಲಿ ಕೆಲಸ ಕೊಡಿಸುವುದಾಗಿ ಆತ ಭರವಸೆ ನೀಡಿದ್ದ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ – ಜೈಲ್ ರಸ್ತೆಯಲ್ಲಿ ಬೈಕ್ನಲ್ಲಿ ಬಂದು ಅಡ್ಡಗಟ್ಟಿ 54 ಸಾವಿರದ ಮೊಬೈಲ್ ಕಸಿದು ಪರಾರಿ
ಕೆಲಸ ಕೊಡಿಸಲು ಹಣ ಖರ್ಚಾಗಲಿದೆ ಎಂದು ವೆಂಕಟರೆಡ್ಡಿ ತಿಳಿಸಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅದರಂತೆ ಕಿರಣ್ ಮತ್ತು ದೀಪಾ ದಂಪತಿ 30 ಲಕ್ಷ ರೂ. ಹಣ ಹೊಂದಿಸಿ ಕೊಟ್ಟಿದ್ದರು. ಆರು ತಿಂಗಳು ಕಳೆದರೂ ಕೆಲಸ ಕೊಡಿಸದ ಹಿನ್ನಲೆ ವೆಂಕಟರೆಡ್ಡಿಯನ್ನು ಪ್ರಶ್ನಿಸಿದರು ಪ್ರಯೋಜನವಾಗಿಲ್ಲ. ಈ ಹಿನ್ನೆಲೆ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.