ಶಿವಮೊಗ್ಗ: ನಗರದ ಕಾಶಿಪುರದ ಮನೆಯೊಂದರಲ್ಲಿ ₹1,16,000 ಮೌಲ್ಯದ ಚಿನ್ನಾಭರಣ ಕಳವಾಗಿದೆ. ಮನೆಗೆ ಬಂದು ಹೋಗುತ್ತಿದ್ದ ಪರಿಚಿತ ವ್ಯಕ್ತಿಯ ಮೇಲೆಯೇ ಕಳ್ಳತನದ ಶಂಕೆ ವ್ಯಕ್ತವಾಗಿದೆ.
ಉಷಾ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ಇವರಿಗೆ ಪರಿಚಯವಾಗಿದ್ದ ವ್ಯಕ್ತಿಯೊಬ್ಬರು ಆಗಾಗ ಇವರ ಮನೆಗೆ ಬಂದು ಹೋಗುತ್ತಿದ್ದರು. ಉಷಾ ಅವರು ತಮ್ಮ 12 ಗ್ರಾಂ ತೂಕದ ಒಡವೆಗಳನ್ನು ಮನೆಯ ಬ್ಯಾಗ್ನಲ್ಲಿ ಇಟ್ಟಿದ್ದರು. ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಹಾಸನಕ್ಕೆ ಹೊರಡುವಾಗ ಬ್ಯಾಗ್ ಪರಿಶೀಲಿಸಿದಾಗ ಒಡವೆಗಳು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಪರಿಚಿತನಿಂದಲೇ ನಡೆಯಿತಾ ಕಳ್ಳತನ?
ಚಿನ್ನಾಭರಣ ಕಳ್ಳತನವಾಗಿರುವುದು ಅರಿವಾಗುತ್ತಿದ್ದಂತೆ ಉಷಾ ಅವರಿಗೆ ಪರಿಚಿತನ ಮೇಲೆ ಅನುಮಾನ ಮೂಡಿದೆ. ಮನೆಗೆ ಆ ವ್ಯಕ್ತಿಯ ಹೊರತು ಬೇರೆ ಯಾರೂ ಬಾರದಿದ್ದರಿಂದ ಆತನ ಮೇಲೆಯೇ ಕಳವಿನ ಅನುಮಾನ ವ್ಯಕ್ತಪಡಿಸಲಾಗಿದೆ. ನಾಪತ್ತೆಯಾದ ಒಡವೆಗಳಲ್ಲಿ 5 ಗ್ರಾಂ ತೂಕದ ಹಸಿರು ಹರಳಿನ ಉಂಗುರ, 5 ಗ್ರಾಂ ತೂಕದ ಕಿವಿ ಓಲೆ, ಜುಮಕಿ ಹಾಗೂ 2 ಗ್ರಾಂ ತೂಕದ ಕಿವಿ ಗುಂಡು ಸೇರಿವೆ.
ಆರೋಪಿಯು ಒಡವೆಗಳನ್ನು ಮರಳಿಸಬಹುದು ಎಂದು ಉಷಾ ಕಾದಿದ್ದರು. ಹಾಗಾಗಿ ದೂರು ನೀಡುವುದು ವಿಳಂಬವಾಗಿದೆ ಎಂದು ದೂರಿನಲ್ಲಿ ಮಹಿಳೆ ತಿಳಿಸಿದ್ದಾರೆ. ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

