SHIVAMOGGA LIVE NEWS | 23 MAY 2023
LAKKAVALLI : ಭದ್ರಾ ನಾಲೆಯಲ್ಲಿ (Bhadra Canal) ನೀರು ಪಾಲಾಗಿದ್ದ ಮೂವರ ಪೈಕಿ ಇಬ್ಬರ ಮೃತದೇಹ ಪತ್ತೆಯಾಗಿದೆ. ಮತ್ತೊಬ್ಬ ಯುವತಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಮನೆ ಮಕ್ಕಳನ್ನು ಕಳೆದುಕೊಂಡು ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಮದುವೆ ಸಂಭ್ರಮದಲ್ಲಿರಬೇಕಿದ್ದ ಮನೆಯಲ್ಲಿ ಸೂತಕ ಆವರಿಸಿದೆ.
ಲಕ್ಕವಳ್ಳಿ ಸಮೀಪ ಭದ್ರಾ ಬಲದಂಡೆ ನಾಲೆಯಲ್ಲಿ (Bhadra Canal) ಭಾನುವಾರ ಸಂಜೆ ನಂಜನಗೂಡಿನ ಶಾಮವೇಣಿ (16), ಶಿವಮೊಗ್ಗದ ಸೋಮಿನಕೊಪ್ಪದ ಅನನ್ಯಾ (16) ಮತ್ತು ಲಕ್ಕವಳ್ಳಿಯ ರವಿಚಂದ್ರ (35) ನೀರು ಪಾಲಾಗಿದ್ದರು. ಸೋಮವಾರ ಬೆಳಗ್ಗೆ ಅನನ್ಯಾ ಮತ್ತು ಸಂಜೆ ವೇಳೆಗೆ ರವಿಚಂದ್ರ ಅವರ ಮೃತದೇಹ ಪತ್ತೆಯಾಗಿದೆ. ಶಾಮವೇಣಿಗಾಗಿ ಶೋಧ ಕಾರ್ಯ ಮುಂದುವರೆದಿದೆ.
ನಾಲೆಯಲ್ಲಿ ಕಾಲು ಇಳಿ ಬಿಟ್ಟು ಆಟ
ಲಕ್ಕವಳ್ಳಿಯಲ್ಲಿರುವ ಸೋದರ ಮಾವ ರವಿಚಂದ್ರ ಅವರ ಮನೆಗೆ ಶಾಮವೇಣಿ ಮತ್ತು ಅನನ್ಯಾ ಬಂದಿದ್ದರು. ಭಾನುವಾರ ಸಂಜೆ ರವಿಚಂದ್ರ, ಅವರ ಪತ್ನಿ, ಇಬ್ಬರು ಮಕ್ಕಳೊಂದಿಗೆ ಶಾಮವೇಣಿ ಮತ್ತು ಅನನ್ಯಾ ವಾಯುವಿಹಾರಕ್ಕೆ ತೆರಳಿದ್ದರು. ಈ ವೇಳೆ ಭದ್ರಾ ನಾಲೆಯ ಕಟ್ಟೆ ಮೇಲೆ ಕುಳಿತ ಶಾಮವೇಣಿ, ಅನನ್ಯಾ, ರವಿಚಂದ್ರ ಅವರ ಮಕ್ಕಳು ಕಾಲು ನೀರಿನಲ್ಲಿ ಆಡಿಸುತ್ತಿದ್ದರು. ರವಿಚಂದ್ರ ಅವರ ಪತ್ನಿ ಗದರಿದ್ದರಿಂದ ಅವರ ಇಬ್ಬರು ಮಕ್ಕಳು ನಾಲೆಯ ಬಳಿಯಿಂದ ದೂರ ಬಂದಿದ್ದಾರೆ. ಅನನ್ಯಾ ಮತ್ತು ಶಾಮವೇಣಿ ಆಟ ಮುಂದುವರೆಸಿದ್ದರು ಎಂದು ತಿಳಿದು ಬಂದಿದೆ.
ಕಾಲು ಜಾರಿ ಒಬ್ಬರ ಹಿಂದೆ ಒಬ್ಬರು
ಕಾಲು ಜಾರಿ ಅನನ್ಯಾ ನಾಲೆಗೆ ಬಿದ್ದಿದ್ದಾಳೆ. ಆಕೆಯ ರಕ್ಷಣೆಗೆ ಶಾಮವೇಣಿ ಮತ್ತು ರವಿಚಂದ್ರ ಅವರು ಒಬ್ಬರ ಹಿಂದೆ ಒಬ್ಬರು ಹೋಗಿದ್ದಾರೆ ಎಂದು ಆರೋಪಿಸಲಾಗಿದೆ. ಮೂವರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಅಲ್ಲಿಯೇ ಇದ್ದ ರವಿಚಂದ್ರ ಅವರ ಪತ್ನಿ ಮತ್ತು ಮಕ್ಕಳು ರಕ್ಷಣೆಗೆ ಕೂಗಿಕೊಂಡಿದ್ದಾರೆ. ಕೂಡಲೆ ಸ್ಥಳೀಯರು ಧಾವಿಸಿದ್ದಾರೆ. ಆದರೆ ಭದ್ರಾ ನಾಲೆಯಲ್ಲಿ ಮೇಲ್ಮಟ್ಟದವರೆಗೆ ನೀರು ಹರಿಯುತ್ತಿದ್ದರಿಂದ ರಕ್ಷಣಾ ಕಾರ್ಯ ಸಾಧ್ಯವಾಗಲಿಲ್ಲ.
ಇಬ್ಬರ ಮೃತದೇಹ ಪತ್ತೆ
ವಿಚಾರ ತಿಳಿದು ಲಕ್ಕವಳ್ಳಿ ಠಾಣೆ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದರು. ಸೋಮವಾರ ಬೆಳಗ್ಗೆ ಅನನ್ಯಾಳ ಮೃತದೇಹ ಪತ್ತೆಯಾಗಿತ್ತು. ಇವರು ನೀರಿಗೆ ಬಿದ್ದ ಸುಮಾರು ನಾಲ್ಕು ಕಿ.ಮೀ ದೂರದರಲ್ಲಿ ರವಿಚಂದ್ರ ಅವರ ಮೃತದೇಹ ಸಿಕ್ಕಿದೆ. ಶಾಮವೇಣಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.
ಇದನ್ನೂ ಓದಿ – ಫಟಾಫಟ್ ನ್ಯೂಸ್ 8 AM – ಶಿವಮೊಗ್ಗ ಜಿಲ್ಲೆಯಲ್ಲಿ ಎಲ್ಲೆಲ್ಲಿ ಏನೇನಾಗಿದೆ? ಇಲ್ಲಿದೆ ಟಾಪ್ 10 ನ್ಯೂಸ್
ಸಂಭ್ರಮ ಇರಬೇಕಿದ್ದಲ್ಲಿ ಸೂತಕ
ಕುಟುಂಬದವರ ಮದುವೆ ಸಮಾರಂಭದ ಹಿನ್ನೆಲೆ ಅನನ್ಯಾ ಮತ್ತು ಶಾಮವೇಣಿ ಅವರು ಸೋದರ ರವಿಚಂದ್ರ ಅವರ ಮನೆಗೆ ಬಂದಿದ್ದರು. ಭಾನುವಾರ ಮಧ್ಯಾಹ್ನ ಎಲ್ಲರು ಒಟ್ಟಿಗೆ ಊಟ ಮಾಡಿದ್ದರು. ಸಂಜೆ ವಾಯು ವಿಹಾರಕ್ಕೆಂದು ಭದ್ರಾ ನಾಲೆ ಬಳಿ ಆಗಮಿಸಿದ್ದರು. ನಾಲೆಯ ಕಟ್ಟೆಯ ಮೇಲೆ ನಿಂತು ಎಲ್ಲರು ಫೋಟೊ ಕ್ಲಿಕ್ಕಿಸಿಕೊಂಡಿದ್ದರು. ಕೆಲವೇ ನಿಮಿಷದಲ್ಲಿ ವಿಧಿ ಕರಾಳ ರೂಪ ತಳೆದಿದೆ.
ಲಕ್ಕವಳ್ಳಿ ಠಾಣೆ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ಮುಂದುವರೆಸಿದ್ದಾರೆ.
WATCH VIDEO
ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200