ಶಿವಮೊಗ್ಗದ ನ್ಯಾಯಾಧೀಶರ ಹೆಸರಿನಲ್ಲಿ ನಕಲಿ ವಾಟ್ಸಾಪ್ ಖಾತೆ; ಹಣಕ್ಕೆ ಬೇಡಿಕೆ, ಆಗಿದ್ದೇನು?

ಶಿವಮೊಗ್ಗ: ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಹೆಸರು ಹಾಗೂ ಭಾವಚಿತ್ರ ದುರುಪಯೋಗ ಪಡಿಸಿಕೊಂಡು ಸೈಬರ್ ವಂಚಕರು ನಕಲಿ ವಾಟ್ಸಾಪ್ ಖಾತೆ ತೆರೆದು, ನ್ಯಾಯಾಲಯದ ಸಿಬ್ಬಂದಿ ಮತ್ತು ವಕೀಲರಿಗೆ ಹಣ ಕೋರಿ ಮೆಸೇಜ್‌ ಕಳುಹಿಸಿರುವ ಘಟನೆ ಬೆಳಕಿಗೆ ಬಂದಿದೆ.

ಮೇ 29ರಂದು ಈ ಘಟನೆ ನಡೆದಿದೆ. ವಿದೇಶಿ ಕೋಡ್ ಹೊಂದಿರುವ ಮೊಬೈಲ್ ಸಂಖ್ಯೆಯ ಮೂಲಕ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಂಜುನಾಥ್ ಜಿ.ಎ. ಅವರ ಹೆಸರು ಹಾಗೂ ಫೋಟೋ ಬಳಸಿ ನಕಲಿ ವಾಟ್ಸಾಪ್ ಪ್ರೊಫೈಲ್ ಸೃಷ್ಟಿಸಿದ್ದಾರೆ.

Shimogga-Cyber-Crime-CEN-Police-Station

₹50,000 ಹಣಕ್ಕೆ ಬೇಡಿಕೆ

ಆ ವಾಟ್ಸಪ್‌ ಮೂಲಕ ನ್ಯಾಯಾಲಯದ ಸಿಬ್ಬಂದಿ ಹಾಗೂ ವಕೀಲರಿಗೆ ಮೆಸೇಜ್‌ ರವಾನಿಸಿ, ತುರ್ತು ಅಗತ್ಯವಿದೆ ಎಂದು ತಿಳಿಸಿ, ಅದರಲ್ಲಿ ನಮೂದಿಸಲಾಗಿದ್ದ ಬ್ಯಾಂಕ್ ಖಾತೆಗೆ ₹50,000 ಹಣವನ್ನು ಕಳುಹಿಸುವಂತೆ ತಿಳಿಸಲಾಗಿತ್ತು. ಮೇ 30ರಂದು ಈ ವಿಷಯವು ಅಧಿಕಾರಿಗಳ ಗಮನಕ್ಕೆ ಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.  

ನ್ಯಾಯಾಲಯದ ಪ್ರಭಾರ ಮುಖ್ಯ ಆಡಳಿತಾಧಿಕಾರಿ ಶ್ರೀಲಕ್ಷ್ಮಿ ಜಿ.ಎಂ. ಅವರು ನೀಡಿದ ದೂರಿನ ಮೇರೆಗೆ ಶಿವಮೊಗ್ಗ ಸಿಇಎನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡ ತನಿಖೆ ನಡೆಸುತ್ತಿದ್ದಾರೆ.

Kalleshwara-Enterprises.webp

ಇಂತಹ ಪ್ರಕರಣ ಇದೇ ಮೊದಲಲ್ಲ

ಈ ಹಿಂದೆ ಶಿವಮೊಗ್ಗದ ಇಬ್ಬರು ಹಿರಿಯ ಅಧಿಕಾರಿಗಳ ಹೆಸರಿನಲ್ಲಿ ಇದೇ ಮಾದರಿ ನಕಲಿ ವಾಟ್ಸಪ್‌ ಪ್ರೊಫೈಲ್‌ ಸೃಷ್ಟಿಸಿ ಅಧಿಕಾರಿಗಳು, ಸಿಬ್ಬಂದಿಗೆ ಮೆಸೇಜ್‌ ಕಳುಹಿಸಲಾಗಿತ್ತು. ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಮತ್ತು ಮಹಾನಗರ ಪಾಲಿಕೆ ಕಮಿಷನರ್‌ ಮಾಯಣ್ಣಗೌಡ ಅವರ ಹೆಸರಿನಲ್ಲಿ ನಕಲಿ ವಾಟ್ಸಪ್‌ ಪ್ರೊಫೈಲ್‌ ಸೃಷ್ಟಿಸಿ ಮೆಸೇಜ್‌ ಮಾಡಲಾಗಿತ್ತು. ಇಬ್ಬರು ದೂರ ನೀಡಿದ್ದು ತನಿಖೆ ನಡೆಯುತ್ತಿದೆ.

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp