ಈಗ ಬಟ್ಟೆ ಒಗೆಯೋದು ಬಹಳ ಸುಲಭ, ಹೇಗದು? | ವಿಡಿಯೋಗಾಗಿ ಕ್ಲಿಕ್ ಮಾಡಿ
ಶಿವಮೊಗ್ಗ ಲೈವ್.ಕಾಂ | ANANDAPURA NEWS | 28 DECEMBER 2020
ಸ್ಥಳೀಯರ ಸಮಯ ಪ್ರಜ್ಞೆಯಿಂದಾಗಿ ಆನಂದಪುರದಲ್ಲಿ ಸಂಭವಿಸಬಹುದಾಗಿದ್ದ ಭಾರಿ ದುರಂತ ತಪ್ಪಿದೆ. ಗೋ ಶಾಲೆಗೆ ಹುಲ್ಲು ಸಾಗಿಸುತ್ತಿದ್ದ ಲಾರಿಗೆ ಬೆಂಕಿ ಹೊತ್ತಿಕೊಂಡು ಕೆಲಕಾಲ ಆತಂಕ ಸೃಷ್ಟಿಸಿತ್ತು.

ಏನಿದು ಘಟನೆ? ಹೇಗಾಯ್ತು?
ಆನಂದಪುರದ ಹಳೆ ಪೊಲೀಸ್ ಠಾಣೆ ಸಮೀಪದ ಗುಂಡಿ ಬೈಲು ರಸ್ತೆಯಲ್ಲಿ ಲಾರಿಗೆ ಹುಲ್ಲು ತುಂಬಿಕೊಂಡು ಬರಲಾಗುತ್ತಿತ್ತು. ಈ ವೇಳೆ ವೈರ್ ಶಾರ್ಟ್ ಸರ್ಕಿಟ್ನಿಂದಾಗಿ ಹುಲ್ಲಿನ ಲಾರಿಗೆ ಕಿಡಿ ಹಾರಿದೆ. ಇದರಿಂದ ಲಾರಿಯಲ್ಲಿ ಬೆಂಕಿ ಕಾಣಿಸಕೊಂಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಸಮಯಪ್ರಜ್ಞೆ ಮೆರೆದ ಯುವಕರು
ಬೆಂಕಿ ಕಾಣಿಸಕೊಂಡ ರಸ್ತೆ ಕಿರಿದಾಗಿದ್ದು, ಅಕ್ಕಪಕ್ಕದಲ್ಲಿ ಬಹಳ ಮನೆಗಳಿದ್ದವು. ಲಾರಿಯನ್ನು ಅದೇ ರಸ್ತೆಯಲ್ಲಿ ನಿಲ್ಲಿಸಿ, ಬೆಂಕಿ ನಂದಿಸಲು ಯತ್ನಿಸಿದರೆ ದೊಡ್ಡ ಅನಾಹುತ ಸಂಭವಿಸುತ್ತಿತ್ತು. ಹಾಗಾಗಿ ಕೂಡಲೆ ಎಚ್ಚೆತ್ತುಕೊಂಡ ಸ್ಥಳೀಯ ಯುವಕರು, ಲಾರಿಯನ್ನು ಬಯಲು ಪ್ರದೇಶಕ್ಕೆ ಚಲಾಯಿಸಿದ್ದಾರೆ.

ಜೀರೋ ಟ್ರಾಫಿಕ್ ಮಾಡಿಕೊಂಡರು
ಬೆಂಕಿ ಹೊತ್ತಿಕೊಂಡ ಲಾರಿಯನ್ನು ಗುಂಡಿ ಬೈಲು ರಸ್ತೆಯಿಂದ ಮುಖ್ಯ ರಸ್ತೆಗೆ ತರಲಾಯಿತು. ಈ ವೇಳೆ ಸ್ಥಳೀಯ ಯುವಕರ ತಂಡ, ಮುಖ್ಯ ರಸ್ತೆಯಲ್ಲಿ ಬರುತ್ತಿದ್ದ ವಾಹನಗಳನ್ನು ನಿಲ್ಲಿಸಿ, ಲಾರಿ ಸಾಗಲು ವ್ಯವಸ್ಥೆ ಮಾಡಿದರು. ಮೊದಲಿಗೆ ಬೈಕು, ಕಾರು ವಾಷಿಂಗ್ ಸೆಂಟರ್ಗೆ ಲಾರಿ ತರಲಾಯಿತು. ಆದರೆ ಅಲ್ಲಿ ನೀರಿನ ಅಭಾವ ಎದುರಾಗುವ ಸಂಭವವಿತ್ತು. ಆನಂದಪುರದ ಕೆರೆಗೆ ಲಾರಿಯನ್ನು ಇಳಿಸುವುದು ಕಷ್ಟವಾಗಿತ್ತು. ಹಾಗಾಗಿ ಆರ್.ಆರ್.ರೈಸ್ ಮಿಲ್ ಆವರಣಕ್ಕೆ ತರಲಾಯಿತು.
ಬಯಲು ಪ್ರದೇಶ, ನೀರಿನ ವ್ಯವಸ್ಥೆ
ಆರ್.ಆರ್.ರೈಸ್ ಮಿಲ್ ಆವರಣದಲ್ಲಿ ಬಯಲು ಪ್ರದೇಶವಿದೆ. ಜೊತೆಗೆ ಶುಂಠಿ ತೊಳೆಯಲು ನೀರಿನ ಪೈಪ್ಲೈನ್ ಕೂಡ ಇದೆ. ಹಾಗಾಗಿ ಅಲ್ಲಿ ಲಾರಿ ನಿಲ್ಲಿಸಿ, ಬೆಂಕಿ ನಂದಿಸುವ ಕಾರ್ಯ ನಡೆಸಲಾಯಿತು. ಸ್ಥಳೀಯರೊಬ್ಬರು ಜೆಸಿಬಿ ಬಳಿಸಿ, ಲಾರಿಯಿಂದ ಹುಲ್ಲನ್ನು ಅನ್ಲೋಡ್ ಮಾಡಿದರು.
ಫೈರ್ ಎಂಜಿನ್ ಬರೋದರಲ್ಲಿ ಎಲ್ಲಾ ಮುಗಿದಿತ್ತು
ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿ ವಿಚಾರ ತಿಳಿಸಿದ್ದರು. ಆದರೆ ಸಾಗರದಿಂದ ಫೈರ್ ಎಂಜಿನ್ಗಳು ಬರುವುದರಲ್ಲಿ, ಸ್ಥಳೀಯರೇ ಬೆಂಕಿ ನಂದಿಸಲು ಸಫಲರಾಗಿದ್ದರು. ಲಾರಿಗೆ ಸ್ವಲ್ಪ ಹಾನಿಯಾಗಿದೆ. ಉಳಿದಂತೆ ಬೇರಾವುದೇ ಸಮಸ್ಯೆ ಆಗಿಲ್ಲ ಎಂದು ಸ್ಥಳೀಯರು ಶಿವಮೊಗ್ಗ ಲೈವ್.ಕಾಂಗೆ ತಿಳಿಸಿದರು.
ಸ್ಥಳೀಯರ ಸಮಯಪ್ರಜ್ಞೆಯಿಂದಾಗಿ ಆನಂದಪುರದಲ್ಲಿ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com
