ಶಿವಮೊಗ್ಗ: ಕೆಲಸಕ್ಕೆಂದು ಬಂದಿದ್ದ ವ್ಯಕ್ತಿಯೊಬ್ಬ ನಂಬಿಸಿ ಬೈಕ್ ತೆಗೆದುಕೊಂಡು ಪರಾರಿಯಾಗಿರುವ ಘಟನೆ ನಗರದ ವಿದ್ಯಾನಗರದಲ್ಲಿ ನಡೆದಿದೆ.
ದುರ್ಗಮ್ಮ ಬೀದಿ ನಿವಾಸಿ ರಾಘವೇಂದ್ರ ಎಂಬುವರರ ಬೈಕ್ ಕಳೆದಿದೆ. ಜುಲೈ 10ರಂದು ಬೆಳಿಗ್ಗೆ ರಾಘವೇಂದ್ರ ಅವರು ಗಾರೆ ಕೆಲಸಕ್ಕೆಂದು ತಮ್ಮ ಹೀರೋ ಹೆಚ್.ಎಫ್ ಡಿಲಕ್ಸ್ ಬೈಕಿನಲ್ಲಿ ಹೊರಟಿದ್ದರು. ವಿದ್ಯಾನಗರದ ದುರ್ಗಾಂಬ ಬೀದಿ ಬಳಿ ಮೇಸ್ತ್ರಿ ಶಿವಣ್ಣ ಸಿಕ್ಕಿದ್ದು, ಅವರೊಂದಿಗೆ ಕೆಲಸಕ್ಕೆಂದು ಬಂದಿದ್ದ ಅಪರಿಚಿತ ವ್ಯಕ್ತಿಯೊಬ್ಬನಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮೇಸ್ತ್ರಿ ಶಿವಣ್ಣ ಸೂಚನೆಯಂತೆ, ಅಪರಿಚಿತ ವ್ಯಕ್ತಿಗೆ ರಾಘವೇಂದ್ರ ತಮ್ಮ ಬೈಕ್ ನೀಡಿ, ಸಹ ಕೆಲಸಗಾರ ನಾಗರಾಜ್ನನ್ನು ನವುಲೆಯ ಕೆಲಸದ ಸ್ಥಳಕ್ಕೆ ಕರೆದುಕೊಂಡು ಬರುವಂತೆ ತಿಳಿಸಿದ್ದರು. ಆದರೆ ನವುಲೆ ತಲುಪಿದಾಗ ನಾಗರಾಜ್ ಒಬ್ಬರೆ ಬಂದಿದ್ದು, ವಿಚಾರಿಸಿದಾಗ ಆ ವ್ಯಕ್ತಿಯು ಶೌಚಾಲಯಕ್ಕೆ ಹೋಗಿ ಬರುವುದಾಗಿ ಹೇಳಿ ಬೈಕ್ ತೆಗೆದುಕೊಂಡು ಹೋಗಿದ್ದಾನೆ ಎಂದು ತಿಳಿಸಿದರು. ಆದರೆ ಆತ ಮರಳಿ ಬರಲಿಲ್ಲ. ಮೇಸ್ತ್ರಿ ಶಿವಣ್ಣ ಅವರನ್ನು ವಿಚಾರಿಸಿದಾಗ ಆತನ ಹೆಸರು, ವಿಳಾಸ ಗೊತ್ತಿಲ್ಲ ಎಂದು ಹೇಳಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಘಟನೆ ಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.