ಶಿವಮೊಗ್ಗ: ಮೊಬೈಲ್ ಕಸಿದುಕೊಳ್ಳಲು ಯತ್ನಿಸಿದ ಇಬ್ಬರು ಅಪರಿಚಿತರು, ವ್ಯಕ್ತಿಯೊಬ್ಬರ ಮೇಲೆ ಲಾಂಗ್ ಹಾಗೂ ಚಾಕುವಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ವಿನೋಬನಗರದ ದೇವಾಂಗ ಹಾಸ್ಟೆಲ್ ಬಳಿ ಘಟನೆ ಸಂಭವಿಸಿದೆ.
ಪೇಂಟಿಂಗ್ ಕೆಲಸ ಮಾಡುವ ರವಿ (36) ಹಲ್ಲೆಗೊಳಗಾದವರು. ರವಿ ಅವರು ಶನಿವಾರ ರಾತ್ರಿ ದೇವಾಂಗ ಹಾಸ್ಟೆಲ್ ಪಕ್ಕದ ಖಾಲಿ ಜಾಗದಲ್ಲಿ ಕುಳಿತು ಮೊಬೈಲ್ ನೋಡುತ್ತಿದ್ದರು. ಈ ವೇಳೆ ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತರು, ಅವಾಚ್ಯ ಶಬ್ದಗಳಿಂದ ನಿಂದಿಸಿ ರವಿ ಅವರ ಕೈಯಲ್ಲಿದ್ದ ಮೊಬೈಲ್ ಕಸಿದುಕೊಳ್ಳಲು ಯತ್ನಿಸಿದ್ದಾರೆ. ಇದಕ್ಕೆ ರವಿ ಪ್ರತಿರೋಧ ಒಡ್ಡಿದಾಗ ಕೆರಳಿದ ದುಷ್ಕರ್ಮಿಗಳು, ಕೊಲೆ ಮಾಡುವ ಉದ್ದೇಶದಿಂದ ಲಾಂಗ್ ಮತ್ತು ಚಾಕುವಿನಿಂದ ಇರಿದಿದ್ದಾರೆ ಎಂದು ಆರೋಪಿಸಲಾಗಿದೆ.

ದಾಳಿಯಿಂದಾಗಿ ರವಿ ಅವರ ತಲೆಯ ಹಿಂಭಾಗ, ಎಡಗಣ್ಣಿನ ಮೇಲ್ಭಾಗ, ಮೂಗು, ಬಲಗಾಲು, ಎಡಗೈ ಬೆರಳುಗಳು ಹಾಗೂ ಎಡ ಪಕ್ಕೆಗೆ ಗಂಭೀರ ಗಾಯಗಳಾಗಿವೆ. ರಸ್ತೆ ಬದಿಯಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದ ರವಿ ಅವರನ್ನು ಸ್ಥಳೀಯರು ತಕ್ಷಣವೇ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದರು. ಘಟನೆ ಸಂಬಂಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.