ನವದೆಹಲಿ: ಅಡಿಕೆಯ ಅಕ್ರಮ ಆಮದು ತಡೆದು ಕರ್ನಾಟಕದ ಅಡಿಕೆ ಬೆಳೆಗಾರರ ಹಿತ ರಕ್ಷಿಸಬೇಕು ಎಂದು ಒತ್ತಾಯಿಸಿ ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಅವರಿಗೆ ಬಿಜೆಪಿ ಸಂಸದರು ಹಾಗೂ ಕ್ಯಾಂಪ್ಕೊ ನಿಯೋಗ ಮನವಿ ಮಾಡಿತು.➤ ಸುದ್ದಿಯ ಮುಂದಿನ 6 ಪ್ಯಾರಾಗಳು ಕೆಳಗಿವೆ.
ಶಾಸಕ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ, ಸಂಸದರಾದ ಬಿ.ವೈ. ರಾಘವೇಂದ್ರ, ಕೋಟ ಶ್ರೀನಿವಾಸ ಪೂಜಾರಿ, ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಕ್ಯಾಂಪ್ಕೊ ಅಧ್ಯಕ್ಷ ಸತೀಶ್ ಚಂದ್ರ ಅವರನ್ನು ಒಳಗೊಂಡ ನಿಯೋಗವು ಇಲ್ಲಿ ಮನವಿ ಸಲ್ಲಿಸಿತು.

##ನಿಯೋಗದ ಬೇಡಿಕೆಗಳೇನು?

ಬೆಳೆ ರೋಗಗಳು, ಹೆಚ್ಚುತ್ತಿರುವ ವೆಚ್ಚ, ಕುಸಿಯುತ್ತಿರುವ ಉತ್ಪಾದಕತೆ ಸೇರಿ ಹಲವು ಸವಾಲುಗಳನ್ನು ಎದುರಿಸುತ್ತಿರುವ ರೈತರು, ಅಕ್ರಮ ವ್ಯಾಪಾರದಿಂದ ಇನ್ನಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕೇಂದ್ರ ಸರ್ಕಾರ ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳಬೇಕು.

ವಿದೇಶ ಮೂಲದ ಅಡಿಕೆಯನ್ನು ಗಡಿ, ಬಂದರುಗಳು ಮತ್ತು ಇತರ ಮಾರ್ಗಗಳ ಮೂಲಕ ಅಕ್ರಮವಾಗಿ ಸಾಗಿಸುವ ಬಗ್ಗೆ ಹಾಗೂ ಆಮದು ವರ್ಗೀಕರಣಗಳು ಮತ್ತು ವ್ಯಾಪಾರ ದಾಖಲಾತಿಗಳ ಸಂಭಾವ್ಯ ದುರುಪಯೋಗದ ಬಗ್ಗೆ ನಿಯೋಗವು ಗೃಹ ಸಚಿವರ ಗಮನ ಸೆಳೆಯಿತು.

ಪ್ರತಿ ಕೆಜಿಗೆ ಕನಿಷ್ಠ ಆಮದು ಬೆಲೆಯ ಕಟ್ಟುನಿಟ್ಟಾದ ಜಾರಿ ಮತ್ತು ಅಡಿಕೆ ಯಾವ ದೇಶದಿಂದ ಬರುತ್ತದೆ, ಅದರ ಘೋಷಿತ ಮೌಲ್ಯ ಮತ್ತಿತರ ವಿಷಯಗಳನ್ನು ಕಟ್ಟುನಿಟ್ಟಾಗಿ ಪರಿಶೀಲನೆ ಮಾಡಬೇಕು ಎಂದು ನಿಯೋಗದ ಸದಸ್ಯರು ಒತ್ತಾಯಿಸಿದರು.
ನಿಯೋಗವು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಅಡಿಕೆ ರೋಗ ನಿಯಂತ್ರಕ ಮೈಲುತುತ್ತಿನ ಜಿಎಸ್ಟಿಯನ್ನು ಶೇ.5ಕ್ಕೆ ಇಳಿಕೆ ಮಾಡಬೇಕು ಎಂದು ಒತ್ತಾಯಿಸಿತು.