ಶಿವಮೊಗ್ಗದ ವಿದ್ಯಾರ್ಥಿನಿ ರಾಜ್ಯಕ್ಕೆ ಫಸ್ಟ್‌, ತಾಯಿಯಂತೆ ರ‍್ಯಾಂಕ್ ಗಳಿಸಿದ ಮಾಜಿ MLA ಮೊಮ್ಮಗಳು

Published On : ಫೆಬ್ರವರಿ 10, 2026

Published By : ನಿತಿನ್‌ ಆರ್‌.ಕೈದೊಟ್ಲು 

ಶಿವಮೊಗ್ಗ: ಜೆ.ಎನ್.ಎನ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ಪಾರ್ವತಿ ಸಾಲೇರ ಅವರು ಎಂಬಿಎ ವಿಭಾಗದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ರಾಜ್ಯಕ್ಕೆ ಪ್ರಥಮ (First Rank) ರ‍್ಯಾಂಕ್ ಪಡೆದು ನಾಲ್ಕು ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಮತ್ತೋರ್ವ ವಿದ್ಯಾರ್ಥಿ ಸಂಜಯ್ ಎಂ.ವಿ ಅವರು ಎಂಟೆಕ್ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ರಾಜ್ಯಕ್ಕೆ ಎಂಟನೇ ರ‍್ಯಾಂಕ್ ಗಳಿಸಿದ್ದಾರೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್. ನಾರಾಯಣರಾವ್ ಅವರು ಸಂತಸ ವ್ಯಕ್ತಪಡಿಸಿದರು.

ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವತಿಯಿಂದ ಬೆಳಗಾವಿಯಲ್ಲಿ ಆಯೋಜಿಸಿದ್ದ 25ನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರು ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರ ಮತ್ತು ಬಂಗಾರದ ಪದಕ ನೀಡಿ ಅಭಿನಂದಿಸಿದ್ದಾರೆ ಎಂದು ತಿಳಿಸಿದರು.

ಈ ಮೊದಲು ಚಿನ್ನದ ಪದಕ ಪಡೆದಿದ್ದರು

Gold-Medal-for-JNNCE-MBA-student-Parvathi-Salera

ಜೆ.ಎನ್.ಎನ್.ಸಿ.ಇ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಪದವಿ ಪಡೆಯುವ ವೇಳೆಯು ಪಾರ್ವತಿ ಸಾಲೇರ ಅವರು ಆರು ಚಿನ್ನದ ಪದಕಗಳನ್ನು ಪಡೆದಿದ್ದರು. ಇದೀಗ ಎಂಬಿಎ ಸ್ನಾತಕೋತ್ತರ ಪದವಿಯಲ್ಲಿ ಅಭೂತಪೂರ್ವ ಸಾಧನೆ ಮಾಡಿದ್ದಾರೆ. ಇವರು ಭದ್ರಾವತಿ ಕ್ಷೇತ್ರದ ಶಾಸಕರಾಗಿದ್ದ ಸಾಲೇರ ಸಿದ್ದಪ್ಪ ಅವರ ಮೊಮ್ಮಗಳು.

ಅವರ ತಾಯಿ ಐಶ್ವರ್ಯ ಸಾಲೇರ ಕೂಡ ಜೆ.ಎನ್.ಎನ್.ಸಿ.ಇ ಹಿರಿಯ ವಿದ್ಯಾರ್ಥಿಯಾಗಿದ್ದು ಎಲೆಕ್ಟ್ರಾನಿಕ್ ಅಂಡ್ ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದಲ್ಲಿ ರಾಜ್ಯಕ್ಕೆ ಐದನೇ ರ‍್ಯಾಂಕ್ ಪಡೆದಿದ್ದರು ಎಂದು ವಿವರಿಸಿದರು.

ಎನ್ಇಎಸ್ ಚಿನ್ನದ ಪದಕದ ಗರಿ

ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಪಡೆದ ಪಾರ್ವತಿ ಸಾಲೇರ ಅವರಿಗೆ ಸಂಸ್ಥೆಯ ಅಮೃತಮಹೋತ್ಸವದ ಸ್ಮರಣಾರ್ಥವಾಗಿ, ಎನ್ಇಎಸ್ ಅಮೃತಮಹೋತ್ಸವ ಚಿನ್ನದ ಪದಕ ನೀಡಲಾಗುವುದು ಎಂದು ಜಿ.ಎಸ್.ನಾರಾಯಣ ರಾವ್ ಘೋಷಿಸಿದರು. ಫೆಬ್ರವರಿ ಕೊನೆಯ ವಾರದಲ್ಲಿ‌ ನಡೆಯುವ ಐಡಿಯಾ ಲ್ಯಾಬ್ ಉದ್ಘಾಟನಾ ಸಮಾರಂಭದಲ್ಲಿ ರ‍್ಯಾಂಕ್ ವಿಜೇತರನ್ನು ಆಡಳಿತ ಮಂಡಳಿಯಿಂದ ಅಭಿನಂದಿಸಲಾಗುವುದು ಎಂದು ತಿಳಿಸಿದರು.  

JNNCE-college-Engineering-Shimoga

ಎನ್ಇಎಸ್ ಅಮೃತಮಹೋತ್ಸವ ಅಂಗವಾಗಿ, ವಿವಿಧ ವಿದ್ಯಾಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಯಾವುದೇ ವಿಭಾಗದ ವಿದ್ಯಾರ್ಥಿಗಳು, ವಿಶ್ವವಿದ್ಯಾಲಯ ಮಟ್ಟದಲ್ಲಿ ಮೊದಲ ರ‍್ಯಾಂಕ್ ಪಡೆದರೆ ಚಿನ್ನದ ಪದಕ ನೀಡಿ ಗೌರವಿಸಲಾಗುತ್ತಿದೆ ಎಂದು ತಿಳಿಸಿದರು.

ಇದನ್ನೂ ಓದಿ – ರಾಜ್ಯವನ್ನೇ ಬೆಚ್ಚಿಬೀಳಿಸಿದ ಶಿವಮೊಗ್ಗದ ಡ್ರೈವರ್‌, 19 ಅಕೌಂಟ್, 25 ATM ಕಾರ್ಡ್‌, ₹55 ಕೋಟಿ ನಷ್ಟ, ಏನಿದು ಕೇಸ್?

ವಿದ್ಯಾಸಂಸ್ಥೆಗೆ ಅಭಾರಿ

ರ‍್ಯಾಂಕ್ ವಿಜೇತ ವಿದ್ಯಾರ್ಥಿನಿ ಪಾರ್ವತಿ ಸಾಲೇರ ಮಾತನಾಡಿ, ಬಿಇ ಮತ್ತು ಎಂಬಿಎನಲ್ಲಿ ಮೊದಲ ರ‍್ಯಾಂಕ್ ಪಡೆಯಲು ಕಾಲೇಜು ಮತ್ತು ಉಪನ್ಯಾಸಕರಿಂದ ಪೂರಕ ವಾತಾವರಣವಿತ್ತು. ಅದಕ್ಕಾಗಿ ವಿದ್ಯಾಸಂಸ್ಥೆಗೆ ಅಭಾರಿಯಾಗಿದ್ದೇನೆ. ಈಗಾಗಲೇ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಕಂಪನಿಯಲ್ಲಿ ಪ್ರಮುಖ ಹುದ್ದೆಯ ಅವಕಾಶ ದೊರೆತಿದ್ದು, ಇನ್ನಷ್ಟು ಉನ್ನತ ಹೆಜ್ಜೆಗಳ ಕುರಿತಾಗಿ ಯೋಜಿಸಲಿದ್ದೇನೆ ಎಂದರು.

gold%20medal
ಕಾಲೇಜಿನಲ್ಲಿ ನಾವೀನ್ಯತೆ ಹಾಗೂ ಸಂಶೋಧನಾ ಚಟುವಟಿಕೆಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. 2025ರಲ್ಲಿ ವಿವಿಧ ವಿಭಾಗಗಳ ಸುಮಾರು 14 ಉಪನ್ಯಾಸಕರು ಪಿಎಚ್.ಡಿ ಪದವಿ ಪಡೆದಿದ್ದು, ಇತ್ತೀಚೆಗೆ ನಡೆದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಪ್ರಮಾಣ ಪತ್ರ ಪಡೆದಿದ್ದಾರೆ. ಪ್ಲೇಸ್ಮೆಂಟ್ ಚಟುವಟಿಕೆಗಳು ವಿದ್ಯಾಸಂಸ್ಥೆಯಲ್ಲಿ ಸಕ್ರಿಯವಾಗಿ ನಡೆಯುತ್ತಿದೆ. ಎಸ್.ಎನ್. ನಾಗರಾಜ, ಎನ್‌ಇಎಸ್‌ ಕಾರ್ಯದರ್ಶಿ
ನ್ಯೂಜೆನ್ ಐಇಡಿಸಿ ಮೂಲಕ ಕೇಂದ್ರ ಸರ್ಕಾರದ ಆರ್ಥಿಕ ಸಹಕಾರದೊಂದಿಗೆ, ವಿದ್ಯಾರ್ಥಿಗಳ ನಾವೀನ್ಯಯುತ ಯೋಚನೆಗಳನ್ನು, ಯೋಜನೆಯಾಗಿ ರೂಪಿಸಿ ಸ್ವಂತ ಕಂಪನಿಗಳನ್ನು ಸ್ಥಾಪಿಸುವಂತೆ ಪ್ರೇರಣೆ ನೀಡುವಂತಹ ಪೂರಕ ವೇದಿಕೆ ನೀಡುವಲ್ಲಿ ಕಾಲೇಜು ಕ್ರಿಯಾಶೀಲವಾಗಿದೆ.ಡಾ.ವೈ.ವಿಜಯಕುಮಾರ್, ಕಾಲೇಜಿನ ಪ್ರಾಂಶುಪಾಲರು

ಎನ್ಇಎಸ್ ಸಹಕಾರ್ಯದರ್ಶಿ ಡಾ.ಪಿ.ನಾರಾಯಣ್, ಸಂಶೋಧನಾ ಡೀನ್ ಡಾ.ಎಸ್. ವಿ.ಸತ್ಯನಾರಾಯಣ, ಎಂಬಿಎ ವಿಭಾಗದ ಮುಖ್ಯಸ್ಥರಾದ ಡಾ.ಶ್ರೀಕಾಂತ್, ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ.ಜಲೇಶ್ ಕುಮಾರ್, ಪೋಷಕರಾದ ಜ್ಯೋತಿ ಸಾಲೇರ, ಐಶ್ವರ್ಯ ಸಾಲೇರ, ಸಾರ್ವಜನಿಕ ಸಂಪರ್ಕಾಧಿಕಾರಿ ಸಿ.ಎಂ.ನೃಪತುಂಗ, ಸುಭದ್ರ, ಸಂತೋಷ್ ಶಾನಭಾಗ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : ಫೆಬ್ರವರಿ 10, 2026

Leave a Comment