ಶಿವಮೊಗ್ಗ: ಬೆಂಗಳೂರು – ಶಿವಮೊಗ್ಗ ಮಧ್ಯೆ ನಿತ್ಯ ಹಾರಾಟ ನಡೆಸುತ್ತಿದ್ದ ಇಂಡಿಗೋ ವಿಮಾನ ಇಂದಿನಿಂದ ಸೇವೆ (daily flight) ಸ್ಥಗಿತಗೊಳಿಸಲಿದೆ. ಇದರಿಂದ ಮಲೆನಾಡು ಮತ್ತು ಬೆಂಗಳೂರು ನಡುವಿನ ವೈಮಾನಿಕ ಸಂಪರ್ಕ ಕಡಿತವಾಗಿದೆ.
ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮೊದಲು ಆಗಮಿಸಿ, ಸೇವೆ ಆರಂಭಿಸಿದ್ದ ವಿಮಾನಯಾನ ಸಂಸ್ಥೆ ಇಂಡಿಗೋ. ಇದೇ ವಿಮಾನಯಾನ ಸಂಸ್ಥೆ ಈಗ ತನ್ನ ಸೇವೆ ನಿಲ್ಲಿಸಿದೆ.
ಸೇವೆ ಸ್ಥಗಿತ ಯಾಕೆ? ಇಲ್ಲಿದೆ ಪ್ರಮುಖ ಪಾಯಿಂಟ್ಸ್

2023ರ ಫೆಬ್ರವರಿ 27ರಂದು ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಯಾಯಿತು. ಆದರೆ ನಾಗರಿಕ ವಿಮಾನ ಸೇವೆ ಆರಂಭವಾಗಿದ್ದು ಆಗಸ್ಟ್ ತಿಂಗಳಲ್ಲಿ. ಆ.31ರಿಂದ ಬೆಂಗಳೂರು – ಶಿವಮೊಗ್ಗ ಇಂಡಿಗೋ ವಿಮಾಯಾನ ಸೇವೆ ಶುರುವಾಯಿತು. ಅಂದು ಬೆಳಗ್ಗೆ 9:50ಕ್ಕೆ ಬೆಂಗಳೂರಿನಿಂದ ಹೊರಟ ವಿಮಾನ ಶಿವಮೊಗ್ಗದಲ್ಲಿ ಲ್ಯಾಂಡ್ ಆಯಿತು. ಮೊದಲ ವಿಮಾನಕ್ಕೆ ವಾಟರ್ ಸಲ್ಯೂಟ್ ನೀಡಲಾಗಿತ್ತು. ಈ ಬೆಳವಣಿಗೆ ಕಂಡು ಶಿವಮೊಗ್ಗದ ಜನ ಪುಳಕಿತರಾಗಿದ್ದರು.


ಇಂಡಿಗೋ ವಿಮಾನಯಾನ ಸಂಸ್ಥೆಯ ಎಟಿಆರ್ ಮಾದರಿಯ ವಿಮಾನ ಶಿವಮೊಗ್ಗ – ಬೆಂಗಳೂರು ಮಧ್ಯೆ ನಿತ್ಯ ಹಾರಾಟ ಮಾಡುತ್ತಿತ್ತು. 72 ಸೀಟುಗಳಿದ್ದ ವಿಮಾನ ಇದು. ಪ್ರತಿ ದಿನವು ಈ ವಿಮಾನ ಬಹುತೇಕ ಭರ್ತಿಯಾಗಿಯೇ ತೆರಳುತ್ತಿತ್ತು. ಶಿವಮೊಗ್ಗ ವಿಮಾನ ನಿಲ್ದಾಣದ ಮಟ್ಟಿಗೆ ಈ ವಿಮಾನ ಅತಿ ಹೆಚ್ಚು ಪ್ರಯಾಣಿಕರು ಸಂಚರಿಸುವ ವಿಮಾನವಾಗಿತ್ತು.

2026ರ ಮೇ 1 ರಿಂದ ಶಿವಮೊಗ್ಗ – ಬೆಂಗಳೂರು ನಡುವೆ ವಿಮಾನಯಾನ ಸೇವೆ ಸ್ಥಗಿತಗೊಳಿಸಲು ಇಂಡಿಗೋ ಸಂಸ್ಥೆ ನಿರ್ಧರಿಸಿತ್ತು. ಟಿಕೆಟ್ ಬುಕಿಂಗ್ ಪ್ರಕ್ರಿಯೆ ನಿಲ್ಲಿಸಲಾಗಿತ್ತು. ಅದರಂತೆ ಇಂದಿನಿಂದ ಇಂಡಿಗೋ ವಿಮಾನ ಹಾರಾಟ ಬಂದ್ ಆಗಿದೆ.

ಇಂಡಿಗೋ ನಿರ್ಧಾರಕ್ಕೆ ಕಾರಣವೇನು?
ಕಾರಣ 1 : ಪ್ರಯಾಣಿಕರ ಸುರಕ್ಷತೆಗೆ ಕಠಿಣ ಕ್ರಮ
ಅಹಮದಾಬಾದ್ನಲ್ಲಿ ನಡೆದಿದ್ದ ಏರ್ ಇಂಡಿಯಾ ವಿಮಾನ ದುರಂತ ದೇಶದಲ್ಲಿ ಆತಂಕ ಮೂಡಿಸಿತ್ತು. ಇದರ ಬೆನ್ನಿಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ, ಹಾರಾಟ ಕರ್ತವ್ಯ ಸಮಯ ಮಿತಿ ನಿಯಮಗಳನ್ನು ಬಿಗಿಗೊಳಿಸಿತು. ಪ್ರತಿ ಪೈಲೆಟ್ ನಿತ್ಯ 6 ಗಂಟೆ ಮಾತ್ರ ವಿಮಾನ ಹಾರಾಟ ನಡೆಸಬೇಕು ಸೇರಿ ಹಲವು ಕಠಿಣ ನಿಯಮ ಜಾರಿಗೊಳಿಸಿದೆ. ಇದರಿಂದ ಇಂಡಿಗೋ ಸಂಸ್ಥೆಯಲ್ಲಿ ಪೈಲೆಟ್ಗಳ ಕೊರತೆ ಎದುರಾಗಿದೆ.
ಕಾರಣ 2 : ಇಂಧನ ದರ ದುಬಾರಿ
ಮಧ್ಯಪ್ರಾಚ್ಯ ಯುದ್ದದ ಹಿನ್ನೆಲೆ ಇಂಧನ ದರ ಏರಿಕೆಯಾಗಿದೆ. ವೈಮಾನಿಕ ಇಂಧನದ ಬೆಲೆ ಗಗನಕ್ಕೇರಿದೆ. ಭಾರತದ ಜನಪ್ರಿಯ ವಿಮಾನಯಾನ ಸಂಸ್ಥೆ ಇಂಡಿಗೋ ಏರ್ಲೈನ್ಸ್ಗೆ ಇದರಿಂದ ಭಾರಿ ಪೆಟ್ಟು ಬಿದ್ದಿದೆ.

ಕಾರಣ 3 : VGF ಒಪ್ಪಂದ ಮುಕ್ತಾಯ
ಬೆಂಗಳೂರು – ಶಿವಮೊಗ್ಗ ಮಾರ್ಗವು ಉಡಾನ್ ಯೋಜನೆ ವ್ಯಾಪ್ತಿಗೆ ಒಳಪಡುವುದಿಲ್ಲ. ಹಾಗಾಗಿ ರಾಜ್ಯ ಸರ್ಕಾರವೆ ವಯೋಬಲಿಟಿ ಗ್ಯಾಪ್ ಫಂಡಿಂಗ್ (VGF) ಒಪ್ಪಂದದ ಮೂಲಕ ನೆರವು ನೀಡುತ್ತಿತ್ತು. ಪ್ರತಿ ಟಿಕೆಟ್ಗೆ ₹500 ಸಹಾಯಧನವನ್ನು ರಾಜ್ಯ ಸರ್ಕಾರ ಒದಗಿಸುತ್ತಿತ್ತು. ಈ ಒಪ್ಪಂದವು 2025ರ ಆಗಸ್ಟ್ನಲ್ಲಿ ಮುಕ್ತಾಯಗೊಂಡಿತ್ತು. ಇದರಿಂದ ಇಂಡಿಗೋ ಸಂಸ್ಥೆಗೆ ನಷ್ಟವಾಗಿತ್ತು. ಆದರು 2026ರ ಏಪ್ರಿಲ್ 30ರವರೆಗೆ ಸೇವೆ ಮುಂದುವರೆದಿತ್ತು.

ಮತ್ತೆ ಶುರುವಾಗುತ್ತಾ ಇಂಡಿಗೋ ಸೇವೆ?
ಬೆಂಗಳೂರು – ಶಿವಮೊಗ್ಗ – ಬೆಂಗಳೂರು ಮಾರ್ಗದ ರದ್ದತಿ ತಾತ್ಕಾಲಿಕ ಎಂದು ಇಂಡಿಗೋ ಸಂಸ್ಥೆ ಸಿಬ್ಬಂದಿ ಹೇಳುತ್ತಿದ್ದಾರೆ. ಆದರೆ ಸಮಸ್ಯೆಗಳೆಲ್ಲ ಪರಿಹಾರವಾಗಿ ಸೇವೆ ಪುನಾರಂಭ ಆಗುವುದಕ್ಕೆ ಯಾವುದೇ ಕಾಲಮಿತಿ ಘೋಷಣೆ ಆಗಿಲ್ಲ. ಇದರ ಬೆನ್ನಿಗೆ ಇತರೆ ವಿಮಾನಯಾನ ಸಂಸ್ಥೆಗಳ ಜೊತೆಗೆ ಚರ್ಚೆ ಆರಂಭವಾಗಿದೆ.
ಇಂಡಿಗೋ ವಿಮಾನ ಸೇವೆ ಸ್ಥಗಿತ ತಾತ್ಕಲಿಕವಾದದ್ದು. ಈ ಸಂಬಂಧ ರಾಜ್ಯದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರೊಂದಿಗೆ ಮಾತುಕತೆ ನಡೆಸಿದೆ. ಅವರು ಕೂಡ ವಿಮಾನ ಸೇವೆಗಳ ಪುನಾರಂಭಕ್ಕೆ ಪರ್ಯಾಯ ಮಾರ್ಗ ಹುಡುಕುವ ಭರವಸೆ ನೀಡಿದ್ದಾರೆ.
– ಬಿ.ವೈ.ರಾಘವೇಂದ್ರ, ಶಿವಮೊಗ್ಗ ಸಂಸದ
ಶಿವಮೊಗ್ಗ ವಿಮಾನ ನಿಲ್ದಾಣವು ಮಧ್ಯ ಕರ್ನಾಟಕ ಭಾಗದ ಪ್ರಮುಖ ವಿಮಾನ ನಿಲ್ದಾಣವಾಗಿ ಬೆಳೆದಿದೆ. ಇಲ್ಲಿಂದ ಚೆನ್ನೈ, ಹೈದರಾಬಾದ್, ತಿರುಪತಿ, ಗೋವಾಗೆ ಸಂಪರ್ಕ ಕಲ್ಪಿಸಲಾಗಿದೆ. ಪ್ರಯಾಣಿಕರ ಸಂಖ್ಯೆ ದಿನೇ ದಿನೆ ಹೆಚ್ಚಳವಾಗುತ್ತಿದೆ. ಇನ್ನಷ್ಟು ಪ್ರಮುಖ ಸ್ಥಳಗಳಿಗೆ ವಿಮಾನಯಾನ ಆರಂಭವಾಗುವ ನಿರೀಕ್ಷೆ ಇತ್ತು. ಆದರೆ ಈಗ ಜನಪ್ರಿಯ ಮಾರ್ಗವಾಗಿದ್ದ ಬೆಂಗಳೂರಿಗೆ ವಿಮಾನಯಾನ ಸೇವೆ ಸ್ಥಗಿತವಾಗಿರುವುದು ಚರ್ಚೆಗೆ ಕಾರಣವಾಗಿದೆ.
ಇದನ್ನೂ ಓದಿ : ಶಿವಮೊಗ್ಗ ವಿಮಾನ ನಿಲ್ದಾಣ ಕೇಂದ್ರಕ್ಕೆ ಹಸ್ತಾಂತರ ಆಗುತ್ತಾ? ಖಾಸಗಿ ನಿರ್ವಾಹಣೆಗೆ ವಹಿಸಲಾಗುತ್ತಾ?
shivamogga airport news, indigo flights cancelled shivamogga, shivamogga to bengaluru flight update, vgf funding karnataka, b y raghavendra, shivamogga airport connectivity, indigo airlines karnataka, shivamoggalive news







