ಶಿವಮೊಗ್ಗ: ಜಿಲ್ಲೆಯಲ್ಲಿ ಮುಂಗಾರು ಮಳೆ ಆರಂಭಿಕ ಆರ್ಭಟ ಶುರುವಾಗಿದೆ. ತೀರ್ಥಹಳ್ಳಿ, ಹೊಸನಗರ ಹಾಗೂ ಸಾಗರ ತಾಲೂಕುಗಳಲ್ಲಿ ಇಂದಿನಿಂದ ಭಾರಿ ಮಳೆಯಾಗುತ್ತಿದೆ. ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದ ಗಡಿಭಾಗಕ್ಕೆ ಹೊಂದಿಕೊಂಡಿರುವ ಮಲೆನಾಡಿನ ಈ ತಾಲೂಕುಗಳಲ್ಲಿ ಇಂದು ಮುಂಜಾನೆಯಿಂದಲೇ ನಿರಂತರವಾಗಿ ಜಿಟಿಜಿಟಿ ಹಾಗೂ ಬಿರುಸಿನ ಮಳೆ ಸುರಿಯುತ್ತಿದೆ.
ಭಾರಿ ಮಳೆಯ ಮುನ್ಸೂಚನೆ
ಸಾಗರ ತಾಲೂಕಿನ ಸಿರಿವಂತೆ ಗ್ರಾಮದ ವ್ಯಾಪ್ತಿಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜೂನ್ 8ರ ಬೆಳಗ್ಗೆ 8:30 ರಿಂದ ಜೂನ್ 9ರ ಬೆಳಗ್ಗೆ 8:30ರ ವರೆಗಿನ 24 ಗಂಟೆಗಳ ಅವಧಿಯಲ್ಲಿ ಇಲ್ಲಿ ಅಂದಾಜು 57 ಮಿ.ಮೀ ನಷ್ಟು ದಾಖಲೆ ಮಳೆಯಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಹೆಗ್ಗೋಡು, ಕಾಂಡಿಕೆ, ಕಾನ್ಲೆ ಹಾಗೂ ದೂಗೂರು ಭಾಗಗಳಲ್ಲೂ ಕರಾವಳಿ ಮಾರುತಗಳ ಪ್ರಭಾವದಿಂದಾಗಿ ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.

ಶಿವಮೊಗ್ಗ ಜಿಲ್ಲೆಗೆ ಆರೆಂಜ್ ಅಲರ್ಟ್
ಶಿವಮೊಗ್ಗದ ನೆರೆ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಭಾರಿ ಮಳೆಯಾಗುತ್ತಿದೆ. ಅಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಉತ್ತರ ಕನ್ನಡದಲ್ಲೂ ಶಿವಮೊಗ್ಗದಂತೆಯೇ ಆರೆಂಜ್ ಅಲರ್ಟ್ ಜಾರಿಯಲ್ಲಿದೆ.

ಶಿವಮೊಗ್ಗ ಸಿಟಿಯಲ್ಲಿ ಹೇಗಿದೆ ಸ್ಥಿತಿ?
ಶಿವಮೊಗ್ಗ ನಗರದಲ್ಲಿಯು ಮಳೆ ಆರಂಭವಾಗಿದೆ. ಬೆಳಗ್ಗೆಯಿಂದ ಶಿವಮೊಗ್ಗದಲ್ಲಿ ಮೋಡ ಕವಿದ ವಾತಾವರಣ ಇತ್ತು. ನಂತರ ಬಿಸಿಲು ಕಾಣಿಸಿಕೊಂಡಿತ್ತು. ಮಧ್ಯಾಹ್ನದ ವೇಳಗೆ ಶಿವಮೊಗ್ಗ ಸಿಟಿಯಲ್ಲಿಯು ಮಳೆ ಆರಂಭವಾಗಿದೆ. ನಗರದಲ್ಲಿ ಮಳೆ ಮತ್ತಷ್ಟು ಬಿರುಸುಗೊಳ್ಳುವ ಸಾಧ್ಯತೆ ಇದೆ.