ಶಿವಮೊಗ್ಗ: ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಮೂಲ ಸೌಕರ್ಯ ಒದಗಿಸುವ ಉದ್ದೇಶದೊಂದಿಗೆ ರಾಜ್ಯದ ಪ್ರತಿ ಮಹಾನಗರ ಪಾಲಿಕೆಗಳ ಅಭಿವೃದ್ಧಿ ಯೋಜನೆಗಳಿಗೆ (development projects) ನಗರಾಭಿವೃದ್ಧಿ ಇಲಾಖೆಯು ₹200 ಕೋಟಿ ಮಂಜೂರು ಮಾಡಿದೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ತಿಳಿಸಿದರು.
ಬೊಮ್ಮನಕಟ್ಟೆ ‘ಬಿ’ ಬ್ಲಾಕ್ನಲ್ಲಿ ಇಂದು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಚಿವ ಭೈರತಿ ಸುರೇಶ್ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು

20 ತಿಂಗಳ ಗಡುವು
ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆ (ಹಂತ-2) ಅಡಿಯಲ್ಲಿ ₹127.5 ಕೋಟಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಮುಂದಿನ 20 ತಿಂಗಳೊಳಗೆ ಈ ಕೆಲಸ ಪೂರ್ಣಗೊಳಿಸಲು ಸಚಿವರು ಸೂಚಿಸಿದ್ದಾರೆ.


ಅಂದಿನ ಅಹಿಂದ ಪರವಾದ ನಾಯಕ ಬಂಗಾರಪ್ಪ ಅವರನ್ನು ನೋಡಿ ಬೆಳೆದ ನಮಗೆಲ್ಲ ಅವರು ಆದರ್ಶ ವ್ಯಕ್ತಿ. ಅವರ ಕಾರ್ಯಕ್ರಮ ನೋಡಿಯೇ ರಾಜಕಾರಣಕ್ಕೆ ಪ್ರವೇಶಿಸಿದ್ದೇನೆ. ಅವರು ಹಾಕಿಕೊಟ್ಟ ಹಾದಿಯಲ್ಲಿ ನಡೆಯುತ್ತಿದ್ದೇನೆ.
– ಭೈರತಿ ಸುರೇಶ್, ನಗರಾಭಿವೃದ್ಧಿ ಸಚಿವ
ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರು ಬಡಜನರ ಕಲ್ಯಾಣಕ್ಕೆ ಶ್ರಮಿಸಿದರು. ಅವರ ಹೆಸರನ್ನು ಬೊಮ್ಮನಕಟ್ಟೆಯ ಆಶ್ರಯ ಬಡಾವಣೆಗೆ ನಾಮಕರಣ ಮಾಡಬೇಕೆಂದು 2016 ರಿಂದ ಪಕ್ಷಾತೀತವಾದ ಬೇಡಿಕೆ ಇತ್ತು. ಇಂದು ಅದು ಸಾಕಾರಗೊಳ್ಳುತ್ತಿರುವುದಕ್ಕೆ ಸಂತಸವಾಗಿದೆ.
– ಮಧು ಬಂಗಾರಪ್ಪ, ಸಚಿವ
ಶಿವಮೊಗ್ಗ ನಗರದ ಕುಡಿಯುವ ನೀರಿನ ಯೋಜನೆಗೆ ₹490 ಕೋಟಿ ಅವಶ್ಯಕತೆ ಇದೆ. ಕ್ರಿಯಾ ಯೋಜನೆ ತಯಾರಿಸಿದ್ದು ನಗರಾಭಿವೃದ್ಧಿ ಸಚಿವರು ಈ ಬಗ್ಗೆ ಭರವಸೆ ನೀಡಿದ್ದಾರೆ. ಪೌರ ಕಾರ್ಮಿಕರಿಗೆ ವಸತಿ ಯೋಜನೆಯ ಬಾಕಿ ಕಾಮಗಾರಿಗಳಿಗೆ ಅವಶ್ಯವಿರುವ ₹27 ಕೋಟಿ ಅನುದಾನ ಅಗತ್ಯವಿದೆ.
– ಎಸ್.ಎನ್.ಚನ್ನಬಸಪ್ಪ, ಶಾಸಕ
ಇದನ್ನೂ ಓದಿ : ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ KSIIDC ಅಧ್ಯಕ್ಷರ ಭೇಟಿ, ಎರಡು ಮಹತ್ವದ ಘೋಷಣೆ
ಕಾರ್ಯಕ್ರಮದಲ್ಲಿ ಶಾಸಕರುಗಳಾದ ಗೋಪಾಲಕೃಷ್ಣ ಬೇಳೂರು, ಶಾರದಾ ಪೂರ್ಯಾನಾಯ್ಕ್, ವಿಧಾನ ಪರಿಷತ್ ಸದಸ್ಯರಾದ ಬಲ್ಕೀಶ್ ಬಾನು, ಡಿ.ಎಸ್. ಅರುಣ್, ಉಸ್ತುವಾರಿ ಜಿಲ್ಲಾಧಿಕಾರಿ ಹೇಮಂತ್.ಎನ್, ಎಸ್.ಪಿ. ನಿಖಿಲ್.ಬಿ ಸೇರಿ ಹಲವರು ಇದ್ದರು.