ಶಿವಮೊಗ್ಗ: ನಗರದ ಗುಡ್ಡೇಕಲ್ ಶ್ರೀ ಬಾಲಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದಲ್ಲಿ ಆಗಸ್ಟ್ 6ರ ಗುರುವಾರ ಭರಣಿ ಹಾಗೂ ಆಗಸ್ಟ್ 7ರ ಶುಕ್ರವಾರದಂದು ಆಡಿಕೃತ್ತಿಕೆ ಜಾತ್ರೆ ವಿಜೃಂಭಣೆಯಿಂದ ನಡೆಯಲಿದೆ ಎಂದು ದೇವಸ್ಥಾನದ ಅಧ್ಯಕ್ಷ ಪಿ.ರಘು ಕುಮಾರ್ ತಿಳಿಸಿದ್ದಾರೆ.➤ ಸುದ್ದಿಯ ಮುಂದಿನ 5 ಪ್ಯಾರಾಗಳು ಕೆಳಗಿವೆ.
ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಿ.ರಘು ಕುಮಾರ್, ತಮಿಳುನಾಡಿನ ಪಳನಿಯಲ್ಲಿ ನಡೆಯುವ ಜಾತ್ರೆಯಂತೆಯೇ ಗುಡ್ಡೇಕಲ್ನಲ್ಲಿಯು ವಿಜೃಂಭಣೆಯ ಜಾತ್ರೆ ನಡೆಯಲಿದೆ. ಜಾತ್ರೆಯ ಅಂಗವಾಗಿ ವಿಶೇಷ ಪೂಜೆ, ಅಭಿಷೇಕ, ಅಲಂಕಾರ, ಮಹಾಮಂಗಳಾರತಿ ಹಾಗೂ ವಿವಿಧ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಹೊರ ಜಿಲ್ಲೆ, ರಾಜ್ಯದಿಂದಲು ಭಕ್ತರು
ಜಾತ್ರೆಗೆ ವಿವಿಧ ರಾಜ್ಯ, ಜಿಲ್ಲೆ ಹಾಗೂ ವಿವಿಧ ತಾಲೂಕುಗಳಿಂದ ಭಕ್ತರು ಆಗಮಿಸಲಿದ್ದಾರೆ. ಹರಕೆ ತೀರಿಸಲು ಕಾವಡಿ ಹೊತ್ತು, ವೇಲ್ಗಳನ್ನು ಚುಚ್ಚಿಕೊಂಡು ಹರಕೆ ತೀರಿಸಿ, ದೇವರ ದರ್ಶನ ಪಡೆಯಲಿದ್ದಾರೆ. ಮೂರು ದಿನ ಜಾತ್ರೆಯಲ್ಲಿ ಅನ್ನಪ್ರಸಾದ ಇರಲಿದೆ. ಅಂಗಡಿಗಳು, ಅಮ್ಯೂಸ್ಮೆಂಟ್ ಪಾರ್ಕ್ಗಳನ್ನು ಸ್ಥಾಪಿಸಲಾಗುತ್ತದೆ ಎಂದು ರಘು ಕುಮಾರ್ ತಿಳಿಸಿದರು.
ಮುಂದೆ ಆಗಮಶಾಸ್ತ್ರ, ವೇದ ಶಾಸ್ತ್ರ ಪಾಠ ಶಾಲೆ ಮಾಡುವ ಉದ್ದೇಶವಿದೆ. ದೇವಸ್ಥಾನದಲ್ಲಿ ತಿಂಗಳು ಪೂರ್ತಿ ಪ್ರಸಾದ ವಿತರಿಸುವ ಯೋಜನೆ ಇದೆ. ಸರ್ಕಾರಿ ಶಾಲೆ ದತ್ತು ತೆಗೆದುಕೊಳ್ಳುವ ಆಲೋಚನೆ ಇದೆ. ಇನ್ನು, ಬಾಲಸುಬ್ರಹ್ಮಣ್ಯ ಸ್ವಾಮಿಯ ಬೃಹತ್ ಪ್ರತಿಮೆ ನಿರ್ಮಾಣ ಕಾಮಗಾರಿಯ ಕಾಂಕ್ರಿಟ್ ಬೆಡ್ ನಿರ್ಮಾಣ ಆಗಿದೆ. ಜಾತ್ರೆ ಮುಗಿದ ಬಳಿಕ ಮುಂದಿನ ಕಾಮಗಾರಿ ಆಗಬೇಕಿದೆ. ಸಂಸದ ರಾಘವೇಂದ್ರ ಅವರು ಈ ಸಂಬಂಧ ಶ್ರಮ ವಹಿಸುತ್ತಿದ್ದಾರೆ.
– ಪಿ.ರಘು ಕುಮಾರ್, ಅಧ್ಯಕ್ಷ, ದೇವಸ್ಥಾನ ಟ್ರಸ್ಟ್
ಸುಬ್ರಹ್ಮಣ್ಯ ಸ್ವಾಮಿಯೇ ಸರ್ವ ದೇವರ ಸೇನಾಧಿಪತಿ. ಗುಡ್ಡೇಕಲ್ನ ದೇವಸ್ಥಾನಕ್ಕೆ 100 ವರ್ಷ ಇತಿಹಾಸ ಹೊಂದಿದೆ. ತಮಿಳರು ಭಾಷಿಕರು ಮಾತ್ರ ಹೆಚ್ಚು ಬರುತ್ತಿದ್ದರು. ಈಗ ಎಲ್ಲ ಭಾಷೆ, ಧರ್ಮದವರು ಕೂಡ ಇಲ್ಲಿಗೆ ಬರುತ್ತಿದ್ದಾರೆ.
– ಎಂ.ರಾಜು, ಖಜಾಂಚಿ, ದೇವಸ್ಥಾನ ಟ್ರಸ್ಟ್
ಪತ್ರಿಕಾಗೋಷ್ಠಿಯಲ್ಲಿ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಟ್ರಸ್ಟ್ನ ಉಪಾಧ್ಯಕ್ಷ ಪಿ.ಸುಬ್ರಮಣಿ, ಕಾರ್ಯದರ್ಶಿ ಎಂ.ಲೋಕೇಶ್, ಖಜಾಂಚಿ ಎಂ.ರಾಜು, ಸಹಕಾರ್ಯದರ್ಶಿ ಸಿ.ರವಿ ಸೇರಿ ಹಲವರು ಇದ್ದರು.