ಶಿವಮೊಗ್ಗ: ‘ಪರಿಣಿತ ವೈದ್ಯರ ಸಲಹೆಯಂತೆ ಆರೋಗ್ಯವಂತ ವ್ಯಕ್ತಿಯು ಪ್ರತಿ ಮೂರು ನಾಲ್ಕು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು’ ಎಂದು ಪ್ರೊ. ಎ.ಎಸ್.ಚಂದ್ರಶೇಖರ್ ಹೇಳಿದರು.
ರೋಟರಿ ಕ್ಲಬ್ ಶಿವಮೊಗ್ಗ ಉತ್ತರ ಹಾಗೂ ಅಮೆರಿಕದ ಮಾಡೆಸ್ಟೋ ಕ್ಲಬ್ ಸಹಯೋಗದೊಂದಿಗೆ, ರೋಟರಿಯ ಗ್ಲೋಬಲ್ ಗ್ರಾಂಟ್ ಪ್ರಾಜೆಕ್ಟ್ ಅಡಿಯಲ್ಲಿ ₹43 ಲಕ್ಷ ವೆಚ್ಚದಲ್ಲಿ ಖರೀದಿಸಲಾದ ಸ್ವಯಂಚಾಲಿತ ರಕ್ತ ಶೇಖರಿಸುವ ಯಂತ್ರವನ್ನು ರೆಡ್ ಕ್ರಾಸ್ ಸಂಜೀವಿನಿ ಬ್ಲಡ್ ಸೆಂಟರ್ನಲ್ಲಿ ಸಾರ್ವಜನಿಕ ಸೇವೆಗಾಗಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

‘ಈ ಅತ್ಯಾಧುನಿಕ ಯಂತ್ರವು ರೋಗಿಗೆ ಅಗತ್ಯವಿರುವ ಕೆಂಪು ರಕ್ತ ಕಣ, ಪ್ಲೇಟ್ಲೆಟ್ಗಳು ಅಥವಾ ಪ್ಲಾಸ್ಮಾದಂತಹ ನಿರ್ದಿಷ್ಟ ಘಟಕವನ್ನು ಮಾತ್ರ ರಕ್ತದಿಂದ ಬೇರ್ಪಡಿಸಿ, ಉಳಿದ ರಕ್ತವನ್ನು ದಾನಿಯ ದೇಹಕ್ಕೆ ವಾಪಸ್ ಕಳುಹಿಸುತ್ತದೆ. ಇದರಿಂದ ದಾನಿಯು ಪ್ರತಿ 15 ದಿನಗಳಿಗೊಮ್ಮೆ ರಕ್ತದಾನ ಮಾಡಲು ಶಕ್ತನಾಗಿರುತ್ತಾನೆ ಮತ್ತು ರಕ್ತ ಪೋಲಾಗುವುದನ್ನು ತಪ್ಪಿಸಬಹುದು’ ಎಂದು ವಿವರಿಸಿದರು.
ರೆಡ್ ಕ್ರಾಸ್ ಸಂಜೀವಿನಿ ಬ್ಲಡ್ ಬ್ಯಾಂಕ್ ಕಾರ್ಯದರ್ಶಿ ಡಾ. ದಿನೇಶ್ ಮಾತನಾಡಿ, ‘ಬೆಂಗಳೂರು ಹೊರತುಪಡಿಸಿದರೆ ಇಂತಹ ಆಧುನಿಕ ಆಟೋಮೆಟಿಕ್ ಬ್ಲಡ್ ಕಲೆಕ್ಷನ್ ಯಂತ್ರ ಹೊಂದಿರುವುದು ಶಿವಮೊಗ್ಗ ಮಾತ್ರ’ ಎಂದರು. ಇದೇ ವೇಳೆ ಬ್ಲಡ್ ಬ್ಯಾಂಕ್ ಖಜಾಂಚಿ ನವೀನ್ ಅವರಿಂದ ಪ್ರಥಮ ಬಿಳಿ ರಕ್ತ ಕಣಗಳನ್ನು ಸಂಗ್ರಹಿಸಲಾಯಿತು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಬಸವರಾಜಪ್ಪ, ಸರ್ಜಾ ಜಗದೀಶ್, ದತ್ತಾತ್ರಿ, ಡಾ. ಶಿವಕುಮಾರ್, ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.

