‘ಅಭಿವೃದ್ಧಿ ನೆಪದಲ್ಲಿ ಅವೈಜ್ಞಾನಿಕ ಕಾಮಗಾರಿ, ಭದ್ರಾವತಿ ಜನ್ನಾಪುರ ಕೆರೆ ಜಾಗ ಕಬಳಿಸಲು ಪ್ಲಾನ್’

SHIVAMOGGA LIVE NEWS | PROTEST | 08 ಮೇ 2022

ಭದ್ರಾವತಿ ಜನ್ನಾಪುರದ ಕೆರೆ ಅಭಿವೃದ್ಧಿ ಹೆಸರಲ್ಲಿ ಅವೈಜ್ಞಾನಿಕವಾಗಿ ಕಾಮಗಾರಿ ನಡೆಸಲಾಗುತ್ತಿದೆ. ಕೆರೆ ಜಾಗವನ್ನು ಕೆಲವರು ಕಬಳಿಸಲು ಮುಂದಾಗಿದ್ದಾರೆ. ಇದನ್ನು ತಪ್ಪಿಸಬೇಕೆಂದು ಒತ್ತಾಯಿಸಿ

ಜನ್ನಾಪುರ-ಸಿದ್ದಾಪುರ ಕೆರೆ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ಸ್ಥಳೀಯರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಜನ್ನಾಪುರ ಸರ್ವೇ ನಂ. 70ರಲ್ಲಿನ 52 ಎಕರೆ ಕೆರೆ ಜಾಗವನ್ನು ಸರ್ವೇ ಮೂಲಕ ಸಮರ್ಪಕವಾಗಿ ಗಡಿ ಗುರುತಿಸಬೇಕು. ಕೆರೆ ಒತ್ತುವರಿ ಜಾಗವನ್ನು ತೆರವುಗೊಳಿಸಬೇಕು. ಕೆರೆಯ ಹೂಳು ತೆಗೆದು ಸ್ವಚ್ಛಗೊಳಿಸಬೇಕು. ವೈಜ್ಞಾನಿಕವಾಗಿ ಕೆರೆ ಅಭಿವೃದ್ಧಿ ಮಾಡಬೇಕೆಂದು ಆಗ್ರಹಿಸಿದರು.

Kalleshwara-Enterprises.webp

ರೈತರಿಗೆ ಅನುಕೂಲವಾಗಲೆಂದು ಪೂರ್ವಿಕರು ಕೆರೆ ಕಟ್ಟೆಗಳನ್ನು ನಿರ್ಮಾಣ ಮಾಡಿದ್ದಾರೆ. ಜನ್ನಾಪುರದ 52 ಎಕರೆ ಜಾಗದಲ್ಲಿ ವ್ಯವಸ್ಥಿತವಾಗಿ ಕೆರೆ ನಿರ್ಮಾಣ ಮಾಡಿದ್ದಾರೆ. ಆದರೆ ಇಂದು ಕೆಲ ಪಟ್ಟಭದ್ರ ಹಿತಾಸಕ್ತಿಗಳು ಕೆರೆಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆರೆಗಳ ಒತ್ತುವರಿ ತೆರವುಗೊಳಿಸುವಂತೆ ಸುಪ್ರೀಂ ಕೋರ್ಟ್ ಆದೇಶವಿದ್ದರೂ, ಜಿಲ್ಲಾಡಳಿತ ಹಾಗೂ ಭದ್ರಾವತಿ ತಾಲೂಕು ಆಡಳಿತ ನಿರಾಸಕ್ತಿ ತೋರುತ್ತಿವೆ. 52 ಎಕರೆ ಕೆರೆ ಜಾಗವನ್ನು ಭದ್ರಾವತಿ ತಾಲೂಕು ಆಡಳಿತ 45.20 ಎಕರೆಗೆ ಸೀಮಿತಗೊಳಿಸಿದೆ. ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಕೆರೆ ಅಭಿವೃದ್ಧಿಗೆಂದು ಯೋಜನೆ ರೂಪಿಸಿ ಮೊದಲ ಕಂತಿನಲ್ಲಿ 4.48 ಕೋಟಿ ರೂ. ಬಿಡುಗಡೆ ಮಾಡಿದ್ದು ಕಾಮಗಾರಿ ಆರಂಭಿಸಲಾಗಿದೆ. ಆದರೆ ಕಾಮಗಾರಿ ಅವೈಜ್ಞಾನಿಕವಾಗಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

Shimoga Nanjappa Hospital

ಕೆರೆ ಜಾಗವನ್ನು ಸಮರ್ಪಕವಾಗಿ ಸರ್ವೇ ನಡೆಸಿದ ಬಳಿಕವಷ್ಟೇ ಅದರ ಅಭಿವೃದ್ಧಿಗೆ ಮುಂದಾಗಬೇಕು.ಅಲ್ಲಿಯವರೆಗೂ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿದರು. ಜನ್ನಾಪುರ-ಸಿದ್ದಾಪುರ ಕೆರೆ ಸಂರಕ್ಷಣಾ ಸಮಿತಿ ಅಧ್ಯಕ್ಷ ಬಾಲಕೃಷ್ಣ, ಸಂಚಾಲಕ ಸುರೇಶ್, ಪ್ರಮುಖರಾದ ಮಂಜುನಾಥ್, ಕಾಂತರಾಜ್, ಜಿ.ರಾಜು, ಚಂದ್ರಶೇಖರ್, ರಾಮಕೃಷ್ಣಪ್ಪ ಇತರರಿದ್ದರು.

ಇದನ್ನೂ ಓದಿ – ಮದುವೆ ಮನೆಯಲ್ಲಿ ಊಟ ಮಾಡಿದವರಿಗೆ ವಾಂತಿ, ಭೇದಿ, ಮೆಗ್ಗಾನ್ ಆಸ್ಪತ್ರೆಗೆ ದಾಖಲು

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment