ಶಿವಮೊಗ್ಗ: ‘ಶಿವಮೊಗ್ಗ ವಿಮಾನ ನಿಲ್ದಾಣದ ನಿರ್ವಹಣೆಯನ್ನು ರಾಜ್ಯ ಸರ್ಕಾರಕ್ಕೆ ವಹಿಸಿದ್ದೆ ನಾನು ಮಾಡಿದ ದೊಡ್ಡ ತಪ್ಪುʼ ಎಂದು ಸಂಸದ ಬಿ.ವೈ.ರಾಘವೇಂದ್ರ ಬೇಸರ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಂಸದ ರಾಘವೇಂದ್ರ, ನಿನ್ನೆ ವಿಮಾನ ಶಿವಮೊಗ್ಗದಲ್ಲಿ ವಿಮಾನ ಲ್ಯಾಂಡ್ ಆಗದೆ ಹುಬ್ಬಳಿಗೆ ತೆರಳಿತ್ತು. ಹುಬ್ಬಳ್ಳಿಯಿಂದ ರಸ್ತೆ ಮಾರ್ಗವಾಗಿ ಶಿವಮೊಗ್ಗಕ್ಕೆ ಆಗಮಿಸಿದೆ. ನ್ಮಮೂರಿನಲ್ಲೇ ವಿಮಾನ ನಿಲ್ದಾಣವಿದ್ದರು ಇನ್ನೊಂದು ಊರಿಗೆ ಹೋಗಿ ಬರುವಂತಹ ದುಸ್ಥಿತಿ ಇದೆ ಎಂದು ಬೇಸರವಾಗುತ್ತದೆ ಎಂದರು.
‘ದೊಡ್ಡ ತಪ್ಪು ಮಾಡಿಬಿಟ್ಟೆʼ
ನಮ್ಮ ತಂದೆ ಮುಖ್ಯಮಂತ್ರಿ ಆಗಿದ್ದಾಗ ವಿಮಾನ ನಿಲ್ದಾಣದ ನಿರ್ವಹಣೆಯನ್ನು ರಾಜ್ಯ ಸರ್ಕಾರಕ್ಕೆ ವಹಿಸಿಬಿಟ್ಟೆ. ಇದು ನಾನು ಮಾಡಿದ ದೊಡ್ಡ ತಪ್ಪು ಎಂದು ಈಗ ಅನಿಸಲು ಶುರುವಾಗಿದೆ. ವಿಮಾನ ನಿಲ್ದಾಣದ ನಿರ್ವಹಣೆಯನ್ನು ಭಾರತೀಯ ವಿಮಾನಯಾನ ಪ್ರಾಧಿಕಾರಕ್ಕೆ ವಹಿಸಿದ್ದರೆ ಎಲ್ಲ ಕೆಲಸಗಳು ಸುಗಮವಾಗುತ್ತಿತ್ತು ಎಂದು ತಿಳಿಸಿದರು.

ನೈಟ್ ಲ್ಯಾಂಡಿಂಗ್ ವ್ಯವಸ್ಥೆಗೆ ಪೂರಕವಾದ ಉಪಕರಣಗಳನ್ನು ತರಿಸಿ ಮೂರು ತಿಂಗಳಾಗಿದೆ. ಇವುಗಳ ಅಳವಡಿಕೆಗೆ ಎರಡರಿಂದ ಮೂರು ಕೋಟಿ ರುಪಾಯಿ ಅಗತ್ಯವಿದೆ. ಟೆಂಡರ್ ಕರೆಯಲು ವಿಳಂಬವಾಗುತ್ತಿದೆ. ಇದರ ಬದಲು ನಿರ್ಮಿತಿ ಕೇಂದ್ರಕ್ಕೆ ವಹಿಸಿದ್ದರೆ ಟೆಂಡರ್ ರಹಿತವಾಗಿ ಕಾಮಗಾರಿ ಪೂರ್ಣಗೊಳಿಸುತ್ತಿದ್ದರು. ಸರ್ಕಾರ ಒಂದು ಕೋಟಿ ರುಪಾಯಿ ಕೊಡಲು ಸಂಪುಟ ಸಭೆ ನಡೆಸಬೇಕು ಎನ್ನುತ್ತಿದೆ. ರಾಜ್ಯ ಸರ್ಕಾರದಿಂದ ಹಣ ಕೊಡಲೂ ವಿಳಂಬವಾಗುತ್ತಿದೆ. ಕೆಲಸ ಆರಂಭಿಸಲೂ ತಡವಾಗುತ್ತಿದೆ. ಇದರಿಂದ ನಮಗೆ ದೊರೆಯಬೇಕಿದ್ದ ಅವಕಾಶವನ್ನು ಬೇರೆಯವರ ಪಾಲಾಗುತ್ತಿದೆ ಎಂದು ಸಂಸದ ರಾಘವೇಂದ್ರ ಬೇಸರ ವ್ಯಕ್ತಪಡಿಸಿದರು.
ಸರ್ಕಾರ ಕೂಡಲೆ ನೈಟ್ ಲ್ಯಾಂಡಿಂಗ್ ಉಪಕರಣಗಳನ್ನು ಅಳವಡಿಸಿ ಕೊಡಬೇಕು. ಆ ಬಳಿಕ ದೆಹಲಿಯಲ್ಲಿ ಚರ್ಚೆ ನಡೆಸಿ ಮತ್ತಷ್ಟು ವಿಮಾನಗಳನ್ನು ತರಿಸುವ ಪ್ರಯತ್ನ ಮಾಡುತ್ತೇನೆ. ಇಲ್ಲವಾದಲ್ಲಿ ಇಂತಹ ಮೋಡದ ವಾತಾವರಣ ಇದ್ದರೆ ಅನೇಕ ವಿಮಾನಗಳು ಕ್ಯಾನ್ಸಲ್ ಆಗುತ್ತವೆ ಎಂದರು.

Airport

