ಶಿವಮೊಗ್ಗ : ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಮೈದಾನಕ್ಕೆ ಹಾಕಿದ್ದ ವಿವಾದಿತ ಬೇಲಿಯನ್ನು (Fencing) ಬಿಗಿ ಪೊಲೀಸ್ ಬಂದೋಬಸ್ತಿನಲ್ಲಿ ತೆರವು ಮಾಡಲಾಯಿತು. ಮುಂಜಾಗ್ರತಾ ಕ್ರಮವಾಗಿ ಸುತ್ತಮುತ್ತಲ ಅಂಗಡಿ ಮುಂಗಟ್ಟು ಬಂದ್ ಮಾಡಿಸಲಾಗಿದೆ.
ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಮೈದಾನದ ಪ್ರವೇಶ ದ್ವಾರಕ್ಕೆ ಬೇಲಿ (Fencing) ಹಾಕಲಾಗಿತ್ತು. ಇದು ವಿವಾದಕ್ಕೆ ಕಾರಣವಾಗಿತ್ತು. ಹಿಂದೂ ಸಂಘಟನೆಗಳ ಕಾರ್ಯಕರ್ತರು ಬೇಲಿ ತೆರವಿಗೆ ಒತ್ತಾಯಿಸಿ ಪ್ರತಿಭಟಿಸಿದ್ದರು.

ಬೇಲಿ ತೆರವು, ಬ್ಯಾರಿಕೇಡ್ ಅಳವಡಿಕೆ
ಮೈದಾನಕ್ಕೆ ಹಾಕಿದ್ದ ಬೇಲಿಯನ್ನು (Fencing) ಮಹಾನಗರ ಪಾಲಿಕೆ ಸಿಬ್ಬಂದಿ ತೆರವು ಮಾಡಿದರು. ಮುಂಜಾಗ್ರತಾ ಕ್ರಮವಾಗಿ ಬೇಲಿ ಹಾಕಿದ್ದ ಜಾಗಕ್ಕೆ ಪೊಲೀಸರು ಬ್ಯಾರಿಕೇಡ್ ಇರಿಸಿದ್ದಾರೆ.

ಅಂಗಡಿಗಳು ಬಂದ್, ಬೀದಿ ದೀಪ ಕಟ್
ಬೇಲಿ ತೆರವು ಕಾರ್ಯಾಚರಣೆ ಹಿನ್ನಲೆ ಮುಂಜಾಗ್ರತಾ ಕ್ರಮವಾಗಿ ಮೈದಾನದ ಸುತ್ತಲು ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಸವಳಂಗ ರಸ್ತೆ ಮತ್ತು ತಿಲಕನಗರ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಮೈದಾನದ ಭಾಗದ ಸುತ್ತಲು ಪೊಲೀಸರನ್ನು ನಿಯೋಜಿಸಲಾಗಿದೆ. ಭದ್ರತೆಗೆ ಮೀಸಲು ಪಡೆಯ ಪೊಲೀಸರನ್ನು ನಿಯೋಜಿಸಲಾಗಿದೆ.

ಇದನ್ನೂ ಓದಿ » ಶಿವಮೊಗ್ಗ ಡಿಸಿ ಕಚೇರಿ ಮುಂದಿನ ಖಾಲಿ ಜಾಗಕ್ಕೆ ಬೇಲಿ, ಹಿಂದು ಕಾರ್ಯಕರ್ತರು ಗರಂ, ಬಿಗುವಿನ ವಾತಾವರಣ
ಇನ್ನು, ಬೇಲಿ ತೆರವು ಕಾರ್ಯಾಚರಣೆ ವೇಳೆ ಮುಂಜಾಗ್ರತಾ ಕ್ರಮವಾಗಿ ಮೈದಾನದ ಸುತ್ತಲು ಇದ್ದ ಅಂಗಡಿ ಮುಂಗಟ್ಟು ಬಂದ್ ಮಾಡಿಸಲಾಗಿದೆ. ತಿಲಕನಗರ ಮುಖ್ಯರಸ್ತೆಯಲ್ಲಿರುವ ಅಂಗಡಿಗಳು, ಕಚೇರಿ, ಹೊಟೇಲ್ಗಳು ಸೇರಿ ಎಲ್ಲ ಮಳಿಗೆ ಬಂದ್ ಮಾಡಿಸಲಾಗಿದೆ. ಈ ರಸ್ತೆಯಲ್ಲಿ ಬೀದಿ ದೀಪದ ಸಂಪರ್ಕ ಕಡಿತವಾಗಿದೆ. ಸಾರ್ವಜನಿಕ ವಾಹನ ಸಂಚಾರ ಮತ್ತು ಜನರ ಓಡಾಟವನ್ನು ನಿರ್ಬಂಧಿಸಲಾಗಿದೆ.

ಇದನ್ನೂ ಓದಿ » ಕೂಡ್ಲಿಯಲ್ಲಿ ಅದ್ಧೂರಿ ಜಾತ್ರೆ, ಸಂಗಮದಲ್ಲಿ ಸಾವಿರ ಸಾವಿರ ಜನರಿಂದ ಪುಣ್ಯ ಸ್ನಾನ, ಹೇಗಿದೆ ಈ ಬಾರಿ ವೈಭವ?
ಹೆಚ್ಚುವರಿ ರಕ್ಷಣಾಧಿಕಾರಿಗಳಾದ ಅನಿಲ್ ಕುಮಾರ್ ಭೂಮರಡ್ಡಿ, ಕಾರ್ಯಾಪ್ಪ, ಡಿವೈಎಸ್ಪಿ ಸಂಜೀವ್ ಕುಮಾರ್, ಇನ್ಸ್ಪೆಕ್ಟರ್ಗಳು, ಸಬ್ ಇನ್ಸ್ಪೆಕ್ಟರ್ಗಳು ಸೇರಿ ಹಲವು ಪೊಲೀಸ್ ಸಿಬ್ಬಂದಿ ಇದ್ದರು.








