ಸೋಮಿನಕೊಪ್ಪದಲ್ಲಿ ಕಣ್ಮನ ಸೆಳೆದ ಜಾನಪದ ಸಮ್ಮೇಳನ, ಹೇಗಿತ್ತು? ಯಾರೆಲ್ಲ ಭಾಗವಹಿಸಿದ್ದರು?

Published On : ಮಾರ್ಚ್ 23, 2026

Published By : ನಿತಿನ್‌ ಆರ್‌.ಕೈದೊಟ್ಲು 

ಶಿವಮೊಗ್ಗ: ನಮ್ಮ ಜನಪದ (Janapada Sammelana) ಕಲೆಗಳು ಶಕ್ತಿಯುತವಾಗಿವೆ. ಜೀವನ, ಸಂಸ್ಕೃತಿ ಮತ್ತು ಮೌಲ್ಯಗಳ ಪ್ರತಿಬಿಂಬವಾಗಿವೆ ಎಂದು ಶಾಸಕಿ ಶಾರದಾ ಪೂರ್ಯನಾಯ್ಕ ತಿಳಿಸಿದರು.

ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಸೋಮಿನಕೊಪ್ಪ ಗ್ರಾಮದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ 7ನೇ ಜಾನಪದ ಸಮ್ಮೇಳನವನ್ನು ಶ್ರೀ ರಾಮಾಂಜನೇಯ ದೇವಸ್ಥಾನ ಆವರಣದಲ್ಲಿ ರಾಗಿ ಬೀಸಿ ಉದ್ಘಾಟಿಸಿ, ತೀರ್ಥಹಳ್ಳಿ ಮಹಿಳಾ ಅಂಟಿಗೆ ಪಂಟಿಗೆ ತಂಡ ನೀಡಿದ ಜ್ಯೋತಿ ಸ್ವೀಕರಿಸಿ ಮಾತನಾಡಿದರು.

Janapada-Sammelana-in-Shimoga-Sominakoppa

ಜನಪದವು ಹಿರಿಯರಿಂದ ಕಿರಿಯರ ಬಾಯಿಂದ ಬಾಯಿಗೆ ಹರಿದು ಬಂದಿದೆ. ಜನಪದ ಕಲೆ ಉಳಿಯಬೇಕು‌ ಮತ್ತು ಅದಕ್ಕೆ ಪ್ರೋತ್ಸಾಹ ನೀಡುವ ಕೆಲಸವಾಗಬೇಕು. ಹಿರಿಯರು ಬೆಳೆಸಿದ ಕಲೆ, ಹೊಸ ತಲೆಮಾರಿಗೆ  ಕಲಿಸುವ ಕೆಲಸವಾಗಬೇಕು. ಇಲ್ಲಿ ಲಾಭ ನಷ್ಟದ ಲೆಕ್ಕಾಚಾರವಿಲ್ಲ. ಹೊಸ ಪೀಳಿಗೆಯನ್ನು ತೊಡಗಿಸಿಕೊಳ್ಳಲು ಜನಪದ ಸಮ್ಮೇಳನ ಪ್ರೇರಣೆಯಾಗಲಿದೆ ಎಂದು ಆಶಿಸಿದರು.

ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾಧ್ಯಕ್ಷ ಡಿ. ಮಂಜುನಾಥ ಮಾತನಾಡಿ, ನಲವತ್ತಾರು ವರ್ಷಗಳ ಹಿಂದೆ ನಾಡೋಜ ಡಾ. ಹೆಚ್. ಎಲ್. ನಾಗೇಗೌಡರು ಸ್ಥಾಪಿಸಿದ ಈ ಸಂಸ್ಥೆ ತನ್ನ ಕ್ರಿಯಾಶೀಲ ಚಟುವಟಿಕೆಗಳ ಕಾರಣ ವಿಶ್ವಸಂಸ್ಥೆಯ ಮಾನ್ಯತೆ ಪಡೆದಿರುವುದು ಹೆಗ್ಗಳಿಕೆ. ಜಿಲ್ಲೆಯಲ್ಲಿ 2016 ರಲ್ಲಿ ನಾನು ಅಧ್ಯಕ್ಷನಾದ ನಂತರ ಜಿಲ್ಲೆಯ ಜನಪದ ಕಲಾವಿದರ ಸಮೀಕ್ಷೆ ನಡೆಸಿದೆವು. ಪ್ರತಿಯೊಂದು ಭಾಗದಲ್ಲಿ ಸಮೀಕ್ಷೆ ನಡೆಸಿ ಕಲೆ, ಕಲಾವಿದರನ್ನು ಗುರುತಿಸುವ ಕೆಲಸ ನಡೆಸಿದೆವು. ತಾಲ್ಲೂಕು, ಹೋಬಳಿ ಸಮಿತಿ ರಚಿಸಿ ಕಾರ್ಯಚಟುವಟಿಕೆ ಆರಂಭಿಸಿದೆವು ಎಂದರು.

ಬೆಂಗಳೂರಿನ ಗೀತಾ ಭಟ್ ಮತ್ತು ಸ್ಮಿತಾ ಸಂಯೋಜಿಸಿದ ಮಲೆನಾಡ ದೀವರ ಸಂಸ್ಕೃತಿ ಅನಾವರಣದ ಹಸೆ ಚಿತ್ತಾರ ಪುಸ್ತಕವನ್ನು ಜನಪದ ಗಾಯಕ ಡಾ.ಅಪ್ಪಗೆರೆ ತಿಮ್ಮರಾಜು ಲೋಕಾರ್ಪಣೆ ಮಾಡಿದರು.

ಜೋಡೆತ್ತಿನ ಗಾಡಿಯಲ್ಲಿ ಅಧ್ಯಕ್ಷರ ಮೆರವಣಿಗೆ

ಸೋಮಿನಕೊಪ್ಪ ಗ್ರಾಮದ ಹೆಬ್ಬಾಗಿಲಿನಿಂದ ಶ್ರೀ ರಾಮಾಂಜನೇಯ ದೇವಸ್ಥಾನದ ಆವರಣದಲ್ಲಿರುವ ವೇದಿಕೆವರೆಗೆ ಜಾನಪದ ನಡಿಗೆ ಕಾರ್ಯಕ್ರಮ ನಡೆಯಿತು. ತಳಿರು ತೋರಣಗಳಿಂದ ಶೃಂಗರಿಸಿದ್ದ ಜೋಡೆತ್ತಿನ ಬಂಡಿಯಲ್ಲಿ ಸಮ್ಮೇಳನಾಧ್ಯಕ್ಷ ಕೆ.ಯುವರಾಜ್ ಅವರನ್ನು ಪೇಟ, ಹಾರ, ಶಾಲು ಹೊದಿಸಿ ಮೆರವಣಿಗೆ ನಡೆಸಲಾಯಿತು. 

Janapada-Sammelana-in-Shimoga-Sominakoppa

ಊರ ದೇವತೆಗಳ ಪಲ್ಲಕ್ಕಿ, ಮಾದಾಪುರದ ಕುಮಾರ್ ನೇತೃತ್ವದ ಡೊಳ್ಳು ತಂಡ, ಶಿವಮೊಗ್ಗ ವೀರಣ್ಣ ಮತ್ತು ತಂಡದ ಪುರವಂತಿಕೆ, ಸಹ್ಯಾದ್ರಿ ಕಲಾ ತಂಡದ ಪೂಜಾ ಕುಣಿತ, ಆಡಿನಕೊಟ್ಟಿಗೆ ವಿನಾಯಕ ಕೋಲಾಟ ತಂಡದ ಕೋಲಾಟ, ತ್ರಿಣಿವೆಯ ಕಲಾನಾಥೇಶ್ವರ ಯುವತಿ ಮಂಡಳಿ ಸೋಬಾನೆ, ಲಾವಣಿ ಖ್ಯಾತಿಯ ಈಸೂರಿನ ಬೇಗೂರು ಶಿವಪ್ಪ, ಜೋಗಿಪದ ಖ್ಯಾತರಾದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಗುಡ್ಡಪ್ಪಜೋಗಿ, ತತ್ವಪದ ಖ್ಯಾತಿಯ ಬಟ್ಟೇಮಲ್ಲಪ್ಪದ ಆಂಜನೇಯ ಜೋಗಿ.

ಇದನ್ನೂ ಓದಿ – ಕೂಡ್ಲಿಯಲ್ಲಿ ಸಾವಿರ ಸಾವಿರ ಜನರಿಂದ ಪುಣ್ಯ ಸ್ನಾನ, ಹೇಗಿದೆ ಈ ಬಾರಿ ಜಾತ್ರೆ?

ಚೌಡಿಕೆ ಪದ ಖ್ಯಾತಿಯ ಲೋಕೋತ್ಸವ ಪ್ರಶಸ್ತಿ ಪುರಸ್ಕೃತರಾದ ಭದ್ರಾವತಿ ಲಕ್ಷ್ಮಣರಾವ್ ಮತ್ತು ತಂಡ, ಗೀಗಿಪದ ಖ್ಯಾತಿಯ ಗೆಂಡ್ಲಾ ಹೊಸೂರು ಶಿವರುದ್ರಪ್ಪ ಎನ್. ಜೋಗಿ ತಂಡ, ಜೋಗತಿ ನೃತ್ಯ ಖ್ಯಾತಿಯ ಜಯಪ್ಪ ನಾಗರಾಜ್, ಸುಗ್ಗಿ ಕುಣಿತ ಖ್ಯಾತಿ ತಿಮ್ಮಪ್ಪ ಮತ್ತು ತಂಡ, ತೀರ್ಥಹಳ್ಳಿ ಶಕುಂತಲಾ ಮತ್ತು ತಂಡದ ಅಂಟಿಗೆ ಪಂಟಿಗೆ ತಂಡ, ಕರ್ಪಾಳ ಮೇಳದ ಪ್ರಭಯ್ಯ ಮತ್ತು ತಂಡ, ನಾಗರಾಜ್ ತೋಂಬ್ರಿ ಮತ್ತು ತಂಡ, ಕಿತ್ತೂರು ರಾಣಿ ಚನ್ನಮ್ಮ ಯುವತಿ ಮಂಡಳಿ, ಹರಮಘಟ್ಟ ತಂಡದವರು ಜನಪದ ನಡಿಗೆಯಲ್ಲಿ ಹೆಜ್ಜೆಹಾಕಿದರು.

Janapada-Sammelana-in-Shimoga-Sominakoppa

ನಿಕಟಪೂರ್ವ ಸಮ್ಮೇಳನದ ಸರ್ವಾಧ್ಯಕ್ಷ, ಡೊಳ್ಳು ಕಲಾವಿದ ಕಣ್ಣೂರು ಟಾಕಪ್ಪ, ಯು‌ ಮಧುಸೂದನ್ ಐತಾಳ್, ಕೆ. ಹೆಚ್. ರಂಗಪ್ಪ, ಕೆ‌.ಜಿ. ಪ್ರಮೋದ್, ಕೆ.ಹೆಚ್.ನಾಗರಾಜ್, ಬಿ‌ ಚಂದ್ರೇಗೌಡ, ಬಿ. ಪಾಪಯ್ಯ, ಎಂ. ಹೆಚ್. ಸತ್ಯನಾರಾಯಣ, ಸತ್ಯನಾರಾಯಣ ಸಿರಿವಂತೆ ಸೇರಿ ಹಲವರು ಇದ್ದರು.  

Sunrise Facility Services, Sri sai Trust Shimoga
JNN College of Engineering Admissions started

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : ಮಾರ್ಚ್ 23, 2026

Leave a Comment