ಶಿವಮೊಗ್ಗ: ಗೌರಿ – ಗಣೇಶ ಹಬ್ಬದ ಹಿನ್ನೆಲೆ ಶಿವಮೊಗ್ಗದಲ್ಲಿ ವ್ಯಾಪಾರ, ವಹಿವಾಟು ಬಿರುಸಾಗಿದೆ. ಗಾಂಧಿ ಬಜಾರ್ನಲ್ಲಿ (Gandhi Bazaar) ಬೆಳಗ್ಗೆಯಿಂದ ಸಂಜೆವರೆಗೆ ಜನ ಜಂಗುಳಿ ಇತ್ತು. ಹೂವು, ಹಣ್ಣು, ತರಕಾರಿ, ಅಲಂಕಾರಿಕ ವಸ್ತುಗಳು, ಪೂಜಾ ಸಾಮಗ್ರಿ ಖರೀದಿ ಜೋರಿತ್ತು.
ಕಳೆದ ಎರಡು ದಿನದಿಂದ ಗಾಂಧಿ ಬಜಾರ್ನಲ್ಲಿ ಬೆಳಗ್ಗೆಯಿಂದಲೇ ಭಾರಿ ಸಂಖ್ಯೆಯ ಜನ ಭೇಟಿ ನೀಡಿದ್ದು, ವ್ಯಾಪಾರ ಜೋರಾಗಿದೆ.
ಎಸ್.ಎನ್. ಸರ್ಕಲ್ನಿಂದ ರಾಮಣ್ಣಶ್ರೇಷ್ಠಿ ಪಾರ್ಕ್ವರೆಗೆ ಕಾಲಿಡಲು ಆಗದಷ್ಟು ಜನ ಜಂಗುಳಿ ಇತ್ತು. ರಸ್ತೆ, ಫುಟ್ಪಾತ್ಗಳ ಮೇಲು ವ್ಯಾಪಾರ ಜೋರಿತ್ತು.
ಇಡೀ ರಸ್ತೆಯಲ್ಲಿ ವಾಹನಗಳ ಪಾರ್ಕಿಂಗ್ಗೆ ತೀವ್ರ ಸಮಸ್ಯೆ ಉಂಟಾಯಿತು. ಗಾಂಧಿ ಬಜಾರ್ನ ಅಕ್ಕಪಕ್ಕದ ಬಡಾವಣೆಗಳಲ್ಲಿ ವಾಹನಗಳ ಪಾರ್ಕಿಂಗ್ ಮಾಡಲಾಗಿತ್ತು.
ಗೌರಿ ಮತ್ತು ಗಣಪತಿ ಮೂರ್ತಿಗಳ ಅಲಂಕಾರ, ಪೂಜಾ ಸಾಮಗ್ರಿ ಖರೀದಿ ಬಿರುಸಾಗಿತ್ತು. ಮಾವಿನ ತೋರಣ, ಬಾಳೆ ದಿಂಡು, ಹೂವು, ಹಣ್ಣು, ತರಕಾರಿ, ಜವಳಿ ಖರೀದಿ ಮಾಡಲಾಗುತ್ತಿತ್ತು.
ಹಬ್ಬದ ಖರೀದಿ ಬಲು ದುಬಾರಿ
ಹಬ್ಬದ ಸಂದರ್ಭ ಹೂವು, ಹಣ್ಣು, ತೆಂಗಿನಕಾಯಿ, ತರಕಾರಿ ದರ ದುಬಾರಿಯಾಗಿದೆ. ಗುಣಮಟ್ಟದ ಆಧಾರದಲ್ಲಿ ಹೂವಿನ ದರದಲ್ಲಿ ಏರಿಳಿತವಿದೆ. ತೆಂಗಿನಕಾಯಿ ದರ ₹50 ಮತ್ತು ಮೇಲ್ಪಟ್ಟಿದೆ. ತರಕಾರಿ ದರವು ಜೇಬು ಸುಡುವಂತಿದೆ. ದುಬಾರಿ ದರದ ನಡುವೆಯು ಹಬ್ಬದ ಖರೀದಿ ಜೋರಾಗಿದೆ.
ಸಿಟಿಯಲ್ಲಿ ವಹಿವಾಟು ಜೋರು
ಶಿವಮೊಗ್ಗ ನಗರದ ವ್ಯಾಪಾರ ಕೇಂದ್ರಗಳಾದ ನೆಹರು ರಸ್ತೆ, ಗೋಪಿ ಸರ್ಕಲ್, ದುರ್ಗಿಗುಡಿ, ಬಿ.ಹೆಚ್.ರಸ್ತೆ, ಸವಳಂಗ ರಸ್ತೆ, ವಿನೋಬನಗರದಲ್ಲಿಯು ಹಬ್ಬದ ಖರೀದಿ ಜೋರಿತ್ತು. ಜನರು ಹೂವು, ಹಣ್ಣು, ಪೂಜಾ ಸಾಮಗ್ರಿ ಖರೀದಿಸುತ್ತಿದ್ದರು.
ಗಾಂಧಿ ಬಜಾರ್ ಮುಂಭಾಗ ಅಲಂಕಾರಿಕ ವಸ್ತುಗಳ ಮಾರಾಟ.ಗಾಂಧಿ ಬಜಾರ್ನಲ್ಲಿ ಹಣ್ಣುಗಳ ಮಾರಾಟ.ಗಾಂಧಿ ಬಜಾರ್ನಲ್ಲಿ ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳದಿಂದ ಪರಿಶೀಲನೆ.