ಗದ್ದುಗೆ ಏರಿದ ಮಾರಮ್ಮ, ಗಾಂಧಿ ಬಜಾರ್‌ನಲ್ಲಿ ಹೇಗಿತ್ತು ದೇವಿಯ ದರ್ಶನ? ಇಲ್ಲಿವೆ ಫೋಟೊ, ಮಾಹಿತಿ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ: ತವರು ಮನೆ ಗಾಂಧಿ ಬಜಾರ್‌ನಲ್ಲಿ ಮಂಗಳವಾರ ದರ್ಶನ ನೀಡಿದ್ದ ಕೋಟೆ ಮಾರಿಕಾಂಬೆ (Kote Marikamba Jatre), ಇವತ್ತು ಮಾರಿಕಾಂಬ ದೇವಸ್ಥಾನದ ಗದ್ದುಗೆ ಏರಿದ್ದಾಳೆ. ರಾತ್ರಿಯಿಂದಲೇ ಸಾವಿರ ಸಾವಿರ ಭಕ್ತರು ಗದ್ದುಗೆ ಮೇಲೆ ದೇವಿಯ ದರ್ಶನ ಪಡೆಯುತ್ತಿದ್ದಾರೆ.

ಕೋಟೆ ಶ್ರೀ ಮಾರಿಕಾಂಬ ದೇವಿಯ ದರ್ಶನಕ್ಕೆ ನಿರಂತರವಾಗಿ ಭಕ್ತರು ಹರಿದು ಬರುತ್ತಿದ್ದಾರೆ. ಶಿವಮೊಗ್ಗ ಸೇರಿದಂತೆ ಸುತ್ತಮುತ್ತಲ ಹಳ್ಳಿಯ ಭಕ್ತರು ದೇವಿಯ ದರ್ಶನ ಪಡೆಯುತ್ತಿದ್ದಾರೆ.

ಗಾಂಧಿ ಬಜಾರ್‌ನಲ್ಲಿ ಹೇಗಿತ್ತು ದರ್ಶನ?

ಜಾತ್ರೆಯ ಮೊದಲ ದಿನ ಗಾಂಧಿ ಬಜಾರ್‌ನ ತವರು ಮನೆಯಲ್ಲಿ ದೇವಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಇಲ್ಲಿ ತಾಯಿಯ ದರ್ಶನಕ್ಕೆ ಬೆಳಗ್ಗೆಯಿಂದಲೆ ನಿರಂತವಾಗಿ ಭಕ್ತರು ಆಗಮಿಸಿದ್ದರು. ಮಧ್ಯಾಹ್ನದ ವೇಳೆಗೆ ಭಕ್ತರ ಸಂಖ್ಯೆ ಸ್ವಲ್ಪ ಕಡಿಮೆಯಾಗಿತ್ತು. ಸಂಜೆ ಹೊತ್ತಿಗೆ ಪುನಃ ಜನರ ಸಂಖ್ಯೆ ಏರಿಕೆಯಾಯಿತು. ಭಕ್ತರನ್ನು ನಿಯಂತ್ರಣ ಮಾಡುವುದಕ್ಕೆ ಪೊಲೀಸರು ಮತ್ತು ಮಾರಿಕಾಂಬ ಸೇವಾ ಸಮಿತಿಯ ಸ್ವಯಂ ಸೇವಕರು ಹರಸಾಹಸ ಪಡಬೇಕಾಯಿತು.

Kote-Marikamba-Jatre-at-Gandhi-Bazaar
Kote Marikamba Jatre

ವಿಶೇಷ ದರ್ಶನಕ್ಕು ಮಾರುದ್ದದ ಕ್ಯೂ

ಈ ಭಾರಿ ವಿಶೇಷ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ₹200 ಮತ್ತು ₹500 ಟಿಕೆಟ್‌ ನಿಗದಿ ಮಾಡಲಾಗಿತ್ತು. ಆದರೆ ವಿಶೇಷ ದರ್ಶನದ ಟಿಕೆಟ್‌ ಖರೀದಿಸಿದರು ಮಾರುದ್ದದ ಕ್ಯೂನಲ್ಲಿ ನಿಲ್ಲುವಂತಾಗಿದೆ ಎಂದು ಭಕ್ತರು ಅಸಮಾಧಾನ ವ್ಯಕ್ತಪಡಿಸಿದರು. ಬೆಳಗ್ಗೆ ₹200 ಮೊತ್ತದ ವಿಶೇಷ ದರ್ಶನದ ಕ್ಯೂ ಕಿಲೋ ಮೀಟರ್‌ ಹೆಚ್ಚು ಉದ್ದ ಬೆಳೆದಿತ್ತು.

ತಾಯಿ ಮಡಿಲಲ್ಲಿ ಮಕ್ಕಳಿಗೆ ಆಶೀರ್ವಾದ

ದೇವಿಯ ಮಡಿಲಲ್ಲಿ ಮಕ್ಕಳನ್ನು ಇರಿಸಿ ಆಶೀರ್ವಾದ ಪಡೆಯುವುದು ವಾಡಿಕೆ. ಅಂತೆಯೇ ಗಾಂಧಿ ಬಜಾರ್‌ನಲ್ಲಿ ಮಕ್ಕಳನ್ನು ಶ್ರೀ ಮಾರಿಕಾಂಬೆಯ ಮಡಿಲಲ್ಲಿ ಇರಿಸಿ ಪೋಷಕರು ಪ್ರಾರ್ಥನೆ ನೆರವೇರಿಸಿದರು. ಇನ್ನು, ದೇವಿಯ ಮೇಲೆ ಮುಡಿಸಿದ್ದ ಹೂವು, ಅರ್ಪಿಸಿದ ಸೀರೆಯನ್ನು ಪಡೆಯಲು ಭಕ್ತರಲ್ಲಿ ನೂಕುನುಗ್ಗಲು ಇತ್ತು.

ದಣಿವಾರಿಸಿದ ಪಾನಕ, ನೀರು

ಶ್ರೀ ಮಾರಿಕಾಂಬ ದೇವಿಯ ದರ್ಶನಕ್ಕೆ ಸರತಿ ಸಾಲಿನಲ್ಲಿ ನಿಂತಿದ್ದ ಭಕ್ತರಿಗೆ ದಣಿವಾರಿಸಿಕೊಳ್ಳಲು ಗಾಂಧಿ ಬಜಾರ್‌ನ ವರ್ತಕರು, ವಿವಿಧ ಸಂಘ ಸಂಸ್ಥೆಯವರು ನೀರು, ಪಾನಕ ಹಂಚಿದರು. ಬೆಳಗ್ಗೆಯಿಂದ ನಿರಂತರವಾಗಿ ಪಾನಕ ಹಂಚಲಾಯಿತು. ಮತ್ತೊಂದೆಡೆ ಹಣ್ಣು ಕಾಯಿ ಮಾಡಿಸಲು ಪ್ರತ್ಯೇಕವಾದ ವ್ಯವಸ್ಥೆ ಮಾಡಲಾಗಿದೆ. ಕ್ಯೂನಲ್ಲಿ ಬಂದವರು ಹಣ್ಣು ಕಾಯಿ ಮಾಡಿಸಿಕೊಂಡು ಬಳಿಕ ದೇವಿಯ ದರ್ಶನ ಹೋಗಬಹುದಾಗಿದೆ.

ಇದನ್ನೂ ಓದಿ – ಶಿವಮೊಗ್ಗದಲ್ಲಿ ಉದ್ಯೋಗ ಮೇಳ, ಐಟಿ, ಬ್ಯಾಂಕಿಂಗ್‌ ಸೇರಿ ವಿವಿಧ ಕಂಪನಿಗಳು ಭಾಗಿ, ಯಾವಾಗ? ಎಲ್ಲಿ?

ವ್ಯಾಪಾರ, ವಹಿವಾಟು ಜೋರು

ಜಾತ್ರೆ ಹಿನ್ನೆಲೆ ಶಿವಪ್ಪನಾಯಕ ಪ್ರತಿಮೆ ಬಳಿ ಬಿ.ಹೆಚ್.ರಸ್ತೆಯಲ್ಲಿ ಆಟಿಕೆ, ಅಲಂಕಾರಿಕ ವಸ್ತುಗಳು, ಹಣ್ಣು ಕಾಯಿ, ಬಳೆ ವ್ಯಾಪಾರ ಜೋರಾಗಿತ್ತು. ಇನ್ನು, ಎ.ಎ. ಸರ್ಕಲ್‌ನಿಂದ, ಕರ್ನಾಟಕ ಸಂಘ ಸರ್ಕಲ್‌ವರೆಗೆ ದ್ವಿಚಕ್ರ ವಾಹನ ಹೊರತು ಉಳಿದ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಹಾಗಾಗಿ ರಸ್ತೆಯ ಒಂದು ಬದಿಯಲ್ಲೇ ದ್ವಿಚಕ್ರ ವಾಹನಗಳು ಸರತಿಯಲ್ಲಿ ನಿಲ್ಲಿಸಲಾಗಿತ್ತು.

ಇಲ್ಲಿವೆ ಫೋಟೊಗಳು

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment