ಶಿವಮೊಗ್ಗ: ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆ ಮತ್ತು ಬಿರುಗಾಳಿಯಿಂದಾಗಿ ದೊಡ್ಡ ಸಂಖ್ಯೆಯಲ್ಲಿ ಅಡಿಕೆ ಮರಗಳು ಧರೆಗುರುಳಿವೆ. ಆದರೆ, ಸರ್ಕಾರವು ಅಡಿಕೆ ಮರಕ್ಕೆ ಕೇವಲ ₹17 ಪರಿಹಾರ ನಿಗದಿಪಡಿಸಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಈ ಕುರಿತು ಪ್ರಜಾ ಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ವಿನ್ಸೆಂಟ್ ರೋಡ್ರಿಗಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಒಂದು ಅಡಿಕೆ ಸಸಿಯ ಬೆಲೆ ₹120 ಹೆಚ್ಚಿದ್ದು, ಮರ ಬೆಳೆಸಲು ಬೇಕಾಗುವ ಗೊಬ್ಬರ, ಕೂಲಿ ಹಾಗೂ ನಿರ್ವಹಣಾ ವೆಚ್ಚವನ್ನು ಪರಿಗಣಿಸಿದರೆ ಸರ್ಕಾರದ ಈ ಪರಿಹಾರ ಮೊತ್ತ ರೈತರ ಪರಿಶ್ರಮಕ್ಕೆ ಮಾಡಿರುವ ಅವಮಾನ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭದ್ರಾವತಿ ತಾಲೂಕಿನ ಹೊಳೆಹೊನ್ನೂರು, ಮಲ್ಲಿಗೆನಹಳ್ಳಿ, ತಡಸ, ಗುಡುಮಗಟ್ಟೆ, ಮೈದೊಳಲು, ಆನವೇರಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಸುಮಾರು 974 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಗೊಳಗಾಗಿದೆ. 12 ಲಕ್ಷಕ್ಕೂ ಅಧಿಕ ಮರಗಳು ಬಿದ್ದು ಸಾವಿರಾರು ರೈತ ಕುಟುಂಬಗಳು ಸಂಕಷ್ಟದಲ್ಲಿವೆ. ಎನ್ಡಿಆರ್ಎಫ್ನ ಹಳೆಯ ಮತ್ತು ಅವೈಜ್ಞಾನಿಕ ಪರಿಹಾರ ಮಾನದಂಡ ಬದಿಗಿಟ್ಟು, ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಬೇಕು. ಬೆಳೆ ಸಾಲ ಮನ್ನಾ ಹಾಗೂ ಸಾಲ ಮರುಪಾವತಿಯಲ್ಲಿ ವಿಶೇಷ ಸಡಿಲಿಕೆ ನೀಡಬೇಕು. ವಿಮಾ ಕಂಪನಿಗಳು ತಾಂತ್ರಿಕ ನೆಪ ಹೇಳದೆ ರೈತರಿಗೆ ತಕ್ಷಣ ವಿಮೆ ಪರಿಹಾರ ಪಾವತಿಸಬೇಕು. ಅಡಿಕೆ ಬೆಳೆಗಾರರ ಪುನರ್ವಸತಿಗಾಗಿ ಪ್ರತ್ಯೇಕ ಯೋಜನೆ ಜಾರಿಯಾಗಬೇಕು. ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ರೈತರ ನೆರವಿಗೆ ಧಾವಿಸದಿದ್ದರೆ, ಉಗ್ರ ಹೋರಾಟ ನಡೆಸುವುದಾಗಿ ವಿನ್ಸೆಂಟ್ ರೋಡ್ರಿಗಸ್ ಎಚ್ಚರಿಕೆ ನೀಡಿದ್ದಾರೆ.