ಶಿವಮೊಗ್ಗ : ವಿಮಾನ ನಿಲ್ದಾಣದ (Airport) ನಿರ್ವಹಣೆ ಕುರಿತು ಪ್ರಮುಖ ನಿರ್ಧಾರ ಕೈಗೊಳ್ಳಲಾಗುತ್ತಿದೆ. ಸದ್ಯ ಸಾಧಕ ಬಾಧಕದ ಕುರಿತು ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ತಿಳಿಸಿದರು.
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಚಿವ ಎಂ.ಬಿ.ಪಾಟೀಲ್, ವಿಮಾನ ನಿಲ್ದಾಣದ ನಿರ್ವಹಣೆಯನ್ನು ತಮಗೆ ವಹಿಸಬೇಕು ಎಂದು ವಿಮಾನಯಾನ ಪ್ರಾಧಿಕಾರ ಕೇಳಿದೆ. ಆದರೆ ಹಾಗೆ ಹಸ್ತಾಂತರ ಮಾಡಿದರೆ ಇಲ್ಲಿನ ಜಮೀನು ಕೂಡ ವಿಮಾನಯಾನ ಪ್ರಾಧಿಕಾರಕ್ಕೆ ಸೇರಲಿದೆ. ಹಾಗಾಗಿ ಲೀಸ್ಗೆ ನೀಡುವ ಕುರಿತು ಯೋಜಿಸಲಾಗುತ್ತಿದೆ. ಇದರಿಂದ ಈ ಜಮೀನು ರಾಜ್ಯ ಸರ್ಕಾರದ ಆಸ್ತಿಯಾಗಿ ಉಳಿಯಲಿದೆ ಎಂದರು.

ಕಲಬುರಗಿಯಲ್ಲಿ 1500 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ವಿಮಾನ ನಿಲ್ದಾಣವನ್ನು ವಿಮಾನಯಾನ ಪ್ರಾಧಿಕಾರಕ್ಕೆ ವಹಿಸಲಾಗಿದೆ. ಜಮೀನು ಕೂಡ ಪ್ರಾಧಿಕಾರದ ಹೆಸರಿಗೆ ಆಗಲಿದೆ. ಆದ್ದರಿಂದ ಶಿವಮೊಗ್ಗ ವಿಮಾನ ನಿಲ್ದಾಣದ ನಿರ್ವಹಣೆ ಕುರಿತು ಮಹತ್ವ ತೀರ್ಮಾನ ಕೈಗೊಳ್ಳಲಾಗುತ್ತಿದೆ. ಹಿಂದಿನ ಸರ್ಕಾರವು ಜಮೀನು ರಾಜ್ಯ ಸರ್ಕಾರದ ಬಳಿಯೇ ಉಳಿಯುವಂತೆ ನಿರ್ಣಯ ಕೈಗೊಂಡಿದೆ ಎಂದರು.
ಇನ್ನು, ಭೂಮಿ ಕಳೆದುಕೊಂಡವರಿಗೆ ವಸತಿ ಸಲುವಾಗಿ ಜಾಗ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಕೆಐಎಡಿಬಿಯಿಂದ 21 ಎಕರೆ ಜಾಗ ನೀಡುವ ಕುರಿತು ಸಕಾರಾತ್ಮಕ ನಿರ್ಣಯ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ » ಶಿವಮೊಗ್ಗ ಸಿಟಿಯಲ್ಲಿ ಇವತ್ತು ಏನೇನಾಯ್ತು? ಇಲ್ಲಿದೆ ಫಟಾಫಟ್ ನ್ಯೂಸ್