ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ಊರುಗಡೂರಿನಲ್ಲಿ ಹತ್ಯೆಯಾದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಸಂಕೇತ್ ಮನೆಗೆ ಸಂಸದ ಬಿ.ವೈ.ರಾಘವೇಂದ್ರ (Raghavendra) ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಇದೇ ವೇಳೆ ವೈಯಕ್ತಿಕವಾಗಿ ಒಂದು ಲಕ್ಷ ರುಪಾಯಿ ನೆರವು ನೀಡಿದರು.

ಇನ್ನು, ಮಂಗಳವಾರ ಗುಡ್ಡೆಮರಡಿಯ ಹಿಂದೂ ರುದ್ರಭೂಮಿಯಲ್ಲಿ ಹಾಲುಮತ ಸಂಪ್ರದಾಯದಂತೆ ಸಂಕೇತ್ (16) ಅಂತ್ಯಕ್ರಿಯೆ ನೆರವೇರಿಸಲಾಯಿತು. ಬಾಲಕ ಸಂಕೇತ್ ಮನೆಯಿಂದ ಗುಡ್ಡೆಮರಡಿವರೆಗೆ ಮೃತದೇಹದ ಮೆರವಣಿಗೆ ನಡೆಸಲಾಯಿತು. ಬಾಲಕನ ಸಾವಿಗೆ ಊರುಗಡೂರಿನ ಸರ್ವಧರ್ಮಿಯ ನಿವಾಸಿಗಳು ಮರುಗಿದರು.
ಆಸ್ಪತ್ರೆಯಿಂದ ಮೆರವಣಿಗೆ, ರಸ್ತೆ ತಡೆ
ಕಳೆದ ರಾತ್ರಿ ಊರುಗಡೂರಿನಲ್ಲಿ ಗಲಾಟೆ ಬಿಡಿಸಲು ಹೋದ ಸಂಕೇತ್ ಮೇಲೆ ಅಪ್ರಾಪ್ತರು ದಾಳಿ ನಡೆಸಿದ್ದರು. ಈ ವೇಳೆ ಕುಸಿದು ಬಿದ್ದಿದ್ದ ಸಂಕೇತ್ ಕೊನೆಯುಸಿರೆಳೆದಿದ್ದ. ಮಂಗಳವಾರ ಬೆಳಗ್ಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಸಂಕೇತ್ ಮರಣೋತ್ತರ ಪರೀಕ್ಷೆ ನಡೆದು ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರ ಮಾಡಲಾಯಿತು. ಈ ಸಂದರ್ಭ ಊರುಗಡೂರು ನಿವಾಸಿಗಳು ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು ಮೆಗ್ಗಾನ್ ಆಸ್ಪತ್ರೆಯಿಂದಲೇ ಮೆರವಣಿಗೆ ನಡೆಸಿದರು.

ರಸ್ತೆ ತಡೆ, ಪರಿಹಾರಕ್ಕೆ ಪಟ್ಟು
ಅಶೋಕ ವೃತ್ತದ ಬಳಿ ರಸ್ತೆ ತಡೆ ಮಾಡಿದ ಊರುಗಡೂರು ನಿವಾಸಿಗಳು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದರು. ಅಲ್ಲದೆ ಸೂಳೆಬೈಲು, ಊರುಗಡೂರು ಭಾಗದಲ್ಲಿ ಗಾಂಜಾ ಹಾಳಿ ತಡೆಗೆ ಒತ್ತಾಯಿಸಿದರು. ಸಂಕೇತ್ ಕುಟುಂಬಕ್ಕೆ ಪರಿಹಾರ ನೀಡುವಂತೆ ಪಟ್ಟು ಹಿಡಿದರು. ಮೃತದೇಹ ಊರುಗಡೂರು ತಲುಪಿದಾಗ ಮೃತದೇಹವಿದ್ದ ಆಂಬುಲೆನ್ಸನ್ನು ಅಲ್ಲಿನ ಮುಖ್ಯರಸ್ತೆಯಲ್ಲೇ ನಿಲ್ಲಿಸಿಕೊಂಡು ಕುಟುಂಬದವರು, ಸ್ಥಳೀಯರು ಪ್ರತಿಭಟನೆ ನಡೆಸಿದರು.

ಪರಿಹಾರ ನೀಡಲು ಒಪ್ಪಿದ ಸರ್ಕಾರ
ಸಂಕೇತ್ ಮೃತದೇಹ ಊರುಗಡೂರು ತಲುಪುತ್ತಿದ್ದಂತೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಶಾಸಕ ಎಸ್.ಎನ್.ಚನ್ನಬಸಪ್ಪ ಸ್ಥಳಕ್ಕೆ ದೌಡಾಯಿಸಿದರು. ಸಂಕೇತ್ ಕುಟುಂಬಕ್ಕೆ ಪರಿಹಾರಕ್ಕೆ ಆಗ್ರಹಿಸಿದರು. ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾ ರಕ್ಷಣಾಧಿಕಾರಿ ಬಿ.ನಿಖಲ್ ಸ್ಥಳಕ್ಕೆ ಬಂದು ಕುಟುಂಬದವರು, ಸ್ಥಳೀಯರ ದುಮ್ಮಾನ ಆಲಿಸಿದರು. ಬಳಿಕ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರೊಂದಿಗೆ ಚರ್ಚೆ ನಡೆಸಿದರು.

ಅಂತಿಮ ದರ್ಶನದ ವೇಳೆ ಕಣ್ಣೀರಾದ ಜನ
ಸಂಕೇತ್ ಮನೆ ಮಂದೆಯೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭ ಇಡೀ ಬಡಾವಣೆಯ ಜನರು ಮೃತದೇಹದ ದರ್ಶನ ಮಾಡಿ ಕುಟುಂಬಕ್ಕೆ ಧೈರ್ಯ ಹೇಳಿದರು. ಅಂತಿಮ ದರ್ಶನದ ವೇಳೆ ಏನೇನಾಯ್ತು? ಇಲ್ಲಿದೆ ಪಾಯಿಂಟ್ಸ್

ಸಂಕೇತ್ ಮೃತದೇಹದ ಮುಂದೆ ಆತನ ಪೋಷಕರು, ಸಹೋದರಿಯ ಆಕ್ರಂದನ ಮುಗಿಲು ಮುಟ್ಟಿತ್ತು. ಸಂಬಂಧಿಕರು, ನೆರೆಹೊರೆ ಮನೆಯವರು ಕೂಡ ಸಂಕೇತ್ನನ್ನು ನೆನೆದು ಕಣ್ಣೀರಾದರು.
ಇದನ್ನೂ ಓದಿ – ಗದ್ದುಗೆ ಏರಿದ ಮಾರಮ್ಮ, ಗಾಂಧಿ ಬಜಾರ್ನಲ್ಲಿ ಹೇಗಿತ್ತು ದೇವಿಯ ದರ್ಶನ? ಇಲ್ಲಿವೆ ಫೋಟೊ, ಮಾಹಿತಿ
ಕುಟುಂಬದವರ ಆಕ್ರಂದನ ಕಂಡು ಮುಸ್ಲಿಂ ಸಮುದಾಯದ ಮಹಿಳೆಯರು, ಭದ್ರತೆಗೆ ಬಂದಿದ್ದ ಮಹಿಳಾ ಪೊಲೀಸ್ ಸಿಬ್ಬಂದಿಯ ಕಣ್ಣುಗಳು ತೇವವಾಗಿದ್ದವು.

ಶಾಸಕ ಎಸ್.ಎನ್.ಚನ್ನಬಸಪ್ಪ ಅಂತಿಮ ದರ್ಶನ ಪಡೆದು, ಕುಟುಂಬದವರಿಗೆ ಸಾಂತ್ವನ ಹೇಳಿದರು. ಮಾಜಿ ಸಂಸದ ಆಯನೂರು ಮಂಜುನಾಥ್ ಕೂಡ ಸಂಕೇತ್ ಮನೆ ಬಳಿ ಆಗಮಿಸಿದ್ದರು.

ಸೂಳೆಬೈಲಿನ ಮುಸ್ಲಿಂ ಸಮುದಾಯದ ಪ್ರಮುಖರು ದೊಡ್ಡ ಸಂಖ್ಯೆಯಲ್ಲಿ ಆಗಮಿಸಿ ಅಂತಿಮ ದರ್ಶನ ಪಡೆದರು. ಸಂಕೇತ್ನ ಪೋಷಕರ ಜೊತೆಗೆ ನಿಲ್ಲಸುವುದಾಗಿ ಭರವಸೆ ನೀಡಿದರು. ಅಲ್ಲದೆ ತಪ್ಪಿಸ್ಥರ ವಿರುದ್ಧ ಕಠಿಣ ಕ್ರಮ ಆಗಬೇಕು ಎಂದು ಆಗ್ರಹಿಸಿದರು.

ಸಂಕೇತ್ನ ಸಹಪಾಠಿಗಳು, ಸ್ನೇಹಿತರು ಕೂಡ ಮೃತದೇಹದ ಮುಂದೆ ರೋದಿಸಿದರು. ಸ್ನೇಹಿತನನ್ನು ಕಳೆದುಕೊಂಡ ದುಃಖ ಉಮ್ಮಳಿಸಿ ಬಂದು ಅಳುತ್ತಿದ್ದರು.

ಮಧ್ಯಾಹ್ನದ ವೇಳೆಗೆ ಗುಡ್ಡೆಮರಡಿಯ ಹಿಂದು ರುದ್ರಭೂಮಿಯಲ್ಲಿ ಸಂಕೇತ್ ಅಂತ್ಯಕ್ರಿಯೆ ನೆರವೇರಿಸಲಾಯಿತು.
LATEST NEWS
- ಶಿವಮೊಗ್ಗ ಮಾರುಕಟ್ಟೆಯಲ್ಲಿ ಇವತ್ತು ಎಷ್ಟಿದೆ ಅಡಿಕೆ ರೇಟ್? | 25 ಫೆಬ್ರವರಿ 2026

- ಊರುಗಡೂರಿನ ಸಂಕೇತ್ ಮನೆಗೆ ಸಂಸದ ರಾಘವೇಂದ್ರ ಭೇಟಿ, ಒಂದು ಲಕ್ಷ ರುಪಾಯಿ ನೆರವು

- ಗದ್ದುಗೆ ಏರಿದ ಮಾರಮ್ಮ, ಗಾಂಧಿ ಬಜಾರ್ನಲ್ಲಿ ಹೇಗಿತ್ತು ದೇವಿಯ ದರ್ಶನ? ಇಲ್ಲಿವೆ ಫೋಟೊ, ಮಾಹಿತಿ

- ಶಿವಮೊಗ್ಗ ಜಿಲ್ಲೆಯ ಹಲವೆಡೆ ಮಳೆ, ತುಸು ತಗ್ಗಿದ ತಾಪಮಾನ, ಇವತ್ತು ಹೇಗಿರುತ್ತೆ ವಾತಾವರಣ?

- ಶಿವಮೊಗ್ಗದಲ್ಲಿ ಉದ್ಯೋಗ ಮೇಳ, ಐಟಿ, ಬ್ಯಾಂಕಿಂಗ್ ಸೇರಿ ವಿವಿಧ ಕಂಪನಿಗಳು ಭಾಗಿ, ಯಾವಾಗ? ಎಲ್ಲಿ?

About The Editor
ನಿತಿನ್ ಆರ್.ಕೈದೊಟ್ಲು





