ಶಿವಮೊಗ್ಗ: ಜಿಲ್ಲೆಯ ಎಲ್ಲ ತಾಲೂಕಿಗು ರೈಲ್ವೆ (Shimoga Railway) ಸಂಪರ್ಕ ಕಲ್ಪಿಸುವ ಗುರಿ ಇದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು. ಶಿವಮೊಗ್ಗದ ಪತ್ರಿಕಾ ಭವನದಲ್ಲಿ ಪ್ರೆಸ್ಟ್ ಟ್ರಸ್ಟ್ ಮತ್ತು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಸಂಸದ ರಾಘವೇಂದ್ರ, ಜಿಲ್ಲೆಯ ರೈಲ್ವೆ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಸುದ್ದಿಯ ಮುಂದಿನ 10 ಪ್ಯಾರಾಗಳು ಕೆಳಗಿವೆ.
ಸಂಸದ ರಾಘವೇಂದ್ರ ಏನೆಲ್ಲ ಹೇಳಿದರು? ಇಲ್ಲಿದೆ ಪಾಯಿಂಟ್ಸ್

1 ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ರೈಲ್ವೆ ಯೋಜನೆ: ಈ ಬಹುನಿರೀಕ್ಷಿತ ರೈಲ್ವೆ ಮಾರ್ಗದ ಕಾಮಗಾರಿಗೆ ಸಂಬಂಧಿಸಿದಂತೆ ಈಗಾಗಲೇ ಶೇ. 75 ರಷ್ಟು ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ. ರೈತರಿಗೆ ಪರಿಹಾರದ ಹಣವನ್ನು ವಿತರಿಸಲು ಇನ್ನೂ ಸುಮಾರು 100 ಕೋಟಿ ರೂಪಾಯಿಗಳ ಅನುದಾನದ ಅವಶ್ಯಕತೆಯಿದೆ. ಈ ಭೂಸ್ವಾಧೀನ ಪ್ರಕ್ರಿಯೆಯು ಒಟ್ಟಾರೆ ಶೇ. 90 ರಷ್ಟು ಪೂರ್ಣಗೊಂಡ ತಕ್ಷಣವೇ ರೈಲ್ವೆ ಇಲಾಖೆಯು ಕಾಮಗಾರಿಯ ಟೆಂಡರ್ ಪ್ರಕ್ರಿಯೆಯನ್ನು ಆರಂಭಿಸಲಿದೆ.

2 ನಗರ ಮೂಲಸೌಕರ್ಯ ಮತ್ತು ಮೇಲ್ಸೇತುವೆ: ಶಿವಮೊಗ್ಗ ನಗರದ ಗುಂಡಪ್ಪ ಶೆಡ್, ವಿದ್ಯಾನಗರದ ಅಂಡರ್ ಪಾಸ್ ಕಾಮಗಾರಿಗಳು ಶೀಘ್ರ ಆರಂಭವಾಗಲಿವೆ. ಅಲ್ಲದೆ, ಫ್ರೀಡಂ ಪಾರ್ಕ್ ಬಳಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಸಿ.ಆರ್.ಎಫ್ (CRF) ಅನುದಾನದಡಿ ಹೊಸ ಮೇಲ್ಸೇತುವೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಇದಕ್ಕೆ ಬಜೆಟ್ನಲ್ಲಿ ಒಪ್ಪಿಗೆ ದೊರೆತಿದೆ ಎಂದು ವಿವರಿಸಿದರು.
ಇದನ್ನೂ ಓದಿ » ಶಿವಮೊಗ್ಗ ಜಿಲ್ಲಾಧಿಕಾರಿಗೆ ಸೈಬರ್ ವಂಚಕರ ಕಾಟ, ಆಗಿದ್ದೇನು? ಪ್ರಕಟಣೆಯಲ್ಲಿ ಡಿಸಿ ಹೇಳಿದ್ದೇನು?
3 ಶಿವಮೊಗ್ಗ – ಕೋಟೆಗಂಗೂರು ದ್ವಿಪಥ ಮಾರ್ಗ: ಶಿವಮೊಗ್ಗದಿಂದ ಬೀರೂರಿನವರೆಗೆ ದ್ವಿಪಥ ಮಾರ್ಗ ಆಗಬೇಕಿದೆ. ಅದನ್ನು ಕೋಟೆಗಂಗೂರಿನಲ್ಲಿ ನಿರ್ಮಾಣವಾಗುತ್ತಿರುವ ಹೊಸ ಟರ್ಮಿನಲ್ವರೆಗೆ ವಿಸ್ತರಿಸಲಾಗುತ್ತದೆ. ಈ ದ್ವಿಪಥ ಮಾರ್ಗವು ಪೂರ್ಣಗೊಂಡಲ್ಲಿ ರೈಲುಗಳ ಸಂಚಾರದ ವೇಗ ಮತ್ತು ಸಾಮರ್ಥ್ಯ ಹೆಚ್ಚಾಗಲಿದೆ.
4 ವಂದೇ ಭಾರತ್ ರೈಲು ವಿಳಂಬಕ್ಕೆ ಕಾರಣ: ಶಿವಮೊಗ್ಗಕ್ಕೆ ವಂದೇ ಭಾರತ್ ರೈಲನ್ನು ತರುವ ಕುರಿತು ಸಾರ್ವಜನಿಕರಲ್ಲಿ ಹೆಚ್ಚಿನ ನಿರೀಕ್ಷೆಯಿದೆ. ಆದರೆ, ಈ ರೈಲು ಆರಂಭವಾಗಲು ಕೋಟೆಗಂಗೂರಿನ ರೈಲ್ವೆ ಟರ್ಮಿನಲ್ ಕಾಮಗಾರಿ ಪೂರ್ಣಗೊಳ್ಳುವುದು ಅತ್ಯಗತ್ಯವಾಗಿದೆ. ವಂದೇ ಭಾರತ್ ರೈಲಿಗೆ ಅಗತ್ಯವಿರುವ ಶುಚಿಗೊಳಿಸುವಿಕೆ, ನಿರ್ವಹಣೆ ಮತ್ತು ಪ್ಲಾಟ್ಫಾರ್ಮ್ ಸೌಲಭ್ಯಗಳು ಕೋಟೆಗಂಗೂರು ಟರ್ಮಿನಲ್ನಲ್ಲಿ ಲಭ್ಯವಿರಲಿವೆ. ಅಲ್ಲಿಯವರೆಗೆ ತಾಂತ್ರಿಕ ಕಾರಣಗಳಿಂದಾಗಿ ವಂದೇ ಭಾರತ್ ರೈಲು ಸಂಚಾರ ಆರಂಭಿಸುವುದು ಸ್ವಲ್ಪ ವಿಳಂಬವಾಗಬಹುದು.

5 ಕೋಟೆಗಂಗೂರು ಟರ್ಮಿನಲ್: ಕೋಟೆಗಂಗೂರಿನಲ್ಲಿ ನಿರ್ಮಾಣವಾಗುತ್ತಿರುವ ಹೊಸ ರೈಲ್ವೆ ಟರ್ಮಿನಲ್ ಶಿವಮೊಗ್ಗ ನಗರಕ್ಕೆ ಪರ್ಯಾಯ ಕೇಂದ್ರವಾಗಲಿದೆ. ಈ ಟರ್ಮಿನಲ್ ಉದ್ಘಾಟನೆಯಾದ ನಂತರ ಶಿವಮೊಗ್ಗದಿಂದ ಬೆಂಗಳೂರು ಸೇರಿದಂತೆ ಇತರ ಪ್ರಮುಖ ನಗರಗಳಿಗೆ ಹೆಚ್ಚಿನ ರೈಲುಗಳನ್ನು ಆರಂಭಿಸಲು ಮತ್ತು ವಂದೇ ಭಾರತ್ ಎಕ್ಸ್ಪ್ರೆಸ್ಗೆ ಚಾಲನೆ ನೀಡಲು ಹಾದಿ ಸುಗಮವಾಗಲಿದೆ.
6 ಹೊಸ ರೈಲ್ವೆ ಮಾರ್ಗಗಳ ಸರ್ವೇ: ಶಿವಮೊಗ್ಗ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿ ಸುಮಾರು 4 ರಿಂದ 5 ಹೊಸ ರೈಲ್ವೆ ಮಾರ್ಗಗಳ ಪ್ರಾಥಮಿಕ ಸರ್ವೇ ಕಾರ್ಯಕ್ಕೆ ಕೇಂದ್ರ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿದೆ. ಇದರಲ್ಲಿ ಮುಖ್ಯವಾಗಿ ಚಿಕ್ಕಜಾಜೂರಿನಿಂದ ಭದ್ರಾವತಿಯವರೆಗೆ, ಶಿಕಾರಿಪುರದಿಂದ ರಾಣೆಬೆನ್ನೂರು ಲಿಂಕ್ ಮತ್ತು ಶಿವಮೊಗ್ಗದಿಂದ ತೀರ್ಥಹಳ್ಳಿ-ಶೃಂಗೇರಿ ಮಾರ್ಗವಾಗಿ ಕರಾವಳಿ ಭಾಗಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗಗಳು ಸೇರಿವೆ. ಈ ಸರ್ವೇ ವರದಿಗಳು ಬಂದ ನಂತರ ಯೋಜನೆಯ ಆರ್ಥಿಕ ಲಭ್ಯತೆ ಆಧರಿಸಿ ಯೋಜನೆ ಕಾರ್ಯಗತವಾಗಲಿದೆ.

7 ಮಂಗಳೂರು – ಹುಬ್ಬಳ್ಳಿ ಸಂಪರ್ಕ ಕ್ರಾಂತಿ: ಮಲೆನಾಡು ಮತ್ತು ಕರಾವಳಿಯನ್ನು ಬೆಸೆಯುವ ನಿಟ್ಟಿನಲ್ಲಿ ಮಂಗಳೂರು – ಶೃಂಗೇರಿ – ಹೊನ್ನಾವರ – ತಾಳಗುಪ್ಪ – ಹುಬ್ಬಳ್ಳಿ ಮಾರ್ಗದ ಬಗ್ಗೆಯೂ ಗಂಭೀರ ಚಿಂತನೆ ನಡೆದಿದೆ. ಈ ಮಾರ್ಗವು ಪೂರ್ಣಗೊಂಡರೆ ಕರಾವಳಿ ಮತ್ತು ಉತ್ತರ ಕರ್ನಾಟಕದ ನಡುವಿನ ಅಂತರ ಗಣನೀಯವಾಗಿ ಕಡಿಮೆಯಾಗಲಿದೆ. ಶಿವಮೊಗ್ಗದ ಎಲ್ಲ ತಾಲೂಕಿಗು ರೈಲ್ವೆ ಸಂಪರ್ಕ ಕಲ್ಪಿಸಬೇಕು. ಸದ್ಯ ಸೊರಬ ಮತ್ತು ತೀರ್ಥಹಳ್ಳಿಗೆ ರೈಲ್ವೆ ಸಂಪರ್ಕ ಇಲ್ಲ. ಈ ತಾಲೂಕುಗಳು ರೈಲ್ವೆ ಯೋಜನೆಗೆ ಒಳಗೊಳ್ಳುವಂತೆ ಮಾಡುವ ಗುರಿ ಇದೆ.

8 ತಾಳಗುಪ್ಪ – ಶಿರಸಿ – ಹುಬ್ಬಳ್ಳಿ ಮಾರ್ಗ: ಈ ಹಿಂದೆಯೇ ಪ್ರಸ್ತಾಪಿಸಲಾಗಿದ್ದ ತಾಳಗುಪ್ಪ – ಶಿರಸಿ – ಹುಬ್ಬಳ್ಳಿ ರೈಲ್ವೆ ಮಾರ್ಗದ ಬಗ್ಗೆಯೂ ಚರ್ಚೆ ಇದೆ. ಇದು ಪ್ರಯಾಣಿಕರಿಗಷ್ಟೇ ಅಲ್ಲದೆ ಈ ಭಾಗದ ಕೃಷಿ ಉತ್ಪನ್ನಗಳ ಸಾಗಾಣಿಕೆಗೂ ದೊಡ್ಡ ಮಟ್ಟದ ನೆರವು ನೀಡಲಿದೆ. ಸರ್ವೇ ಕಾರ್ಯಗಳನ್ನು ಆದಷ್ಟು ಬೇಗ ಮುಗಿಸಿ ಕೇಂದ್ರ ರೈಲ್ವೆ ಇಲಾಖೆಗೆ ವರದಿ ಸಲ್ಲಿಸುವ ಗುರಿ ಹೊಂದಲಾಗಿದೆ.
