ಶಿವಮೊಗ್ಗ : ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಶಿವಮೊಗ್ಗಕ್ಕೆ ಆಗಮಿಸಿದ್ದ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರನ್ನು ತಡೆದ ಪೊಲೀಸರು (Police), ಎನ್.ಆರ್.ಪುರ ತಾಲೂಕಿಗೆ ಬಿಟ್ಟು ಬಂದಿದ್ದಾರೆ. ಕಳೆದ ರಾತ್ರಿ ಶಿವಮೊಗ್ಗ – ಹೊನ್ನಾಳಿ ರಸ್ತೆಯ ಮೇಲ್ಸೇತುವೆ ಬಳಿ ಮುತಾಲಿಕ್ ಅವರ ಕಾರು ತಡೆದು ಜಿಲ್ಲಾಧಿಕಾರಿ ಆದೇಶ ನೀಡಿ, ಗಡಿ ದಾಟಿಸಿದ್ದಾರೆ.
ಪುಸ್ತಕ ಬಿಡುಗಡೆ ಕಾರ್ಯಕ್ರಮ
ಶ್ರೀರಾಮ ಸೇನೆ ವತಿಯಿಂದ ಪ್ರಕಟಿಸಲಾಗಿರುವ ಲವ್ ಜಿಹಾದ್ ಪುಸ್ತಕ ಬಿಡುಗಡೆಗೆ ಪ್ರಮೋದ್ ಮುತಾಲಿಕ್ ಶಿವಮೊಗ್ಗಕ್ಕೆ ಆಗಮಿಸಿದ್ದರು. ನಗರದ ಪತ್ರಿಕಾ ಭವನದಲ್ಲಿ ಬೆಳಗ್ಗೆ 11 ಗಂಟೆಗೆ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಿಗದಿಯಾಗಿತ್ತು. ಬಳಿಕ ಶುಭಂ ಹೊಟೇಲ್ನಲ್ಲಿ ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು. ನಂತರ ಪ್ರಮೋದ್ ಮುತಾಲಿಕ್ ಭದ್ರಾವತಿಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿತ್ತು.
ವಾಹನ ತಡೆದು ಪೊಲೀಸರಿಂದ ನೊಟೀಸ್
ಪ್ರಮೋದ್ ಮುತಾಲಿಕ್ ಶಿವಮೊಗ್ಗ ಪ್ರವೇಶ ನಿಷೇಧಿಸಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶ ಹೊರಡಿಸಿದ್ದರು. ಈ ಹಿನ್ನೆಲೆ, ಕಳೆದ ರಾತ್ರಿ ಶಿವಮೊಗ್ಗ – ಹೊನ್ನಾಳಿ ರಸ್ತೆಯ ರಾಗಿಗುಡ್ಡ ತಿರುವಿನಲ್ಲಿ ಪೊಲೀಸರು ಪ್ರಮೋದ್ ಮುತಾಲಿಕ್ ಕಾರು ತಡೆದ ಪೊಲೀಸರು, ಆದೇಶ ಪ್ರತಿ ಕೈಗಿಟ್ಟರು. ಇದರಿಂದ ಕೆರಳಿದ ಪ್ರಮೋದ್ ಮುತಾಲಿಕ್, ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ತಾಲಿಬಾನ್ ಸರ್ಕಾರದಂತೆ ನಡೆದುಕೊಳ್ಳುತ್ತಿದೆ. ಹಿಂದೂ ವಿರೋಧಿಯಾಗಿದೆ. ನನ್ನ ವಿರುದ್ಧ ಇಲ್ಲಿ ಯಾವುದೇ ಪ್ರಕರಣ ಇಲ್ಲ. ಇನ್ನು, ಪುಸ್ತಕ ಬಿಡುಗಡೆ ಕಾರ್ಯಕ್ರಮ ಒಳಾಂಗಣದಲ್ಲಿ ಆಯೋಜಿಸಲಾಗಿದೆ. ಪತ್ರಿಕಾಗೋಷ್ಠಿಗೆ ಪತ್ರಕರ್ತರು ಮಾತ್ರ ಬರುತ್ತಾರೆ. ಇದರ ಹೊರತು ಯಾವುದೇ ಬಹಿರಂಗ ಸಭೆ ಅಥವಾ ಮೆರವಣಿಗೆ ಇಲ್ಲ. ಹಾಗಿದ್ದು ನಾನು ನಗರ ಪ್ರವೇಶಿಸದಂತೆ ತಡೆಯಲಾಗಿದೆ.
ಪ್ರಮೋದ್ ಮುತಾಲಿಕ್, ಶ್ರೀರಾಮ ಸೇನೆ ಸಂಸ್ಥಾಪಕ
ಜಿಲ್ಲಾಧಿಕಾರಿ ಆದೇಶದಲ್ಲಿ ಏನಿದೆ?
ಪ್ರಬಲ ಹಿಂದೂ ಧರ್ಮದ ಪ್ರತಿಪಾದಕರಾಗಿವ ಪ್ರಮೋದ್ ಮುತಾಲಿಕ್ ಇನ್ನೊಂದು ಧರ್ಮದ ಬಗ್ಗೆ ದ್ವೇಷ, ವೈಷಮ್ಯ ಹುಟ್ಟಿಸುವಂತೆ ಭಾಷಣ ಮಾಡುತ್ತಾರೆ. ಅವರ ವಿರುದ್ಧ ರಾಜ್ಯದ ವಿವಿಧೆಡೆ 30 ಪ್ರಕರಣಗಳಿವೆ. ಶಿವಮೊಗ್ಗ ಸೂಕ್ಷ್ಮ ಪ್ರದೇಶವಾಗಿರುವುದರಿಂದ ಪ್ರಮೋದ್ ಮುತಾಲಿಕ್ ಅವರ ಶಿವಮೊಗ್ಗ ಪ್ರವೇಶ ನಿರ್ಬಂಧಿಸಬೇಕು ಎಂದು ಪೊಲೀಸ್ ಇಲಾಖೆ ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಿತ್ತು. ಅದರಂತೆ ಪ್ರಮೋದ್ ಮುತಾಲಿಕ್ ಅವರ ಶಿವಮೊಗ್ಗ ಪ್ರವೇಶವನ್ನು ಪ್ರತಿಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶಿಸಿದ್ದರು.
ಎಂಎಲ್ಎ, ಕಾರ್ಯಕರ್ತರು ದೌಡು
ಪ್ರಮೋದ್ ಮುತಾಲಿಕ್ ಅವರನ್ನು ಪೊಲೀಸರು ತಡೆದ ವಿಷಯ ತಿಳಿಯುತ್ತಿದ್ದಂತೆ ಶಾಸಕ ಎಸ್.ಎನ್.ಚನ್ನಬಸಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಈ.ಕಾಂತೇಶ್, ಪ್ರಮುಖರಾದ ದೀನದಯಾಳು, ವಕೀಲ ರಾಜೇಶ್ ಶಾಸ್ತ್ರಿ ಸೇರಿದಂತೆ ಹಲವು ಕಾರ್ಯಕರ್ತರು ಸ್ಥಳಕ್ಕೆ ದೌಡಾಯಿಸಿದರು. ಇದೇ ವೇಳೆ ರಸ್ತೆಯಲ್ಲೆ ಲವ್ ಜಿಹಾದ್ ಪುಸ್ತಕ ಮತ್ತು ಪೋಸ್ಟರ್ಗಳನ್ನು ಪ್ರಮೋದ್ ಮುತಾಲಿಕ್ ಬಿಡುಗಡೆ ಮಾಡಿದರು. ಕಾರಿನಲ್ಲಿ ಕುಳಿತು ಊಟ ಮಾಡಿದರು.

ಜಿಲ್ಲೆಯ ಗಡಿವರೆಗೆ ಎಸ್ಕಾರ್ಟ್
ಪ್ರಮೋದ್ ಮುತಾಲಿಕ್ ಕಾರಿಗೆ ಶಿವಮೊಗ್ಗದಿಂದ ಡಿವೈಎಸ್ಪಿ ಸಂಜೀವ್ ಕುಮಾರ್ ಅವರ ನೇತೃತ್ವದಲ್ಲಿ ಎಸ್ಕಾರ್ಟ್ ಮಾಡಲಾಯಿತು. ತಡರಾತ್ರಿ ಪೊಲೀಸರು ಪ್ರಮೋದ್ ಮುತಾಲಿಕ್ ಅವರನ್ನು ಜಿಲ್ಲೆಯ ಗಡಿ ದಾಟಿಸಿದ್ದು, ಎನ್.ಆರ್.ಪುರಕ್ಕೆ ಕರೆದೊಯ್ದು ಬಿಡಲಾಗಿದೆ.

ಸ್ಥಳದಲ್ಲಿ ಬಿಗಿ ಭದ್ರತೆ
ಪ್ರಮೋದ್ ಮುತಾಲಿಕ್ ಅವರನ್ನು ತಡೆ ಸ್ಥಳದಲ್ಲಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಸಾಧ್ಯತೆ ಇದ್ದಿದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಎಲ್ಲಾ ಠಾಣೆಗಳ ಇನ್ಸ್ಪೆಕ್ಟರ್ಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಇದನ್ನೂ ಓದಿ » ಶಿವಮೊಗ್ಗದಲ್ಲಿ ಮೂರು ದಿನ ಉಪ ಲೋಕಾಯುಕ್ತ ಟೂರ್, ಕಚೇರಿಗಳಿಗೆ ದಿಢೀರ್ ಭೇಟಿಗೆ ಪ್ಲಾನ್
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200