ಶಿವಮೊಗ್ಗ: ಕೇಂದ್ರ ಸರ್ಕಾರ ಗೊಬ್ಬರದ (Fertilizer) ಬೆಲೆ ಹೆಚ್ಚಳ ಮಾಡಿದೆ ಎಂದು ಆರೋಪಿಸಿ ಯುವ ಕಾಂಗ್ರೆಸ್ನ ಗ್ರಾಮಾಂತರ ಘಟಕದ ವತಿಯಿಂದ ಶಿವಮೊಗ್ಗ ಕೃಷಿ ಇಲಾಖೆ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಕೇಂದ್ರ ಸರ್ಕಾರ ವರ್ಷದಿಂದ ವರ್ಷಕ್ಕೆ ಗೊಬ್ಬರದ ಬೆಲೆ ಹೆಚ್ಚಳ ಮಾಡಿ, ರೈತರಿಗೆ ಸಂಕಷ್ಟ ತಂದೊಡ್ಡಿದೆ. ಕಳೆದ ವರ್ಷ ಇಫ್ಕೊ ರಸಗೊಬ್ಬರ ಪ್ರತಿ ಚೀಲಕ್ಕೆ ₹1250 ಇತ್ತು. ಈ ವರ್ಷ ₹1650ಕ್ಕೆ ಏರಿಕೆಯಾಗಿದೆ. ಆರ್ಸಿಎಫ್ ಗೊಬ್ಬರ ₹1470 ರಿಂದ ₹1650ಕ್ಕೆ ಏರಿಕೆಯಾಗಿದೆ. ಹೀಗೆ ಪ್ರತಿ ಮಾದರಿಯ ಗೊಬ್ಬರದ ದರವು ಹೆಚ್ಚಳವಾಗಿದೆ ಎಂದು ಯುವ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ಗೊಬ್ಬರದ ಮೇಲಿನ ಸಬ್ಸಿಡಿ ತೆಗೆದಿದೆ. ಅಲ್ಲದೆ ಗೊಬ್ಬರದ ಬೆಲೆ ನಿರಂತರವಾಗಿ ಹೆಚ್ಚಳ ಮಾಡಲಾಗುತ್ತಿದೆ. ರೈತರು ಬೆಳೆ ಬೆಳೆಯಲು ಕಷ್ಟವಾಗುತ್ತಿದೆ. ಅಡಿಕೆ ಬೆಳೆಗಾರರಿಗು ಕೇಂದ್ರ ಸರ್ಕಾರ ಆತಂಕ ಮೂಡಿಸಿದೆ. ಮುಂದೆ ಅಡಿಕೆಗು ಸಂಚಕಾರ ತರಲಿದ್ದಾರೆ. ಡಾ. ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ರೈತರ ಸಾಲ ಮನ್ನಾ ಮಾಡಲಾಗಿತ್ತು. ಅದೇ ರೀತಿ ಕೇಂದ್ರ ಸರ್ಕಾರ ಸಾಲ ಮನ್ನಾ ಮಾಡಬೇಕು.ಆರ್.ಪ್ರಸನ್ನ ಕುಮಾರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ
ಕಳೆದ ವರ್ಷ ₹1300 ಇದ್ದ ಗೊಬ್ಬರದ ಬೆಲೆ ಈಗ ₹1675ಗೆ ಹೆಚ್ಚಳವಾಗಿದೆ. ಪ್ರತಿ ಚೀಲ ಗೊಬ್ಬರದ ಮೇಲೆ ₹300ಕ್ಕಿಂತಲೂ ಹೆಚ್ಚಾಗಿದೆ. ಕಿಸಾನ್ ಸಮ್ಮಾನ್ ಮೂಲಕ ರೈತರಿಗೆ ವರ್ಷಕ್ಕೆ ₹4000 ಹಣ ನೀಡುತ್ತಿದ್ದೇವೆ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಗೊಬ್ಬರದ ಬೆಲೆ ಹೆಚ್ಚಳದ ಮೂಲಕ ಮುಂದಿನ ಬಾಗಿಲಿನಲ್ಲಿ ಕೊಟ್ಟು ಹಿಂಬಾಗಿಲಲ್ಲಿ ಕಸಿದುಕೊಳ್ಳುತ್ತಿದೆ.ವಿಜಯ ಕುಮಾರ್, ಹಾಪ್ಕಾಮ್ಸ್ ಅಧ್ಯಕ್ಷ
ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರ್ಷಿತ್ ಗೌಡ, ಗ್ರಾಮಾಂತರ ಅಧ್ಯಕ್ಷ ಪ್ರವೀಣ್.ಎಸ್, ಪ್ರಮುಖರಾದ ಮಧುಸೂದನ್, ಚೇತನ್, ಬ್ಲಾಕ್ ಅಧ್ಯಕ್ಷ ಶಶಿಕುಮಾರ್.ಕೆ.ಆರ್, ಪ್ರವೀಣ್, ಪ್ರಧಾನ ಕಾರ್ಯದರ್ಶಿ ಶಿವು, ಅಬ್ದುಲ್ಲಾ, ಚರಣ್, ತೌಫಿಕ್, ಗಿರೀಶ್ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.