ಶಿವಮೊಗ್ಗ: ಪೋಷಕರಿಗೆ ತಿಳಿಸದೆ ಮನೆಯಿಂದ ಬಂದಿದ್ದ 12 ವರ್ಷದ ಬಾಲಕನೊಬ್ಬನನ್ನು ಶಿವಮೊಗ್ಗ ಟೌನ್ ರೈಲು ನಿಲ್ದಾಣದಲ್ಲಿ ರಕ್ಷಿಸಿ, ಮಕ್ಕಳ ಕಲ್ಯಾಣ ಅಧಿಕಾರಿಗಳಿಗೆ ಸುರಕ್ಷಿತವಾಗಿ ಒಪ್ಪಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಕರಣ್ ರಕ್ಷಿಸಲ್ಪಟ್ಟ ಬಾಲಕ. ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.
ರೈಲ್ವೆ ಪೊಲೀಸರು ಜೂನ್ 16ರ ಸಂಜೆ 7:30ರ ಸುಮಾರಿಗೆ ಶಿವಮೊಗ್ಗ ಟೌನ್ ರೈಲು ನಿಲ್ದಾಣದ ಸಿಸಿಟಿವಿ ಮೇಲ್ವಿಚಾರಣೆ ನಡೆಸುತ್ತಿದ್ದರು. ಆಗ ಪ್ಲಾಟ್ಫಾರ್ಮ್ ಸಂಖ್ಯೆ 1ರಲ್ಲಿ ಬಾಲಕನೊಬ್ಬ ಸಂಶಯಾಸ್ಪದವಾಗಿ ತಿರುಗಾಡುತ್ತಿರುವುದು ಗಮನಕ್ಕೆ ಬಂದಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಆರ್ಪಿಎಫ್ನ ಸಹಾಯಕ ಪೊಲೀಸ್ ಉಪನಿರೀಕ್ಷಕ ವೈ.ಜೆ. ಭಾಸ್ಕರ್ ಅವರು ಬಾಲಕನನ್ನು ಸುರಕ್ಷಿತವಾಗಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಪೋಷಕರಿಗೆ ತಿಳಿಸದೆಯೇ ಮನೆಯಿಂದ ಹೊರಟು ಕಡೂರಿನಿಂದ ರೈಲಿನಲ್ಲಿ ಶಿವಮೊಗ್ಗಕ್ಕೆ ಬಂದಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ.

ಬಾಲಕ ಪತ್ತೆಯಾಗುತ್ತಿದ್ದಂತೆ ಆರ್ಪಿಎಫ್ ಅಧಿಕಾರಿಗಳು ಶಿವಮೊಗ್ಗ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ನೀಡಿದ್ದರು. ನಂತರ ಬಾಲಕನನ್ನು ಸೂಕ್ತ ದಾಖಲೆಗಳೊಂದಿಗೆ ಮಕ್ಕಳ ಸಹಾಯವಾಣಿ ಸಂಯೋಜಕರಿಗೆ ಹಸ್ತಾಂತರಿಸಲಾಗಿದೆ. ಸದ್ಯ ಬಾಲಕನಿಗೆ ಸಮಾಲೋಚನೆ ನಡೆಸಿ ಆತನನ್ನು ಕುಟುಂಬದೊಂದಿಗೆ ಮರುಸೇರ್ಪಡೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
