ಶಿವಮೊಗ್ಗ: ಸೃಜನಶೀಲತೆಯ ಆಕರ್ಷಣೆಗೆ ಸಾಹಿತ್ಯ ಹುಣ್ಣಿಮೆ ಪ್ರೇರಕ ಶಕ್ತಿಯಾಗಿದೆ. ಕಳೆದ 248 ತಿಂಗಳಿಂದ ವೃತವಾಗಿ ಆಚರಿಸಿಕೊಂಡು ಬಂದಿದ್ದೇವೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷರಾದ ಡಿ.ಮಂಜುನಾಥ ಹೇಳಿದರು. (rotary)
ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಹಾಗೂ ರೋಟರಿ ಮಿಡ್ ಟೌನ್ ವತಿಯಿಂದ ವಿನಾಯಕ ನಗರದ ರೋಟರಿ ರಕ್ತನಿಧಿ ಸಭಾಂಗಣದಲ್ಲಿ ಏರ್ಪಡಿಸಿದ್ದ 248 ನೇ ತಿಂಗಳ ಸಾಹಿತ್ಯ ಹುಣ್ಣಿಮೆ ಕಾರ್ಯಕ್ರಮ ಉದ್ಘಾಟಿಸಿ ಹಾಗೂ ಸಾಹಿತ್ಯ ವೇದಿಕೆಗೆ ರೋಟರಿ ನೀಡಿದ ವಿಶೇಷ ಸೇವಾ ಪ್ರಶಸ್ತಿ ಪಡೆದು ಮಾತನಾಡಿದರು.
ರೋಟರಿ ನೀಡಿದ ಈ ಪ್ರಶಸ್ತಿಯನ್ನು ಸಾಹಿತ್ಯ ಹುಣ್ಣಿಮೆಯ ಸಂಘಟನೆಯಲ್ಲಿ ಜೊತೆಯಾಗಿ, ಕೋವಿಡ್ ಸಂದರ್ಭದಲ್ಲಿ ನಿಧನರಾದ ಅಮೂಲ್ಯ ವ್ಯಕ್ತಿತ್ವಗಳಿಗೆ ಸಮರ್ಪಿಸಲು ಇಚ್ಚಿಸುತ್ತೇವೆ. ಆತಿಥ್ಯ ನೀಡುವ ಬಡಾವಣೆಗಳಲ್ಲಿರುವ ಪ್ರತಿಯೊಂದು ಮನೆಗಳಿಗೆ ತೆರಳಿ, ನಮ್ಮ ತಂಡ ಸಾಹಿತ್ಯ ಹುಣ್ಣಿಮೆಯ ಆಹ್ವಾನ ಪತ್ರಿಕೆ ನೀಡಿ ಆಹ್ವಾನಿಸುತ್ತದೆ. ಈ ಮೂಲಕ ಸಾಹಿತ್ಯ ಹುಣ್ಣಿಮೆಯತ್ತ ಸೃಜನಶೀಲತೆಯ ಆಕರ್ಷಣೆಯ ಪ್ರಯತ್ನ ಮಾಡುತ್ತಿದ್ದೇವೆ ಎಂದರು.
ಮಕ್ಕಳ ಸೃಜನಾತ್ಮಕ ಆಲೋಚನೆಗಳನ್ನು, ಇಂಗ್ಲೀಷ್ ಎಂಬ ವ್ಯಾಮೋಹಕ್ಕೆ ಸಿಲುಕಿ ಹಾಳು ಮಾಡಲಾಗುತ್ತಿದೆ. ಕನ್ನಡವನ್ನು ರಸವತ್ತಾಗಿ ಪಾಠ ಮಾಡುವತ್ತ ಕನ್ನಡ ಅಧ್ಯಾಪಕರಿಗೆ ಕಾರ್ಯಾಗಾರಗಳನ್ನು ಏರ್ಪಡಿಸಲಾಗುತ್ತಿದೆ. ಹಲವು ಭಾಷೆಗಳನ್ನು ಕಲಿಯಲು ಮಕ್ಕಳಿಗೆ ಪ್ರೇರಣೆ ನೀಡಬೇಕು. ತೋರಿಕೆಯ ಶಿಕ್ಷಣಕ್ಕಿಂತ, ಕ್ರಮಬದ್ಧ ಶಿಕ್ಷಣ ಅತ್ಯವಶ್ಯಕ. ಶಿಕ್ಷಕರಿಗೆ ಸೃಜನಶೀಲತೆಯ ಉತ್ತೇಜನ ನೀಡಬೇಕಿದೆ. ಪೋಷಕರು ಭಾಷೆಯನ್ನು ತಿದ್ದುವ ಕಡೆಗೆ ಒಂದಿಷ್ಟು ಕಾಳಜಿ ವಹಿಸಬೇಕಿದೆ ಎಂದು ಹೇಳಿದರು.

ರೋಟರಿ ಸೇವಾ ಪ್ರಶಸ್ತಿ ಪ್ರದಾನ
ರೋಟರಿ ಅಂತರಾಷ್ಟ್ರೀಯ ಸೇವಾ ಪ್ರಶಸ್ತಿ – 2026 ಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಭಾಜನವಾಗಿದ್ದು, ಸಾಹಿತ್ಯ ಹುಣ್ಣಿಮೆ ವೇದಿಕೆಯಲ್ಲಿ ಅಧ್ಯಕ್ಷ ಡಿ.ಮಂಜುನಾಥ ದಂಪತಿಗೆ ಪ್ರಶಸ್ತಿ ನೀಡಲಾಯಿತು. ರೋಟರಿ ಮಿಡ್ ಟೌನ್ ಅಧ್ಯಕ್ಷರಾದ ಹರ್ಷಾ ಕಾಮತ್ ಮತ್ತು ಪದಾಧಿಕಾರಿಗಳು ಪ್ರಶಸ್ತಿ ನೀಡಿ ಅಭಿನಂದಿಸಿದರು.
ಇದನ್ನೂ ಓದಿ : ಪ್ರಸಿದ್ಧ ರಂಗನಾಥ ಸ್ವಾಮಿಯ ನೂತನ ರಥ ಲೋಕಾರ್ಪಣೆ, ಮಿನಿಸ್ಟರ್ ಏನೆಲ್ಲ ಹೇಳಿದರು?
ರೋಟರಿ ಕ್ಲಬ್ ಮಿಡ್ ಟೌನ್ ಯಾನ್ಸ್ ಅಧ್ಯಕ್ಷೆ ಪವಿತ್ರ ಹರ್ಷಾ ಕಾಮತ್, ಪ್ರೀತಿ ದೀಪಕ್ ಸಾರತಿ, ಉಜ್ವಲ ರವಿಕುಮಾರ್, ರೋಟರಿ ಮಿಡ್ ಟೌನ್ ಸಹ ಕಾರ್ಯದರ್ಶಿ ಸಂತೋಷ್, ನಿವೃತ್ತ ಪ್ರಾಂಶುಪಾಲ ಡಾ.ಧನಂಜಯ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.


About The Editor
ನಿತಿನ್ ಆರ್.ಕೈದೊಟ್ಲು






