ಶಿವಮೊಗ್ಗ: ದಶಕಗಳ ಹಿಂದೆ ದಾಖಲೆ ಸಲ್ಲಿಸಿ ಆಧಾರ್ (aadhaar card) ನೋಂದಣಿ ಮಾಡಿಸಿಕೊಂಡವರು ಪುನಃ ತಮ್ಮ ವಿವರ ಸಲ್ಲಿಸಿ ಅಪ್ಡೇಟ್ ಮಾಡಿಸಿಕೊಳ್ಳಬೇಕಿದೆ. ಈ ಕುರಿತು ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಪರ ಜಿಲ್ಲಾಧಿಕಾರಿ ಸಿದ್ದಲಿಂಗರೆಡ್ಡಿ ಸಭೆ ನಡೆಸಿ, ಸಾರ್ವಜನಿಕರಿಗೆ ಮಾಹಿತಿ ನೀಡಿದರು.
ಜಿಲ್ಲಾ ಮಟ್ಟದ ಆಧಾರ್ ನೋಂದಣಿ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಪರ ಜಿಲ್ಲಾಧಿಕಾರಿಯ ಸೂಚನೆಗಳೇನು?
ಪ್ರಸ್ತುತ ವಾಸಸ್ಥಳದ ವಿವರಗಳನ್ನು ತಮ್ಮ ಸಮೀಪದ ಅಂಚೆ ಕಚೇರಿ, ರಾಷ್ಟ್ರೀಕೃತ ಬ್ಯಾಂಕುಗಳು ಅಥವಾ ಆಧಾರ್ ಸೇವಾ ಕೇಂದ್ರಗಳಲ್ಲಿ ಸಲ್ಲಿಸಿ, ಆಧಾರ್ ನವೀಕರಿಸಿಕೊಳ್ಳಬೇಕು.
ಐದು ವರ್ಷದೊಳಗಿನ ಎಲ್ಲಾ ಮಕ್ಕಳ ಪೋಷಕರು ತಮ್ಮ ಮಕ್ಕಳ ಆಧಾರ್ ನೋಂದಣಿ ಮಾಡಿಸಿಕೊಳ್ಳಬೇಕು. ಈಗಾಗಲೇ ಆಧಾರ್ ನೋಂದಣಿ ಮಾಡಿಸಿದ್ದು, 5 ವರ್ಷಗಳ ಅವಧಿ ಪೂರ್ಣಗೊಂಡಿರುವ 92,317 ಮಕ್ಕಳು ಬಯೋಮೆಟ್ರಿಕ್ ಗುರುತನ್ನು ನೀಡಿ ನೋಂದಣಿ ಮಾಡಿಸಿಕೊಳ್ಳಬೇಕು. 15ವರ್ಷ ಮೇಲ್ಪಟ್ಟ 85,209 ಮಕ್ಕಳಿದ್ದು, ಆಧಾರ್ ನವೀಕರಿಸಿಕೊಳ್ಳಬೇಕು.

ಜಿಲ್ಲೆಯಲ್ಲಿ ಸುಮಾರು 27,533 ಮಕ್ಕಳು ಈವರೆಗೆ ಆಧಾರ್ ನೋಂದಣಿ ಮಾಡಿಸಿಲ್ಲ. ಈವರೆಗೆ ಆಧಾರ್ ಮಾಡಿಸದಿರುವ ಮಕ್ಕಳ ಪೋಷಕರು ಕೂಡಲೇ ಆಧಾರ್ ನೋಂದಣಿಗೆ ಮುಂದಾಗಬೇಕು.
ಮಕ್ಕಳು ವ್ಯಾಸಂಗ ಮಾಡುತ್ತಿರುವ ಶಾಲೆಗಳಲ್ಲಿಯೇ ಶಾಲಾ ಮುಖ್ಯೋಪಾಧ್ಯಾಯರಿಗೆ ಮಾಹಿತಿ ನೀಡಿ ಆಧಾರ್ ನೋಂದಾಯಿಸಿಕೊಳ್ಳಬಹುದು. ಶಾಲಾ ಶಿಕ್ಷಕರಿಗೆ ನೋಂದಣಿ ತರಬೇತಿ ನೀಡಲಾಗಿದೆ. ಶೇ.26.03ರಷ್ಟು ಮಕ್ಕಳು ನೋಂದಾಯಿಸಿರುವ ಹೆಸರು-ವಿಳಾಸ, ಮೊಬೈಲ್ ನಂಬರ್ಗಳಲ್ಲಿ ವೆತ್ಯಾಸಗಳಿವೆ. ಅವುಗಳನ್ನು ಸರಿಪಡಿಸಿಕೊಳ್ಳಬೇಕು.

ಆಧಾರ್ ನೋಂದಣಿ, ನವೀಕರಣ ಹೆಚ್ಚಿಸಲು ಬ್ಯಾಂಕುಗಳ ಮೂಲಕ ಹೋಬಳಿ ಕೇಂದ್ರ ಮತ್ತು ಶಾಲಾ ಹಂತದಲ್ಲಿ ಶಿಬಿರಗಳನ್ನು ಆಯೋಜಿಸಲು ಸೂಚಿಸಲಾಗಿದೆ. ನೋಂದಣಿ ಕಿಟ್ ಅನ್ನು ನೀಡಲಾಗುವುದು. ಒಂದು ವರ್ಷದೊಳಗೆ ಆಧಾರ್ ನೋಂದಣಿ, ನವೀಕರಣ ಕಾರ್ಯ ಪೂರ್ಣಗೊಳಿಸಬೇಕು.
ಇದನ್ನೂ ಓದಿ » ಸಿಟಿ ಸೆಂಟರ್ ಪಕ್ಕದ ಅಂಡರ್ ಪಾಸ್ಗೆ ಎಂಎಲ್ಎ ಭೇಟಿ, ತ್ವರಿತ ಕ್ರಮಕ್ಕೆ ಸೂಚನೆ
ಶಾಲಾ ಮಕ್ಕಳ ಆಧಾರ್ ನೋಂದಣಿಯಿಂದ ಅವರ ಶೈಕ್ಷಣಿಕ ಚಟುವಟಿಕೆಗಳಿಗೆ ಅನುಕೂಲವಾಗಲಿದೆ. ಸಿ.ಇ.ಟಿ. ಮತ್ತಿತರ ಪ್ರವೇಶ ಪರೀಕ್ಷೆಗಳಿಗೆ, ವಿದ್ಯಾರ್ಥಿ ವೇತನ ಪಡೆಯಲು ಸಹಕಾರಿಯಾಗಲಿದೆ. ಶಾಲಾ ಶಿಕ್ಷಣ ಇಲಾಖೆ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಮ್ಮ ಅಧೀನ ಅಧಿಕಾರಿಗಳಿಗೆ ಆಧಾರ್ ನೋಂದಣಿಯ ಕುರಿತು ಮಾಹಿತಿ ನೀಡಬೇಕು.
ಆಧಾರ್ ಕೇಂದ್ರಗಳು ಅನಧಿಕೃತ, ವಂಚನೆಯ ಚಟುವಟಿಕೆ ನಡೆಸುತ್ತಿರುವುದು ಕಂಡುಬಂದರೆ, ಅಕ್ರಮ ವಲಸಿಗರು ಆಧಾರ್ಗೆ ದಾಖಲಾಗಲು ಪ್ರಯತ್ನಿಸಿದರೆ, ಪೊಲೀಸ್ ಅಧೀಕ್ಷಕರು ಎಫ್.ಐ.ಆರ್ ದಾಖಲಿಸುವ, ಅಪರಾಧದ ಸ್ವರೂಪಕ್ಕೆ ಅನುಗುಣವಾಗಿ ಆಧಾರ್ ಕಾಯ್ದೆಯನ್ವಯ ಜಿಲ್ಲಾ ಸಮಿತಿಯು ಕ್ರಮ ಕೈಗೊಳ್ಳಲಿದೆ.
ಸಭೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಆಧಾರ್ ಸಂಬಂಧಿತ ಅಧಿಕಾರಿ-ಸಿಬ್ಬಂದಿ, ಜಿಲ್ಲಾ ಸಮಿತಿ ಸಭೆಯ ಅಧಿಕಾರಿಗಳು ಉಪಸ್ಥಿತರಿದ್ದರು.







