SHIVAMOGGA LIVE NEWS | 17 DECEMBER 2024
ಫಟಾಫಟ್ ಸುದ್ದಿ : ಶಿವಮೊಗ್ಗ ನಗರದಲ್ಲಿ (City) ಏನೇನಾಯ್ತು? ಇಲ್ಲಿದೆ ಎಲ್ಲ ಸುದ್ದಿಗಳ ಫಟಾಫಟ್ ಮಾಹಿತಿ.
![]() |
ರಾಜ್ಯ ಸರ್ಕಾರ ಪ್ರಕ್ರಿಯೆ ಆರಂಭಿಸಲಿ
ಬಿಜೆಪಿ ಕಚೇರಿ : ಶರಾವತಿ ಸಂತ್ರಸ್ತರ ಭೂಮಿ ಡಿ ನೋಟಿಫಿಕೇಷನ್ಗೆ ಸಂಬಂಧ ಸುಪ್ರಿಂ ಕೋರ್ಟ್ ಮತ್ತು ಕೇಂದ್ರ ಸರ್ಕಾರ ರೈತರ ಪರ ಒಲವು ತೋರಿಸಿವೆ. ರಾಜ್ಯ ಸರ್ಕಾರ ಈಗಲೆ ಪೂರಕ ಪ್ರಕ್ರಿಯೆಗಳನ್ನು ಆರಂಭಿಸಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
shivamoggalive.com
3.79 ಕೋಟಿ ರೂ. ಮೊತ್ತದ ಪ್ರಾಪರ್ಟಿ ರಿಟರ್ನ್ ಪರೇಡ್
ಶಿವಮೊಗ್ಗ : ನಗರದ ಡಿಎಆರ್ ಮೈದಾನದಲ್ಲಿ ಪ್ರಾಪರ್ಟಿ ರಿಟರ್ನ್ ಪೆರೇಡ್ ನಡೆಯಿತು. ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 298 ಪ್ರಕರಣ ಪತ್ತೆ ಮಾಡಲಾಗಿದೆ. ಕಳ್ಳರಿಂದ ವಶಕ್ಕೆ ಪಡೆಯಲಾದ 3.76 ಕೋಟಿ ರೂ. ಮೊತ್ತದ ವಸ್ತುಗಳನ್ನು, 477 ಮೊಬೈಲ್ ಫೋನ್ಗಳನ್ನು ವಾರಸುದಾರರಿಗೆ ಹಿಂತಿರುಗಿಸಲಾಯಿತು. ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಅವರ ನೇತೃತ್ವದಲ್ಲಿ ಪ್ರಾಪರ್ಟಿ ಪರೇಡ್ ನಡೆಸಲಾಯಿತು.
shivamoggalive.com
ಅಶಕ್ತರಿಗೆ ಹೊದಿಕೆ ವಿತರಣೆ
ಶಿವಾಲಯ : ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹುಟ್ಟುಹಬ್ಬದ ಹಿನ್ನೆಲೆ ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್ ಗೆಳೆಯರ ಬಳಗದ ವತಿಯಿಂದ ಅಶಕ್ತರಿಗೆ ಹೊದಿಕೆ ವಿತರಣೆ ಮಾಡಲಾಯಿತು. ವಿನೋಬನಗರದ ಶಿವಾಲಯದಲ್ಲಿ ಪಾಲಿಕೆ ಮಾಜಿ ಸದಸ್ಯ ರಘು ಬಾಲರಾಜ್ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.
shivamoggalive.com
ಎನ್.ಡಿ.ಸುಂದರೇಶ್ ನೆನಪು ಕಾರ್ಯಕ್ರಮ
ಶಿವಮೊಗ್ಗ : ರಾಜ್ಯ ರೈತ ಸಂಘ, ಹಸಿರು ಸೇನೆ ವತಿಯಿಂದ ರೈತ ಸಂಘದ ಸಂಸ್ಥಾಪಕ ಎನ್.ಡಿ.ಸುಂದರೇಶ್ ನೆನಪಿನ ಸಭೆ ಆಯೋಜಿಸಲಾಗಿದೆ. ಡಿ.21ರಂದು ಬೆಳಗ್ಗೆ 10ಕ್ಕೆ ಶಿವಮೊಗ್ಗ ಆರ್ಟಿಒ ಕಚೇರಿ ರಸ್ತೆಯಲ್ಲಿರುವ ಪತ್ರಿಕಾ ಭವನದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಹೆಚ್.ಆರ್.ಬಸವರಾಜಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
shivamoggalive.com
ಶುದ್ಧ ಕುಡಿಯುವ ನೀರು ಪೂರೈಕೆಗೆ ಆಗ್ರಹ
ಮಹಾನಗರ ಪಾಲಿಕೆ : ರಾಗಿಗುಡ್ಡ ಬಡಾವಣೆಯಲ್ಲಿ ಕಳೆದ 5 ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಈಚೆಗೆ ನೀರು ಕಲುಷಿತಗೊಂಡಿದ್ದು, ದುರ್ವಾಸನೆ ಬರುತ್ತಿದೆ ಎಂದು ಆರೋಪಿಸಿ ಶಾಂತಿನಗರ ನಾಗರಿಕ ಹಕ್ಕು ವೇದಿಕೆ ವತಿಯಿಂದ ಮಹಾನಗರ ಪಾಲಿಕೆ ಎದುರು ಪ್ರತಿಭಟನೆ ನಡೆಸಲಾಯಿತು. ಶುದ್ಧ ನೀರು ಪೂರೈಕೆಗೆ ಆಗ್ರಹಿಸಿದರು.
shivamoggalive.com
ಡಿಜಿಟಲ್ ಗ್ರಂಥಾಲಯ ಉದ್ಘಾಟನೆ
ಶಿವಮೊಗ್ಗ : ಕಸ್ತೂರಬಾ ಬಾಲಿಕಾ ಪದವಿಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ ವತಿಯಿಂದ ಕಾಲೇಜಿನಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ನಂದಾದೇವಿ ಭೂಪಾಳಂ ಸ್ಮಾರಕ ಡಿಜಿಟಲ್ ಗ್ರಂಥಾಲಯವನ್ನು ಹಿರಿಯ ವಕೀಲ ಭೂಪಾಳಂ ಪ್ರಭಾಕರ್ ಉದ್ಘಾಟಿಸಿದರು. ಎನ್ಇಎಸ್ ಅಧ್ಯಕ್ಷರಾದ ಜಿ.ಎಸ್.ನಾರಾಯಣ ರಾವ್, ಕಾರ್ಯದರ್ಶಿ ಎಸ್.ಎನ್.ನಾಗರಾಜ ಸೇರಿ ಹಲವರು ಇದ್ದರು.
shivamoggalive.com
ಶಿವಮೊಗ್ಗ ನಾಗರಾಜ್ ಫೋಟೊಗಳ ಪ್ರದರ್ಶನ
ಕುವೆಂಪು ರಂಗಮಂದಿರ : ಪತಂಜಲಿ ಯೋಗ ಮತ್ತು ಪ್ರಕೃತಿ ಸಂಸ್ಥೆ ವತಿಯಿಂದ ಕನಕ ಜಯಂತಿ ಕಾರ್ಯಕ್ರಮ ನಡೆಯಿತು. ಅದರಲ್ಲಿ ಅಂತಾರಾಷ್ಟ್ರೀಯ ಛಾಯಾಚಿತ್ರ ಪ್ರಶಸ್ತಿ ವಿಜೇತ ಪತ್ರಿಕೆ ಮತ್ತು ವನ್ಯಜೀವಿ ಛಾಯಾಗ್ರಾಹಕ ಶಿವಮೊಗ್ಗ ನಾಗರಾಜ್ ಅವರ ಛಾಯಾಚಿತ್ರಗಳ ಪ್ರದರ್ಶನ ಆಯೋಜಿಸಲಾಗಿತ್ತು.
shivamoggalive.com
ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ
ಶಿವಮೊಗ್ಗ : ವಿಪ್ರ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ವತಿಯಿಂದ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ಹಿರಿಯ ಸನ್ನದು ಲೆಕ್ಕಪರಿಶೋಧಕ ಎನ್.ರಾಮಚಂದ್ರ, ಅಧ್ಯಕ್ಷ ನಾರಾಯಣಮೂರ್ತಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಾಲತಿ ಸೇರಿದಂತೆ ಹಲವರು ಇದ್ದರು.
shivamoggalive.com
ಬೆಂಗಳೂರು ಮ್ಯಾನೇಜ್ಮೆಂಟ್ ಸ್ಕೂಲ್ ಜೊತೆ ಒಡಂಬಡಿಕೆ
ಶಿವಮೊಗ್ಗ : ಎನ್ಇಎಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸಡ್ ಸ್ಟಡೀಸ್ ಕಾಲೇಜು, ಬೆಂಗಳೂರಿನ ಪ್ರತಿಷ್ಠಿತ ಮೈಲಾಜಿಕ್ ಬಿಸ್ನೆಸ್ ಮ್ಯಾನೇಜ್ಮೆಂಟ್ ಸ್ಕೂಲ್ ಜೊತೆಗೆ ಒಡಂಬಡಿಕೆ ಮಾಡಿಕೊಂಡಿದೆ. ಮಾನೇಜ್ಮೆಂಟ್ ಕಾಲೇಜು ಪ್ರಾಂಶುಪಾಲ ಡಾ. ಬಿ.ಎಸ್.ಶಿವಪ್ರಸಾದ್, ಮ್ಯಾನೇಜ್ಮೆಂಟ್ ಸ್ಕೂಲ್ನ ಸಿಇಒ ಸಿ.ಎ.ವಿನೋದ್ ಚಂದ್ರನ್ ಒಡಂಬಡಿಕೆಗೆ ಸಹಿ ಹಾಕಿದ್ದಾರೆ. ವಿದ್ಯಾರ್ಥಿಗಳಿಗೆ ಕೌಶಲ್ಯ ರೂಪಿಸುವುದು, ವಾಣಿಜ್ಯ ಕ್ಷೇತ್ರದ ಬೆಳವಣಿಗೆ ಕುರಿತು ಮಾಹಿತಿ ಒದಗಿಸಲು ಈ ಪ್ರಯತ್ನವಾಗಿದೆ.
shivamoggalive.com
ದುರ್ಗಿಗುಡಿಯಲ್ಲಿ ರಾಜ್ಯೋತ್ಸವ ಕಾರ್ಯಕ್ರಮ
ಶಿವಮೊಗ್ಗ : ದುರ್ಗಿಗುಡಿ ಕನ್ನಡ ಸಂಘದ ವತಿಯಿಂದ 59ನೇ ಕರ್ನಾಟಕ ರಾಜ್ಯೋತ್ಸವ. ನಗರದ ವಿವಿಧೆಡೆ ಶ್ರೀ ಭುವನೇಶ್ವರಿ ದೇವಿಯ ಮೆರವಣಿಗೆ. ರಾಮಣ್ಣ ಶ್ರೇಷ್ಠಿ ಪಾರ್ಕ್ನಿಂದ ದುರ್ಗಿಗುಡಿವರೆಗೆ ಶ್ರೀ ಭುವನೇಶ್ವರಿ ದೇವಿಯ ಮೆರವಣಿಗೆ ನಡೆಸಲಾಯಿತು. 5 ದಿನ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ.
shivamoggalive.com
ಶಿವಮೊಗ್ಗದಲ್ಲಿ ಅಂತಾರಾಷ್ಟ್ರೀಯ ಲಿಂಗಾಯತ ಯುವ ವೇದಿಕೆ
ಶಿವಮೊಗ್ಗ : ಅಂತಾರಾಷ್ಟ್ರೀಯ ಲಿಂಗಾಯತ ಯುವ ವೇದಿಕೆಯ ಜಿಲ್ಲಾ ಘಟಕ ಅಸ್ತಿತ್ವಕ್ಕೆ ಬಂದಿದೆ ಎಂದು ಜಿಲ್ಲಾಧ್ಯಕ್ಷ ಕೆ.ಕಿರಣ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸಮುದಾಯದ ಯುವಕರ ವ್ಯಾಪಾರ, ವ್ಯವಹಾರ, ಉದ್ಯೋಗವಕಾಶಗಳ ಬೆಳೆಸಲು ಸಂಘಟನೆ ಕೆಲಸ ಮಾಡಲಿದೆ ಎಂದು ತಿಳಿಸಿದರು.
shivamoggalive.com
ನಿವೇಶನಗಳ ಅಭಿವೃದ್ಧಿಗೆ ಮೀಟಿಂಗ್
ಶಿವಮೊಗ್ಗ : ಸೋಗಾನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಿವೇಶನಗಳ ಅಭಿವೃದ್ಧಿಗೆ ಯೋಜನೆ. ಸ್ಥಳೀಯ ಮುಖಂಡರ ಜೊತೆಗೆ ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಚರ್ಚೆ. ಸೂಡ ಅಧ್ಯಕ್ಷ ಹೆಚ್.ಎಸ್.ಸುಂದರೇಶ್, ಪ್ರಮುಖರಾದ ಆರ್.ವಿಜಯ್ ಕುಮಾರ್ ಸೇರಿದಂತೆ ಹಲವರು ಇದ್ದರು.
shivamoggalive.com
ನನ್ನ ಕೃಷ್ಣ ಕೃತಿ ಬಿಡುಗಡೆ
ಶಿವಮೊಗ್ಗ : ಪತ್ರಕರ್ತ ಎಂ.ಶ್ರೀನಿವಾಸನ್ ರಚಿಸಿರುವ ನನ್ನ ಕೃಷ್ಣ ಕೃತಿಯನ್ನು ಶಾಸಕ ಎಸ್.ಎನ್.ಚನ್ನಬಸಪ್ಪ ಬಿಡುಗಡೆ ಮಾಡಿದರು. ವಾಸವಿ ಶಾಲೆ ಆವರಣದಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಿತು. ಲೇಖಕ ಡಾ. ಗಜಾನನ ಶರ್ಮ ಕೃತಿ ಕುರಿತು ಮಾತನಾಡಿದರು. ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಜಿಲ್ಲಾಧ್ಯಕ್ಷ ಡಾ. ಎನ್.ಸುಧೀಂದ್ರ ಅಧ್ಯಕ್ಷತೆ ವಹಿಸಿದ್ದರು. ಅಜೇಯ ಸಾಂಸ್ಕೃತಿಕ ಬಳಗ, ಸಹಚೇತನ ನಾಟ್ಯಾಲಯದ ಸಹಯೋಗದಲ್ಲಿ ಕಾರ್ಯಕ್ರಮ ನಡೆಸಲಾಯಿತು.
shivamoggalive.com
ಚರಕದಿಂದ ನೂಲುವ ಕಾರ್ಯಾಗಾರ
ಶಿವಮೊಗ್ಗ : ಪಿಇಎಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಮ್ಯಾನೇಜ್ಮೆಂಟ್ ಸ್ಟಡೀಸ್, ಮೈತ್ರಿ ಫೋರಮ್ನಿಂದ ಚರಕ-ಮಹಿಳೆಯರಿಗೆ ಸುಸ್ಥಿರ ಜೀವನ ವಿಷಯದ ಕುರಿತು ಎರಡು ದಿನಗಳ ಕಾರ್ಯಾಗಾರ ಆಯೋಜಿಸಲಾಗಿತ್ತು. ಉಳಿವು ಫೌಂಡೇಶನ್ ಸೆಂಟರ್ ಫಾರ್ ಸಿಂಬಯೋಸಿನ್ನ ಸಂಸ್ಥಾಪಕಿ ಡಾ.ಸೀಮಾ.ಎಸ್.ಆರ್ ಉದ್ಘಾಟಿಸಿದರು. ಸಂಸ್ಥೆಯ 40 ವಿದ್ಯಾರ್ಥಿನಿಯರು ಚರಕದಲ್ಲಿ ನೂಲುವ ಕಾರ್ಯಾಗಾರದ ಪ್ರಯೋಜನ ಪಡೆದರು.
shivamoggalive.com
ಕೋಟ್ಯಂತರ ರೂ. ಅವ್ಯವಹಾರದ ಆರೋಪ
ಶಿವಮೊಗ್ಗ : ಸೂಕ್ಷ್ಮ ಅತಿ ಸೂಕ್ಷ್ಮ ಎಸ್ಸಿ/ಎಸ್ಟಿ ಅಲೆಮಾರಿ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಂತರ ರೂ. ಅವ್ಯವಹಾರ ನಡೆದಿದ್ದು ಈ ಬಗ್ಗೆ ಸರ್ಕಾರ ಕೂಡಲೇ ತನಿಖೆ ನಡೆಸಬೇಕೆಂದು ಪರಿಶಿಷ್ಟ ಜಾತಿ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಅಲೆಮಾರಿ ಸಮುದಾಯಗಳ ಒಳಮೀಸಲಾತಿ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಕೆ.ಚಾವಡೆ ಲೋಕೇಶ್ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
shivamoggalive.com
ಇದನ್ನೂ ಓದಿ » ಇನ್ನು ಮೂರು ತಿಂಗಳು ಜೋಗ ಜಲಪಾತಕ್ಕೆ ಪ್ರವೇಶ ನಿಷೇಧ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200