SHIMOGA : ಯುವಕರಲ್ಲಿ ದೇಶ ಪ್ರೇಮ ಬಿತ್ತುವ ಉದ್ದೇಶದಿಂದ ಶಿವಮೊಗ್ಗಕ್ಕೆ ತರಿಸಲಾಗಿರುವ ಯುದ್ಧ ಟ್ಯಾಂಕರ್ (Tanker), ಈಗ ಕೆಸರಿನ ಮಧ್ಯೆ ಧೂಳು ಹಿಡಿಯುತ್ತಿದೆ. ಒಂಭತ್ತು ತಿಂಗಳಿಂದ ಪಂಜರದಲ್ಲಿ ಬಂಧಿಯಾಗಿದೆ.

ಅದ್ಧೂರಿ ಸ್ವಾಗತ, ಕಬ್ಬಿಣದ ಪಂಜರ
2023ರ ಆಗಸ್ಟ್ 12ರಂದು ಮಹಾರಾಷ್ಟ್ರದ ಪುಣೆಯ ಕಿರ್ಕಿ ಸೇನಾ ಕಂಟೋನ್ಮೆಂಟ್ ಬೋರ್ಡ್ನಿಂದ ಟಿ-55 ಮಾದರಿಯ ಯುದ್ಧ ಟ್ಯಾಂಕರ್ ಅನ್ನು ಶಿವಮೊಗ್ಗಕ್ಕೆ ತರಲಾಯಿತು. ಜಿಲ್ಲಾಡಳಿತ, ಮಹಾನಗರ ಪಾಲಿಕೆ ವತಿಯಿಂದ ಟ್ಯಾಂಕರ್ಗೆ ಅದ್ಧೂರಿ ಸ್ವಾಗತ ನೀಡಲಾಗಿತ್ತು.
ಎಂಆರ್ಎಸ್ ಸರ್ಕಲ್ನಲ್ಲಿ ಅದನ್ನು ಸ್ಥಾಪಿಸುವ ಉದ್ದೇಶವಿತ್ತು. ಹಾಗಾಗಿ ಅಲ್ಲೆ ಪಕ್ಕದಲ್ಲಿರುವ ಮೆಸ್ಕಾಂ ವಸತಿ ಗೃಹಗಳ ಆವರಣದಲ್ಲಿ ಟ್ಯಾಂಕರ್ ಅನ್ನು ತಾತ್ಕಲಿಕವಾಗಿ ನಿಲ್ಲಿಸಲಾಯಿತು. ಅದರ ಸುತ್ತಲು ಪಂಜರ ಸ್ಥಾಪಿಸಲಾಯಿತು. 9 ತಿಂಗಳಾದರೂ ಟ್ಯಾಂಕರ್ ಪಂಜರದಿಂದ ಹೊರ ಬಂದಿಲ್ಲ. ಅಲಂಕಾರಕ್ಕೆ ಹಾಕಿದ್ದ ಹೂವು ಕೊಳೆತು, ಒಣಗಿದ್ದರು ತೆಗೆದಿಲ್ಲ. ಟ್ಯಾಂಕರ್ ಸಂಪೂರ್ಣ ಧೂಳಿನಲ್ಲಿ ಮುಳುಗಿದೆ. ಅಕ್ಕಪಕ್ಕ ಸಂಪೂರ್ಣ ಕೆಸರುಮಯವಾಗಿದೆ.

ಟ್ಯಾಂಕರ್ ಸ್ಥಾಪನೆಗೆ ನಿಗದಿಯಾಗದ ಜಾಗ
1971ರಲ್ಲಿ ಪಾಕಿಸ್ತಾನದಿಂದ ಬಾಂಗ್ಲಾದೇಶ ವಿಮೋಚನೆ ಬಯಸಿತು. ಈ ಸಂದರ್ಭ ಎರಡು ದೇಶಗಳ ಮಧ್ಯೆ ಯುದ್ದ ನಡೆಯಿತು. ಆಗ ಪಾಕಿಸ್ತಾನ ಸೇನೆಯ ವಿಮಾನಗಳು ಭಾರತದ ಮೇಲೆ ದಾಳಿ ನಡೆಸಿದ್ದವು. ಹಾಗಾಗಿ ಭಾರತ ಪಾಕಿಸ್ತಾನದ ವಿರುದ್ಧ ಯುದ್ದ ಸಾರಿತು. ಈ ಯುದ್ದದಲ್ಲಿ ಭಾರತ ಜಯ ಗಳಿಸಿತು. ಬಾಂಗ್ಲಾದೇಶಕ್ಕೆ ಸ್ವಾತಂತ್ರ್ಯ ಲಭಿಸಿತು. ಆ ಯುದ್ದದಲ್ಲಿ ಭಾಗವಹಿಸಿದ್ದ ರಷ್ಯಾ ನಿರ್ಮಿತ ಟಿ 55 ಯುದ್ದ ಟ್ಯಾಂಕರ್ ಇದು. ಸುಮಾರು 36 ಸಾವಿರ ಕೆ.ಜಿ. ತೂಕವಿದೆ.

ಇದನ್ನೂ ಓದಿ – ಚಂದ್ರಗುತ್ತಿಯಲ್ಲಿ ಆಗೀ ಹುಣ್ಣಿಮೆ, ದೊಡ್ಡ ಸಂಖ್ಯೆಯ ಭಕ್ತರಿಂದ ಪೂಜೆ, ಏನೆಲ್ಲ ಧಾರ್ಮಿಕ ಕಾರ್ಯಕ್ರಮ ನಡೆದವು?
ಎಂಆರ್ಎಸ್ ಸರ್ಕಲ್ನಲ್ಲಿ ಯುದ್ದ ಟ್ಯಾಂಕರ್ ಸ್ಥಾಪನೆಗೆ ಯೋಜಿಸಲಾಗಿತ್ತು. ಆದರೆ ಇಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಮೇಲ್ಸೇತುವೆ ನಿರ್ಮಾಣವಾಗಲಿದೆ. ಹಾಗಾಗಿ ಎಂಆರ್ಎಸ್ ಸರ್ಕಲ್ನಲ್ಲಿ ಟ್ಯಾಂಕರ್ ಸ್ಥಾಪನೆಗೆ ಅನುಮತಿ ನಿರಾಕರಿಸಲಾಗಿದೆ. ಬೇರೆ ಸ್ಥಳದಲ್ಲಿ ಸ್ಥಾಪನೆಗೆ ಮಹಾನಗರ ಪಾಲಿಕೆ ಸಭೆಯಲ್ಲಿ ತೀರ್ಮಾನವಾಗಬೇಕು. ಅವಧಿ ಪೂರ್ಣಗೊಂಡಿರುವುದರಿಂದ ಮಹಾನಗರ ಪಾಲಿಕೆಗೆ ಚುನಾವಣೆ ನಡೆದು, ನೂತನ ಸದಸ್ಯರು ಬರಬೇಕಿದೆ. ಅಲ್ಲಿಯ ತನಕ ಟಿ 55 ಟ್ಯಾಂಕರ್ಗೆ ಧೂಳಿನಲ್ಲೆ ಉಳಿಯುವುದು ನಿಶ್ಚಿತ ಎಂಬಂತಾಗಿದೆ.