SHIVAMOGGA LIVE NEWS | 26 DECEMBER 2023
SHIMOGA : ಸಕ್ಕರೆ ಕಾರ್ಖಾನೆ ಜಾಗದಿಂದ ರೈತರನ್ನು ಒಕ್ಕಲೆಬ್ಬಿಸದಂತೆ ಆಗ್ರಹಿಸಿ ಯರಗನಾಳು, ಸದಾಶಿವಪುರ ಮತ್ತು ಮಲವಗೊಪ್ಪ ಸುತ್ತಮುತ್ತಲ ಗ್ರಾಮಗಳ ನಿವಾಸಿಗಳು ರೈತರ ಹೋರಾಟ ಸಮಿತಿ ನೇತೃತ್ವದಲ್ಲಿ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಮಕ್ಕಳು, ಮಹಿಳೆಯರು, ವೃದ್ಧರು ಸೇರಿದಂತೆ ದೊಡ್ಡ ಸಂಖ್ಯೆಯಲ್ಲಿ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಸಂಸದ ಬಿ.ವೈ.ರಾಘವೇಂದ್ರ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಮಾಜಿ ಶಾಸಕ ಕೆ.ಬಿ.ಅಶೋಕ್ ನಾಯ್ಕ್ ಸೇರಿದಂತೆ ಹಲವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ಪ್ರತಿಭಟನೆಗೆ ಕಾರಣವೇನು?
ಶುಗರ್ ಫ್ಯಾಕ್ಟರಿ ಆಡಳಿತ ಕಂದಾಯ ಕಟ್ಟಲಾಗದೆ ಮತ್ತು ಸಾಲ ಮರುಪಾವತಿ ಮಾಡಲಾಗದೆ ಕೆಲವು ಜಮೀನನ್ನು ಸರ್ಕಾರಕ್ಕೆ ಕೊಟ್ಟಿತ್ತು. ದಾಖಲೆಗಳಲ್ಲಿ ಸರ್ಕಾರಿ ಪಡಾ ಎಂದು ನಮೂದಾಗಿತ್ತು. ಈಚೆಗೆ ಷುಗರ್ ಫ್ಯಾಕ್ಟರಿ ಆಡಳಿತದ ಅರ್ಜಿ ಆಲಿಸಿದ ಮದ್ರಾಸ್ ಹೈಕೋರ್ಟ್, ಕಂದಾಯ ಪಾವತಿ ಮಾಡಿದರೆ ಜಮೀನನ್ನು 12 ವಾರದಲ್ಲಿ ಆಡಳಿತ ಮಂಡಳಿಗೆ ಹಿಂತಿರುಗಿಸುಂತೆ ಆದೇಶಿಸಿದೆ. ಈಗಾಗಲೇ ಆ ಜಾಗದಲ್ಲಿ ರೈತರು ಸಾಗುವಳಿ ಮಾಡುತ್ತಿದ್ದಾರೆ. ಹಲವು ವಸತಿ ಪ್ರದೇಶಗಳು ಇದ್ದಾವೆ. ಸರ್ಕಾರಿ ಕಚೇರಿಗಳಿವೆ. ರೈತರನ್ನು ಒಕ್ಕಲೆಬ್ಬಿಸುವ ಬದಲು ಶುಗರ್ ಫ್ಯಾಕ್ಟರಿಗೆ ಸರ್ಕಾರ ಪರ್ಯಾಯ ಜಮೀನು ನೀಡಲಿ ಎಂದು ಆಗ್ರಹಿಸಿದರು.
ಸರ್ಕಾರದ ವಿರುದ್ಧ ಸಂಸದ ಆಕ್ರೋಶ
ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ, ಸಚಿವ ಮಧು ಬಂಗಾರಪ್ಪ ರೈತರ ಕಷ್ಟ ಅರ್ಥ ಮಾಡಿಕೊಳ್ಳಬೇಕು. ಯಾವ ಕಾನೂನಿನ ಅಡಿ ಶುಗರ್ ಫ್ಯಾಕ್ಟರಿ ಜಾಗದಲ್ಲಿ ಸರ್ಕಾರಿ ಕಚೇರಿಗಳನ್ನು ನಿರ್ಮಿಸಲಾಗಿದೆಯೋ ಅದೆ ಕಾನೂನಿನ ಅಡಿ ರೈತರು ಬದುಕು ಕಟ್ಟಿಕೊಂಡಿದ್ದಾರೆ. ರೈತರನ್ನು ಒಕ್ಕಲೆಬ್ಬಿಸಲು ಒಂದೇ ಒಂದು ಹೆಜ್ಜೆ ಮುಂದಿಟ್ಟರೂ ನಿಮ್ಮ ಹೆಂಡತಿ, ಮಕ್ಕಳಿಗೆ ಒಳ್ಳೆಯದಾಗುವುದಿಲ್ಲ. ಸರ್ಕಾರ ಅಡ್ವೊಕೇಟ್ ಜನರಲ್ ಅವರೊಂದಿಗೆ ಚರ್ಚಿಸಿ ಕೂಡಲೆ ರೈತರನ್ನು ಕಾಪಾಡುವ ಕೆಲಸ ಮಾಡಬೇಕಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಮಾತನಾಡಿ, ಯಾರು ಇಲ್ಲಿಯ ತನಕ ಆ ಜಾಗ ಅನುಭವಿಸಿದ್ದಾರೊ ಅವರಿಗೆ ಭೂಮಿ ಹಕ್ಕು ಹಿಡುವಳಿ ಪತ್ರ ನೀಡಬೇಕು. ಒಂದಿಂಚು ಭೂಮಿಯನ್ನೂ ರೈತರಿಂದ ಕಸಿದುಕೊಳ್ಳಲು ನಾವು ಬಿಡುವುದಿಲ್ಲ. ಉಸ್ತುವಾರಿ ಸಚಿವರು ಕಪಟ ನಾಟಕ ಬಿಟ್ಟು ರೈತರ ಪರವಾಗಿ ನಿಲ್ಲಬೇಕು ಎಂದು ಆಗ್ರಹಿಸಿದರು.
ಹೋರಾಟ ಸಮಿತಿ ಪ್ರಮುಖರಾದ ಕೃಷ್ಣಪ್ಪ, ಬಿಜೆಪಿ ಮುಖಂಡರಾದ ರತ್ನಾಕರ್ ಶೆಣೈ, ವಿನ್ಸೆಂಟ್ ರೋಡ್ರಿಗಸ್ ಸೇರಿದಂತೆ ಹಲವರು ಇದ್ದರು.
ಇದನ್ನೂ ಓದಿ – ರಸ್ತೆ ಅಪಘಾತ, ಶಾಸಕ ಸಂಗಮೇಶ್ವರ್ ಆಪ್ತ ಸಹಾಯಕ ಸಾವು
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200