SHIVAMOGGA LIVE NEWS | 17 FEBRURARY 2023
SHIMOGA : ಭದ್ರಾವತಿ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ (VISL) ಪುನಶ್ಚೇತನಕ್ಕೆ ಆಗ್ರಹಿಸಿ ಗುತ್ತಿಗೆ ಕಾರ್ಮಿಕರು ಇವತ್ತು ಶಿವಮೊಗ್ಗದವರೆಗೆ ಜಾಥಾ ನಡೆಸಿದರು. ಅಲ್ಲದೆ ಪ್ರಮುಖ ವೃತ್ತಗಳಲ್ಲಿ ಮಾನವ ಸರಪಳಿ ನಡೆಸಿ, ಪ್ರತಿಭಟನಾ ಸಭೆ ಮಾಡಿದರು.
ಭದ್ರಾವತಿಯಿಂದ ಬೈಕ್ ಜಾಥಾ
ಗುತ್ತಿಗೆ ಕಾರ್ಮಿಕರು ಭದ್ರಾವತಿ ವಿಐಎಸ್ಎಲ್ (VISL) ಕಾರ್ಖಾನೆಯಿಂದ ಶಿವಮೊಗ್ಗದವರೆಗೆ ಬೈಕ್ ಜಾಥಾ ನಡೆಸಿದರು. ನೂರಾರು ಬೈಕುಗಳಲ್ಲಿ ಕಾರ್ಮಿಕರು, ಅವರ ಕುಟುಂಬದವರು ಜಾಥಾದಲ್ಲಿ ಪಾಲ್ಗೊಂಡಿದ್ದರು. ಮೀನಾಕ್ಷಿ ಭವನದವರೆಗೆ ಬೈಕ್ ಜಾಥಾ ನಡೆಸಲಾಯಿತು. ಸೈನ್ಸ್ ಮೈದಾನದಿಂದ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಸರ್ಕಲ್ ಗಳಲ್ಲಿ ಪ್ರತಿಭಟನಾ ಸಭೆ
ವಿವಿಧ ಸಂಘಟನೆಗಳ ಬೆಂಬಲದೊಂದಿಗೆ ಕಾರ್ಮಿಕರು ಮೆರವಣಿಗೆ ಮಾಡಿದರು. ಅಮೀರ್ ಅಹಮದ್ ಸರ್ಕಲ್, ಗೋಪಿ ಸರ್ಕಲ್ ನಲ್ಲಿ ರಸ್ತೆ ತಡೆ ನಡೆಸಿ, ಸಭೆ ಮಾಡಿದರು. ಈ ವೇಳೆ ಮಾತನಾಡಿದ ಕಾರ್ಮಿಕ ಮುಖಂಡರು, ವಿಐಎಸ್ಎಲ್ ಪುನಶ್ಚೇತನ ಮಾಡಬೇಕು. ಈ ಕುರಿತು ಸರ್ಕಾರಗಳು ಇಚ್ಛಾಶಕ್ತಿ ತೋರಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ – ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ 2 ವಾರ ಅತ್ಯಂತ ಮಹತ್ವದ್ದು, ಕಾರಣವೇನು? ಮೊದಲು ಲ್ಯಾಂಡ್ ಆಗುವ ವಿಮಾನ ಯಾವುದು?
ಮತ್ತೊಂದು ಸರ್ಕಲ್ ನಲ್ಲಿ ಧರಣಿ
ಗೋಪಿ ಸರ್ಕಲ್ ನಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಗುತ್ತಿಗೆ ಕಾರ್ಮಿಕರು, ಬಳಿಕ ಮಹಾವೀರ ವೃತ್ತದಲ್ಲಿ ಸಭೆ ನಡೆಸಿದರು. ಜಿಲ್ಲಾಧಿಕಾರಿಯವರೆ ತಮ್ಮ ಮನವಿ ಸ್ವೀಕರಿಸಬೇಕು ಎಂದು ಪಟ್ಟು ಹಿಡಿದರು. ಸುಮಾರು ಒಂದು ಗಂಟೆ ರಸ್ತೆ ತಡೆ ನಡೆಸಿದ್ದರಿಂದ ವಾಹನ ಸಂಚಾರ ವ್ಯತ್ಯಯವಾಯಿತು. ಈ ಹಿನ್ನೆಲೆ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಿದರು. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸುವಂತೆ ಅವಕಾಶ ಕಲ್ಪಿಸಿದರು.