ಬೆಂಗಳೂರು: ಅಧಿಕಾರಿಗಳ ದೌರ್ಜನ್ಯ ಮತ್ತು ರೌಡಿಗಳ ಹಫ್ತಾ ವಸೂಲಿಯನ್ನು ಖಂಡಿಸಿ ರಾಜಧಾನಿಯ ಸಣ್ಣ ಬೇಕರಿ, ಟೀ-ಕಾಫಿ ಹಾಗೂ ಕಾಂಡಿಮೆಂಟ್ಸ್ ಅಂಗಡಿಗಳು ಇಂದು ವ್ಯಾಪಾರ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಿವೆ. ಕರ್ನಾಟಕ ಕಾರ್ಮಿಕ ಪರಿಷತ್ ಈ ಬಂದ್ಗೆ ಕರೆ ನೀಡಿದೆ.
ಬೆಂಗಳೂರು ನಗರದಲ್ಲಿ ಸುಮಾರು 58 ಸಾವಿರಕ್ಕೂ ಹೆಚ್ಚು ಚಿಲ್ಲರೆ ಮತ್ತು ಬೀದಿಬದಿ ವ್ಯಾಪಾರಿಗಳಿದ್ದಾರೆ. ಪ್ಲಾಸ್ಟಿಕ್ ನಿಷೇಧ ಹಾಗೂ ಕೋಟ್ಪಾ ಕಾಯ್ದೆಗಳ ಹೆಸರಿನಲ್ಲಿ ಅಧಿಕಾರಿಗಳು ಅನಗತ್ಯವಾಗಿ ಕಿರುಕುಳ ನೀಡುತ್ತಿದ್ದಾರೆ. ಇನ್ನೊಂದೆಡೆ ರೌಡಿಗಳು ಹಣಕ್ಕಾಗಿ ಪೀಡಿಸುತ್ತಿದ್ದಾರೆ. ಇದರಿಂದ ಬೇಸತ್ತು ಒಂದು ದಿನದ ಸಾಂಕೇತಿಕ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಪರಿಷತ್ನ ಅಧ್ಯಕ್ಷ ರವಿ ಶೆಟ್ಟಿ ಬೈಂದೂರು ತಿಳಿಸಿದ್ದಾರೆ.

ಪ್ರಸ್ತುತ ವ್ಯಾಪಾರ ನಡೆಸಲು ಸಿಗರೇಟ್, ಆಹಾರ ಮತ್ತು ಕಾಫಿ-ಟೀ ಮಾರಾಟಕ್ಕೆ ಪ್ರತ್ಯೇಕವಾಗಿ ನಾನಾ ಪರವಾನಗಿಗಳನ್ನು ಕೇಳಲಾಗುತ್ತಿದೆ. ಇದರ ಬದಲಿಗೆ ಏಕಗವಾಕ್ಷಿ ಪದ್ಧತಿಯಡಿ ಒಂದೇ ಲೈಸನ್ಸ್ನಲ್ಲಿ ಎಲ್ಲ ವ್ಯಾಪಾರಕ್ಕೂ ಅವಕಾಶ ಕಲ್ಪಿಸಬೇಕು ಎಂಬುದು ಸಂಘಟನೆಯ ಪ್ರಮುಖ ಬೇಡಿಕೆಯಾಗಿದೆ.
ಬಿಬಿಎಂಪಿ ಆರೋಗ್ಯ ಇಲಾಖೆ ಅಧಿಕಾರಿಗಳ ಅತಿಯಾದ ಒತ್ತಡ ಮತ್ತು ತಂಬಾಕು ಉತ್ಪನ್ನಗಳ ಜಪ್ತಿ ಕ್ರಮದಿಂದಾಗಿ ಸಣ್ಣ ವ್ಯಾಪಾರಿಗಳು ತೀವ್ರ ನಷ್ಟ ಅನುಭವಿಸುತ್ತಿದ್ದಾರೆ. ಇಂದಿನ ಮುಷ್ಕರಕ್ಕೆ ಸರ್ಕಾರ ಸೂಕ್ತವಾಗಿ ಸ್ಪಂದಿಸದಿದ್ದರೆ, ಮುಂದಿನ ದಿನಗಳಲ್ಲಿ ಜನಪ್ರತಿನಿಧಿಗಳ ಮನೆ ಹಾಗೂ ಕಚೇರಿಗಳ ಮುಂದೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

