ಶಿವಮೊಗ್ಗ: ಬೆಂಗಳೂರು–ಶಿವಮೊಗ್ಗ ಜನಶತಾಬ್ದಿ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣಿಕರಿಗೆ ವಂಚಿಸಲು ಯತ್ನಿಸುತ್ತಿದ್ದ ನಕಲಿ ಟಿಟಿಇಯನ್ನು ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ರೈಲ್ವೆ ಭದ್ರತಾ ಪಡೆ (ಆರ್ಪಿಎಫ್) ಅಧಿಕಾರಿಗಳು ಬಂಧಿಸಿ, ಅರಸೀಕೆರೆ ಜಿಆರ್ಪಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಹೇಗೆ ಸಿಕ್ಕಿಬಿದ್ದ ನಕಲಿ ಟಿಟಿಇ?
ಜೂನ್ 1ರಂದು ಕೆಎಸ್ಆರ್ ಬೆಂಗಳೂರು–ಶಿವಮೊಗ್ಗ ಟೌನ್ ಜನಶತಾಬ್ದಿ ಎಕ್ಸ್ಪ್ರೆಸ್ ರೈಲು ಅರಸೀಕೆರೆ ನಿಲ್ದಾಣ ದಾಟಿತ್ತು. ಈ ವೇಳೆ ಸಿ-1 ಕೋಚ್ನಲ್ಲಿ ಟಿಕೆಟ್ ಪರಿಶೀಲನಾ ಕರ್ತವ್ಯ ನಿರ್ವಹಿಸುತ್ತಿದ್ದ ಡೆಪ್ಯುಟಿ ಸಿಟಿಐ ಯಶವಂತ್ ಜೆ. ಅವರಿಗೆ ಮತ್ತೊಬ್ಬ ಟಿಟಿಇ ಎದುರಾಗಿದ್ದಾರೆ. ವಿಚಾರಿಸಿದಾಗ ಆತನ ನಡವಳಿಕೆ ಬಗ್ಗೆ ಅನುಮಾನ ಬಂದಿದೆ. ಆತ ತಾನು ಟಿಟಿಇ ಎಂದು ಹೇಳಿಕೊಂಡು ಮೊಬೈಲ್ನಲ್ಲಿ ನಕಲಿ ಗುರುತಿನ ಚೀಟಿಯನ್ನು ತೋರಿಸಿದ್ದಾನೆ.

ವಿಚಾರಣೆ ಬಳಿಕ ವ್ಯಕ್ತಿ ಅರೆಸ್ಟ್
ರೈಲ್ವೆ ಅಧಿಕಾರಿಗಳು ವಿಚಾರಣೆ ನಡೆಸಿದಾಗ ಆತ ಶಿವಮೊಗ್ಗ ಜಿಲ್ಲೆಯ ನಿವಾಸಿ ರಕೀಬುದ್ದೀನ್ ಎಂ.ಕೆ. (26) ಎಂಬುದು ಗೊತ್ತಾಗಿದೆ. ತಾನು ರೈಲ್ವೆ ನೌಕರನಲ್ಲ ಮತ್ತು ಪ್ರಯಾಣಿಕರಿಂದ ಹಣ ವಸೂಲಿ ಮಾಡುವ ಉದ್ದೇಶದಿಂದ ಟಿಟಿಇ ವೇಷ ಧರಿಸಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಆರೋಪಿ ವಿರುದ್ಧ ಅರಸೀಕೆರೆ ಜಿಆರ್ಪಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

