ಶಿವಮೊಗ್ಗ: ಚಿತ್ರದುರ್ಗದಲ್ಲಿ ಇಂದು ಯಡಿಯೂರಪ್ಪ ಅಭಿಮಾನೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಸಮಾವೇಶಕ್ಕೆ ಶಿವಮೊಗ್ಗದಿಂದ ಸಾವಿರಾರು ಅಭಿಮಾನಿಗಳು ತೆರಳಿದ್ದು, ಅವರನ್ನು ಕರೆದೊಯ್ಯಲು ನೂರಾರು ಬಸ್ಸುಗಳ ತೆರಳಿವೆ. ಇದರಿಂದ ಶಿವಮೊಗ್ಗದಲ್ಲಿ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಶಿವಮೊಗ್ಗದಿಂದ ಎಷ್ಟು ಬಸ್ಸುಗಳು?
ಶಿವಮೊಗ್ಗ ಜಿಲ್ಲೆಯಿಂದ ದೊಡ್ಡ ಸಂಖ್ಯೆಯ ಜನರು ಚಿತ್ರದುರ್ಗಕ್ಕೆ ತೆರಳಿದ್ದಾರೆ. ಬಿಜೆಪಿ ಕಾರ್ಯಕರ್ತರು, ಯಡಿಯೂರಪ್ಪ ಅವರ ಅಭಿಮಾನಿಗಳು ಅಭಿಮಾನೋತ್ಸವದಲ್ಲಿ ಭಾಗವಹಿಸುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆಯಿಂದ 400ಕ್ಕು ಹೆಚ್ಚು ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ. ತಾಲೂಕುವಾರು ಬಸ್ಸುಗಳನ್ನ ನಿಗದಿಪಡಿಸಲಾಗಿದೆ.

ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸಂಕಷ್ಟ
ಇನ್ನು, ದೊಡ್ಡ ಸಂಖ್ಯೆಯ ಬಸ್ಸುಗಳು ಚಿತ್ರದುರ್ಗಕ್ಕೆ ತೆರಳಿರುವುದರಿಂದ ಶಿವಮೊಗ್ಗದಲ್ಲಿ ಪ್ರಯಾಣಿಕರು ಸಂಕಷ್ಟಕ್ಕೀಡಾಗಿದ್ದಾರೆ. ಖಾಸಗಿ ಬಸ್ ನಿಲ್ದಾಣಕ್ಕೆ ಬೆರಳೆಣಿಕೆಯಷ್ಟು ಬಸ್ಸುಗಳು ಮಾತ್ರ ಬಂದು ಹೋಗುತ್ತಿವೆ. ಹಾಗಾಗಿ ಖಾಸಗಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ.
ಇನ್ನು, ಕೆಲವು ಮಾರ್ಗಗಳಿಗೆ ತೆರಳಲು ಗಂಟೆಗೊಂದು ಬಸ್ ಮಾತ್ರ ಬಂದು ಹೋಗುತ್ತಿವೆ. ಪ್ಲಾಟ್ಫಾರಂಗೆ ಬಸ್ ಬಂದು ನಿಲ್ಲುತ್ತಿದ್ದಂತೆ ಜನರು ಸೀಟು ಹಿಡಿಯಲು ನೂಕುನುಗ್ಗಲಿನಲ್ಲಿ ಬಸ್ ಹತ್ತುತ್ತಿದ್ದಾರೆ.
ಬಹಳ ಹೊತ್ತಿನಿಂದ ತೀರ್ಥಹಳ್ಳಿ ಬಸ್ಸಿಗಾಗಿ ಕಾದು ಕೂತಿದ್ದೇನೆ. ಮಕ್ಕಳನ್ನು ಹಿಡಿದುಕೊಂಡು ಬಸ್ ನಿಲ್ದಾಣದಲ್ಲಿ ಕಾಯುವುದು ಕಷ್ಟವಾಗುತ್ತದೆ.
ಯಶೋದ, ಪ್ರಯಾಣಿಕರು

ಸಿಟಿ ಬಸ್ಗಳ ಸಂಖ್ಯೆಯು ಇಳಿಮುಖ
ಇನ್ನೊಂದೆಡೆ ಸಿಟಿ ಬಸ್ಸುಗಳು ಕೂಡ ಚಿತ್ರದುರ್ಗಕ್ಕೆ ತೆರಳಿವೆ. ಹಾಗಾಗಿ ಶಿವಮೊಗ್ಗ ಸಿಟಿಯಲ್ಲಿಯು ಪ್ರಯಾಣಿಕರ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಜನ ಅನಿವಾರ್ಯವಾಗಿ ಆಟೋಗಳು, ರಾಪಿಡೋ ಬೈಕುಗಳನ್ನು ಆಶ್ರಯಿಸುವಂತಾಗಿದೆ. ಇನ್ನು, ಜಿಲ್ಲೆಯ ವಿವಿಧ ಟೂರಿಸ್ಟ್ ವಾಹನಗಳು ಕೂಡ ಚಿತ್ರದುರ್ಗದ ಸಮಾವೇಶದ ಕಡೆಗೆ ತೆರಳಿವೆ.


