ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಜೀವನ ಮತ್ತು ಸಾಧನೆಗಳು ಸಾರ್ವಜನಿಕ ಜೀವನದಲ್ಲಿ ಇರುವವರಿಗೆ ಹಾಗೂ ಮುಂದೆ ಬರಲಿರುವವರಿಗೆ ಒಂದು ದೊಡ್ಡ ಪಾಠ ಮತ್ತು ಮಾದರಿ ಎಂದು ಶಾಸಕ ಆರಗ ಜ್ಞಾನೇಂದ್ರ ಅಭಿಪ್ರಾಯಪಟ್ಟರು.
ಯಡಿಯೂರಪ್ಪ ಅವರಿಗೆ ಕೃತಜ್ಞತೆ ಅರ್ಪಿಸಲು ಜಿಲ್ಲೆಯ ಜನತೆ ಒಂದು ದಿನ ಮೀಸಲಿಟ್ಟು ಈ ಸಮಾವೇಶದಲ್ಲಿ ಭಾಗವಹಿಸಬೇಕು. ಇಂತಹ ಅವಕಾಶವನ್ನು ಕಳೆದುಕೊಳ್ಳಬಾರದು.
– ಆರಗ ಜ್ಞಾನೇಂದ್ರ, ಶಾಸಕ
ಪತ್ರಿಕಾ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರಗ ಜ್ಞಾನೇಂದ್ರ, ಚಿತ್ರದುರ್ಗದಲ್ಲಿ ಮೇ 9ರಂದು ಯಡಿಯೂರಪ್ಪ ಅವರ ರಾಜಕೀಯ ಜೀವನದ 50 ಸಾರ್ಥಕ ವರ್ಷದ ಬಿಎಸ್ವೈ ಅಭಿಮಾನೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಆರಗ ಜ್ಞಾನೇಂದ್ರ ಏನೆಲ್ಲ ಹೇಳಿದರು? ಇಲ್ಲಿದೆ ಪಾಯಿಂಟ್ಸ್
- ಜಿಲ್ಲೆಯಿಂದ ಸಾವಿರ ಸಾವಿರ ಜನ: ಯಡಿಯೂರಪ್ಪ ಅವರ ಅಭಿವೃದ್ಧಿ ಕಾರ್ಯಗಳನ್ನು ಆರಗ ಜ್ಞಾನೇಂದ್ರ ಸ್ಮರಿಸಿದರು. ಜಿಲ್ಲೆಯಿಂದ ಸುಮಾರು 60,000 ಜನರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದರು.
- ಮಠಾಧೀಶರ ಆಮಂತ್ರಣ: ರಾಜ್ಯದ ಎಲ್ಲಾ ಸಮುದಾಯದ ಮಠಾಧೀಶರನ್ನು ಆಮಂತ್ರಿಸಲಾಗಿದೆ.
- ಪಕ್ಷಾತೀತ ಕಾರ್ಯಕ್ರಮ: ಇದು ಕೇವಲ ಅಭಿಮಾನಿಗಳು ಆಯೋಜಿಸಿರುವ ಕಾರ್ಯಕ್ರಮವಾಗಿದೆ. ಪಕ್ಷದ ಧ್ವಜ ಅಥವಾ ಚಿಹ್ನೆಗಳನ್ನು ಬಳಸದೆ ಪಕ್ಷಾತೀತವಾಗಿ ನಡೆಸಲಾಗುತ್ತಿದೆ.
- 10 ಲಕ್ಷ ಜನ ಸೇರುವ ನಿರೀಕ್ಷೆ: ಯಡಿಯೂರಪ್ಪ ಅವರನ್ನು ಸನ್ಮಾನಿಸಲು 10 ಲಕ್ಷ ಜನ ಸೇರುತ್ತಿದ್ದಾರೆ. ಇದು ದಾಖಲೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
- ಗ್ರಂಥ ಬಿಡುಗಡೆ: ಯಡಿಯೂರಪ್ಪ ಅವರ ಜೀವನ ಹಾದಿಯನ್ನು ಪರಿಚಯಿಸುವ ವಿಶೇಷ ಗ್ರಂಥವನ್ನು ಸಮಾವೇಶದಲ್ಲಿ ಬಿಡುಗಡೆ ಮಾಡಲಾಗುವುದು.

ಸುದ್ದಿಗೋಷ್ಠಿಯಲ್ಲಿ ಸಂಸದ ಬಿ.ವೈ.ರಾಘವೇಂದ್ರ, ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್.ಅರುಣ್, ಡಾ. ಧನಂಜಯ ಸರ್ಜಿ, ಮಾಜಿ ಶಾಸಕರಾದ ಎಸ್.ರುದ್ರೇಗೌಡ, ಆರ್.ಕೆ.ಸಿದ್ದರಾಮಣ್ಣ, ಕೆ.ಜಿ.ಕುಮಾರಸ್ವಾಮಿ, ಕೆ.ಬಿ.ಅಶೋಕ್ ನಾಯ್ಕ್, ಪ್ರಮುಖರಾದ ಎಸ್.ದತ್ತಾತ್ರಿ, ಬಿಳಕಿ ಕೃಷ್ಣಮೂರ್ತಿ, ಎಸ್.ಎಸ್.ಜ್ಯೋತಿ ಪ್ರಕಾಶ್ ಸೇರಿ ಹಲವರು ಇದ್ದರು.


