ಶಿವಮೊಗ್ಗ ಲೈವ್.ಕಾಂ | 15 ಏಪ್ರಿಲ್ 2019
ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಪರವಾಗಿ ಪ್ರಚಾರ ನಡೆಸಲು, ರಕ್ಷಣ ಸಚಿವೆ ನಿರ್ಮಲಾ ಸೀತಾರಾಮನ್ ಶಿವಮೊಗ್ಗಕ್ಕೆ ಭೇಟಿ ನೀಡಿದ್ದರು. ಎನ್ಇಎಸ್ ಮೈದಾನದಲ್ಲಿ ನಡೆದ ಮಹಿಳಾ ಸಮಾವೇಶದಲ್ಲಿ ಅವರು ಪಾಲ್ಗೊಂಡಿದ್ದರು.
ಇಂದಿರಾ ಕಾಲದಿಂದಲೂ ಗರೀಭಿ ಹಠಾವೋ
ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ನಿರ್ಮಲಾ ಸೀತಾರಾಮನ್, ಮೋದಿ ಅವರಂತಹ ಅಪರೂಪದ ಮಾಣಿಕ್ಯ ನಮಗೆ ಸಿಕ್ಕಿದೆ. ಅವರು ತಮ್ಮನ್ನು ಪ್ರಧಾನ ಮಂತ್ರಿ ಅನ್ನದೆ, ಪ್ರಧಾನ ಸೇವಕ ಎಂದು ಹೇಳಿಕೊಳ್ಳುತ್ತಿದ್ದಾರೆ. ಅಂತಹ ಮಾಣಿಕ್ಯವನ್ನು ಪ್ರಧಾನ ಮಂತ್ರಿಯಾಗಿ ಉಳಿಸಿಕೊಳ್ಳಬೇಕಿದೆ ಎಂದರು.
ಇನ್ನು, ಕಾಂಗ್ರೆಸ್ ವಿರುದ್ಧ ಹರಿಹಾಯ್ದ ನಿರ್ಮಲಾ ಸೀತಾರಾಮನ್, 1971ರಿಂದ ಇಂದಿರಾ ಗಾಂಧಿ ಗರೀಭಿ ಹಠಾವೋ ಘೋಷಣೆ ಪ್ರಾರಂಭಿಸಿದರು. ರಾಜೀವ್ ಗಾಂಧಿ ಕಾಲದಲ್ಲೂ ಅದನ್ನೇ ಹೇಳಿದರು. ಮನಮೋಹನ್ ಸಿಂಗ್ ಅವರ ಅವಧಿಯಲ್ಲೂ ಇದೇ ಘೋಷಣೆಯಾಯ್ತು. ಕಾಂಗ್ರೆಸ್ ಪಕ್ಷಕ್ಕೆ ಚುನಾವಣೆ ಸಮೀಪಿಸಿದಾಗ ಮಾತ್ರವೇ ಬಡವರು ಮತ್ತು ಬಡತನದ ನೆನಪಾಗುತ್ತದೆ ಎಂದು ಟೀಕಿಸಿದರು.
2008ರಲ್ಲಿ ಮುಂಬೈ ಮೇಲೆ ಭಯೋತ್ಪಾದಕರು ದಾಳಿ ನಡೆಸಿದರು. ಆಗ ಅಧಿಕಾರದಲ್ಲಿದ್ದ ಯುಪಿಎ ಸರ್ಕಾರ ಕಠಿಣ ಕ್ರಮ ಕೈಗೊಂಡಿದ್ದರೆ, ಭಯೋತ್ಪಾದಕರಿಂದ ಭಾರತಕ್ಕೆ ಸಮಸ್ಯೆಯಾಗುತ್ತಿರಲಿಲ್ಲ. ಆದರೆ ಈಗ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ, ಸೇನೆಗೆ ಮುಕ್ತ ಸ್ವಾತಂತ್ರ್ಯ ನೀಡಿದೆ. ಹಾಗಾಗಿಯೇ ಸರ್ಜಿಕಲ್ ದಾಳಿಯಾಗಿದ್ದು ಎಂದರು.
ವೇದಿಕೆ ಮುಂದೆ ಯಡಿಯೂರಪ್ಪ, ಈಶ್ವರಪ್ಪ ಕುಟುಂಬ
ಇನ್ನು, ಮಹಿಳಾ ಸಮಾವೇಶದಲ್ಲಿ ಯಡಿಯೂರಪ್ಪ ಮತ್ತು ಈಶ್ವರಪ್ಪ ಅವರ ಕುಟುಂಬದ ಮಹಿಳೆಯರು ಕೂಡ ಪಾಲ್ಗೊಂಡಿದ್ದರು. ಯಡಿಯೂರಪ್ಪ ಪುತ್ರಿಯರಾದ ಅರುಣಾದೇವಿ, ಉಮಾದೇವಿ, ಪದ್ಮಾವತಿ, ಬಿ.ವೈ.ರಾಘವೇಂದ್ರ ಪತ್ನಿ ತೇಜಸ್ವಿನಿ, ವಿಜಯೇಂದ್ರ ಪತ್ನಿ ಪ್ರೇಮಾ, ಈಶ್ವರಪ್ಪ ಪತ್ನಿ ಜಯಲಕ್ಷ್ಮಿ ಸೇರಿದಂತೆ ಕುಟುಂಬದ ಮಹಿಳೆಯರು ಸಮಾವೇಶದಲ್ಲಿ ಪಾಲ್ಗೊಂಡಿದ್ದು ಗಮನ ಸೆಳಯಿತು.
ಸೆಲ್ಫಿಗೆ ಫುಲ್ ರಶ್
ಕಾರ್ಯಕ್ರಮ ಮುಗಿಸಿ ವೇದಿಕೆಯಿಂದ ಕೆಳಗಿಳಿಯುತ್ತಿದ್ದ, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗೆ ಸೆಲ್ಫಿ ತೆಗೆಸಿಕೊಳ್ಳಲು ಕಾರ್ಯಕರ್ತರು ಮುಗಿಬಿದ್ದರು. ಇವರಿಂದ ರಕ್ಷಣ ಸಚಿವರಿಂದ ರಕ್ಷಸಿ, ಕಾರಿನತ್ತ ಕರೆದೊಯ್ಯಲು ರಕ್ಷಣಾ ಸಿಬ್ಬಂದಿಗಳು ಹರಸಾಹಸ ಪಡಬೇಕಾಯಿತು.
ಸಮಾವೇಶದಲ್ಲಿ ಶಾಸಕರಾದ ಈಶ್ವರಪ್ಪ, ಹರತಾಳು ಹಾಲಪ್ಪ, ಕುಮಾರ್ ಬಂಗಾರಪ್ಪ, ಅಶೋಕ್ ನಾಯ್ಕ, ರುದ್ರೇಗೌಡ, ಆಯನೂರು ಮಂಜುನಾಥ್, ಪ್ರಮುಖರಾದ ಡಿ.ಹೆಚ್.ಶಂಕರಮೂರ್ತಿ, ಭಾರತಿ ಶೆಟ್ಟಿ, ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | shivamoggalive@gmail.com


