ಶಿವಮೊಗ್ಗ: ಲೋಕಸಭೆಯಲ್ಲಿ ಮಹಿಳಾ ಮೀಸಲು ಮಸೂದೆ ಅಂಗೀಕಾರಕ್ಕೆ ಅಡ್ಡಿಯಾದ ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳ ವಿರುದ್ಧ ಶಿವಮೊಗ್ಗ ಜೆಡಿಎಸ್ ಘಟಕ ಆಕ್ರೋಶ ವ್ಯಕ್ತಪಡಿಸಿದೆ. ನೆಹರು ರಸ್ತೆಯಲ್ಲಿರುವ ಜೆಡಿಎಸ್ ಕಚೇರಿಯಿಂದ ಶಿವಪ್ಪನಾಯಕ ಪ್ರತಿಮೆವರೆಗೆ ಮೆರವಣಿಗೆ ನಡೆಸಿದ ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ವಿರುದ್ಧ ಆಕ್ರೋಶ (protest) ವ್ಯಕ್ತಪಡಿಸಿದರು. ಸುದ್ದಿಯ ಮುಂದಿನ 8 ಪ್ಯಾರಾಗಳು ಕೆಳಗಿವೆ.
ಶಿವಪ್ಪನಾಯಕ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಸಿದ ಜೆಡಿಎಸ್ ಕಾರ್ಯಕರ್ತರು, ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿದರು. ಬಳಿಕ ಪ್ರತಿಭಟನಾ ಸಭೆ ನಡೆಯಿತು.

ಯಾರೆಲ್ಲ ಏನೆಲ್ಲ ಹೇಳಿದರು?
ಶಾರದಾ ಪೂರ್ಯಾನಾಯ್ಕ್, ಶಾಸಕಿ: ಮಹಿಳಾ ಮೀಸಲಾತಿ ದಿಢೀರ್ ಉದ್ಭವವಾದ ವಿಷಯವಲ್ಲ. ಬಹು ವರ್ಷದ ಬೇಡಿಕೆಯಾಗಿದೆ. ಹಾಗಾಗಿಯೇ ಮಹಿಳಾ ಸಮುದಾಯ ಈ ಮಸೂದೆಯ ಕುರಿತು ನಿರೀಕ್ಷೆಯಲ್ಲಿದ್ದೆವು. ಅದರೆ ಕಾಂಗ್ರೆಸ್ ಸೇರಿದಂತೆ ಮಿತ್ರ ಪಕ್ಷಗಳು ಮಸೂದೆ ವಿರುದ್ಧ ಮತ ಚಲಾಯಿಸಿವೆ. ಈ ಪಕ್ಷಗಳಿಗೆ ಮಹಿಳೆಯರು ತಕ್ಕ ಉತ್ತರ ನೀಡಲಿದ್ದಾರೆ. ಸ್ಥಳೀಯ ಸಂಸ್ಥೆಗಳಲ್ಲಿ ಶೇ.50ರಷ್ಟು ಮಹಿಳಾ ಮೀಸಲಿದೆ. ಆದರೆ ಸಂಸತ್ತಿನಲ್ಲಿ ನಾವು ಶೇ.33ರಷ್ಟು ಮಾತ್ರ ಮೀಸಲು ಕೇಳುತ್ತಿದ್ದೇವೆ.

ಗೀತಾ ಸತೀಶ್, ಮಹಿಳಾ ಜೆಡಿಎಸ್ ವಿಭಾಗದ ಅಧ್ಯಕ್ಷೆ : ದೇವೇಗೌಡರು ಪ್ರಧಾನಿ ಆಗಿದ್ದಾಗ ಮಹಿಳಾ ಮೀಸಲಾತಿ ಮಸೂದೆ ತಂದಿದ್ದರು. 30 ವರ್ಷದಿಂದ ಈ ಮೀಸಲಾತಿಗಾಗಿ ಹೋರಾಟ ನಡೆಯುತ್ತಿದೆ. ನಮ್ಮ ಹಕ್ಕುಗಳಿಗಾಗಿ ಇನ್ನೆಷ್ಟು ವರ್ಷ ಹೋರಾಡಬೇಕು. ಈ ಮಸೂದೆಯು ಮಹಿಳೆಯರಲ್ಲಿ ಆಶಾಭಾವನೆ ಮೂಡಿಸಿತ್ತು. ಆದರೆ ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳ ಕಾರಣದಿಂದ ಸೋಲಾಗಿದೆ.
ಶಾರದಾ ಅಪ್ಪಾಜಿ, ಜೆಡಿಎಸ್ ನಾಯಕಿ: ಮಹಿಳೆಯರಿಗೆ ಅಧಿಕಾರ ಕೊಟ್ಟರೆ ಮೋಸ, ವಂಚನೆರಹಿತ ಆಡಳಿತ ನೀಡಲಿದ್ದಾರೆ. ಕುಟುಂಬ ನಿರ್ವಾಹಣೆಯಷ್ಟೆ ಅಚ್ಚುಕಟ್ಟಾಗಿ ಕ್ಷೇತ್ರ ನಿರ್ವಾಹಣೆ ಮಾಡಲಿದ್ದಾರೆ. ಗೃಹಲಕ್ಷ್ಮಿ ಯೋಜನೆ ಮೂಲಕ ಮಹಿಳೆಯರನ್ನು ಮುಂದೆ ತರುತ್ತಿದ್ದೇವೆ ಎಂದು ಕಾಂಗ್ರೆಸ್ ಹೇಳುತ್ತದೆ. ಆದರೆ ರಾಜಕೀಯ ಅಧಿಕಾರ ಕೊಡುವ ವಿಚಾರದಲ್ಲಿ ಯಾಕೆ ತಾರತಮ್ಯ?
ಇದನ್ನೂ ಓದಿ : ಸಾಗರ, ಹೊಸನಗರ, ತೀರ್ಥಹಳ್ಳಿ ಜನರಿಗೆ ಆರೋಗ್ಯ ಇಲಾಖೆ ಎಚ್ಚರಿಕೆ, ಪ್ರಮುಖ ಸೂಚನೆ ಬಿಡುಗಡೆ
ಪ್ರಸನ್ನ ಕುಮಾರ್, ಮಾಜಿ ಶಾಸಕ: ದೇವೇಗೌಡರು ಪ್ರಧಾನಿ ಆಗಿದ್ದಾಗ ತಂದ ಕಾನೂನಿನ ಕಾರಣಕ್ಕೆ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರು ಪಾಲಿಕೆ ಮೇಯರ್ಗಳಾಗಿದ್ದಾರೆ. ಗ್ರಾಮ ಪಂಚಾಯಿತಿಯಿಂದ ಎಲ್ಲ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರು ಅಧಿಕಾರ ನಡೆಸುತ್ತಿದ್ದಾರೆ. ಇನ್ನು, 1971ರಲ್ಲಿ ಲೋಕಸಭೆ ಕ್ಷೇತ್ರಗಳ ಪುನರ್ ವಿಂಗಡಣೆ ಆಗಿತ್ತು. ಈಗ ಜನಸಂಖ್ಯೆಗೆ ತಕ್ಕ ಹಾಗೆ ಕ್ಷೇತ್ರಗಳ ಪುನರ್ ವಿಂಗಡಣೆ ಆಗಬೇಕಿದೆ.
ಜೆಡಿಎಸ್ ಜಿಲ್ಲಾಧ್ಯಕ್ಷ ರಾಮಕೃಷ್ಣ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
