ಭದ್ರಾವತಿ: ಕ್ರಿಮಿನಾಶಕ ಸೇವಿಸಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದು ಅದಕ್ಕೆ ಕಾರಣನಾದ ವ್ಯಕ್ತಿಗೆ ನ್ಯಾಯಾಲಯ 10 ವರ್ಷ ಕಠಿಣ ಜೈಲು ಶಿಕ್ಷೆ, ₹1,00,000 ದಂಡ ವಿಧಿಸಿದೆ. ಭದ್ರಾವತಿಯಲ್ಲಿರುವ 4ನೇ ಹೆಚ್ಚುವರಿ ಮತ್ತು ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾ. ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ಅವರು ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.
ಭದ್ರಾವತಿ ತಾಲೂಕು ಅಗರದಹಳ್ಳಿ ಕ್ಯಾಂಪ್ನ ಚಂದ್ರಪ್ಪಗೆ (50) ಜೈಲು ಶಿಕ್ಷೆಯಾಗಿದೆ. ಶ್ರೀಧರ (21) 2019ರ ಜನವರಿ 12ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು.
ಏನಿದು ಪ್ರಕರಣ?
‘ಶ್ರೀಧರ್ಗೆ ಓ.ಸಿ, ಮಟ್ಕಾ ಜೂಜಾಟ ಕಲಿಸಿ, ಅದರಿಂದ ಬಂದ ಹಣವನ್ನು ನೀಡುವಂತೆ ಚಂದ್ರಪ್ಪ ಹಿಂಸೆ ನೀಡುತ್ತಿದ್ದ. ಇದೇ ಕಾರಣಕ್ಕೆ ಮನನೊಂದು ಶ್ರೀಧರ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕಂಡಿದ್ದʼ ಎಂದು ಆರೋಪಿಸಲಾಗಿತ್ತು. ಈ ಸಂಬಂಧ ಶ್ರೀಧರನ ತಂದೆ ಮುನಿಯಪ್ಪ ನೀಡಿದ ದೂರಿನ ಹಿನ್ನೆಲೆ ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ » ಶಿವಮೊಗ್ಗದಲ್ಲಿ ಆಪ್ತ ಸಹಾಯಕನ ಮನೆ ಮೇಲೆ ಲೋಕಾಯುಕ್ತ ದಾಳಿ
ತನಿಖೆ ನಡೆಸಿದ ಆಗಿನ ಪಿ.ಎಸ್.ಐ. ಮೋಹನ್.ಜಿ ಅವರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಆರೋಪ ಸಾಬೀತಾದ ಹಿನ್ನೆಲೆ ಚಂದ್ರಪ್ಪಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ರತ್ನಮ್ಮ.ಪಿ ವಾದ ಮಂಡಿಸಿದ್ದರು.
