ಹೊಳೆಹೊನ್ನೂರು: ಸಮೀಪದ ಆನವೇರಿ ಗ್ರಾಮದಲ್ಲಿ ಮುಂಜಾನೆ ಪತ್ರಿಕೆ ವಿತರಿಸುತ್ತಿದ್ದ ಯುವಕನಿಗೆ ಕಾರು ಡಿಕ್ಕಿ ಹೊಡೆದಿದ್ದು, ಗ್ರಾಮದ ಯುವಕ ಧನುಷ್ (20) ಗಾಯಗೊಂಡಿದ್ದಾರೆ. ಘಟನೆ ಬಳಿಕ ಚಾಲಕ ಕಾರು ನಿಲ್ಲಿಸದೆ ಪರಾರಿಯಾಗಿರುವ ಘಟನೆ ವರದಿಯಾಗಿದೆ.
ಕಳೆದ 4 ವರ್ಷಗಳಿಂದ ಆನವೇರಿ ಸುತ್ತಮುತ್ತಲಿನ ಗ್ರಾಮಗಳಿಗೆ ದಿನಪತ್ರಿಕೆ ವಿತರಿಸುವ ಕೆಲಸ ಮಾಡಿಕೊಂಡು ಧನುಷ್ ಜೀವನ ನಡೆಸುತ್ತಿದ್ದರು. ಬುಧವಾರ ಎಂದಿನಂತೆ ಆನವೇರಿಯ ಅರಸಘಟ್ಟ ತಾಂಡ ತಿರುವಿನ ಬಳಿ ಹೋಗುವಾಗ ಹಿಂದಿನಿಂದ ಬಂದ ಕಾರು ಧನುಷ್ ಅವರ ಸ್ಕೂಟಿಗೆ ಗುದ್ದಿದೆ. ಘಟನೆಯಲ್ಲಿ ಸ್ಕೂಟಿ ಸಮೇತ ಪಲ್ಟಿಯಾಗಿ ರಸ್ತೆಗೆ ಬಿದ್ದಿದ್ದು, ಸ್ಥಳದಲ್ಲಿದ್ದವರು ಕಾರು ನಿಲ್ಲಿಸಲು ಪ್ರಯತ್ನಿಸಿದರೂ ಚಾಲಕ ಕಾರು ನಿಲ್ಲಿಸದೆ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.

ಅಪಘಾತದಿಂದ ಧನುಷ್ ಎಡಕಾಲು ಹಾಗೂ ಭುಜಕ್ಕೆ ಪೆಟ್ಟಾಗಿದೆ. ಸ್ಕೂಟಿ ಮುಂಭಾಗ ಜಖಂಗೊಂಡಿದೆ. ಸ್ಥಳೀಯರು ತಕ್ಷಣ ಧನುಷ್ಗೆ ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.