ಭದ್ರಾವತಿ: ಬೇಟೆಯಾಡಿ ಜಿಂಕೆಗಳನ್ನು ಹತ್ಯೆಗೈದಿದ್ದ ಬೇಟೆಗಾರರ ಗ್ಯಾಂಗ್ ಒಂದರ ಮೇಲೆ ಅರಣ್ಯ ಸಂಚಾರಿ ದಳ ಹಾಗೂ ವಲಯ ಅರಣ್ಯ ಸಿಬ್ಬಂದಿ ದಾಳಿ ನಡೆಸಿದ್ದು, ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಜಿಂಕೆಗಳ ಕಳೇಬರ ಸೇರಿದಂತೆ ಕೃತ್ಯಕ್ಕೆ ಬಳಸಿದ್ದ ಒಂದು ಕಾರು ಹಾಗೂ ಮೂರು ಬೈಕ್ಗಳನ್ನು ವಶಕ್ಕೆ ಪಡೆದುಕೊಂಡಿದೆ.
ಚನ್ನಗಿರಿಯ ತಾಲೂಕು ಮಾವಿನಕಟ್ಟೆ ಶಾಖೆಯ ಲಕ್ಷ್ಮೀಸಾಗರ ಕಿರು ಅರಣ್ಯ ಪ್ರದೇಶದಲ್ಲಿ ಘಟನೆ ನಡೆದಿದೆ. ಬಂಧಿತನನ್ನು ಚನ್ನಗಿರಿ ತಾಲೂಕಿನ ಮಲ್ಲಿಗೆರೆ ನಿವಾಸಿ ದಿವಾಕರ್ ಎಂದು ಗುರುತಿಸಲಾಗಿದೆ.

ಭದ್ರಾವತಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಚನ್ನಗಿರಿ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ಮಾರ್ಗದರ್ಶನದಲ್ಲಿ, ಚನ್ನಗಿರಿ ವಲಯ ಅರಣ್ಯಾಧಿಕಾರಿಗಳು, ಶಾಂತಿಸಾಗರ ವಲಯ ಅರಣ್ಯಾಧಿಕಾರಿಗಳು ಹಾಗೂ ಚನ್ನಗಿರಿ ಅರಣ್ಯ ಸಂಚಾರಿ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.
ಕಾರ್ಯಾಚರಣೆಯಲ್ಲಿ ಆರ್ಎಫ್ಒ ಮಸ್ತಾನ್, ಡಿವೈಆರ್ಎಫ್ಒಗಳಾದ ಶೇಖರ್ ಚೌಗುಲೆ, ಪ್ರಶಾಂತ್ ಕುಮ್ಮಣ್ಣನವರ್, ಮನೋಹರ್, ಶಿವಕುಮಾರ್, ಬಿಎಫ್ಒಗಳಾದ ಮೆಹಬೂಬ್ ಸುಭಾನಿ, ದೇವಪ್ಪ, ಶಿವರಾಜ್ ಕೆಳಗಡೆ, ದೇವರಾಜ್ ಹಾಗೂ ವಾಹನ ಚಾಲಕರಾದ ಫ್ರಾನ್ಸಿಸ್ ಮತ್ತು ದೇವರಾಜ್ ಪಾಲ್ಗೊಂಡಿದ್ದರು.