ಭದ್ರಾವತಿ: ಸೀಮಂತ ಕಾರ್ಯಕ್ರಮದಲ್ಲಿ ಬಾಲಕಿಯ ಕೊರಳಿನಲ್ಲಿದ್ದ ಚಿನ್ನದ ಸರ ಕಳ್ಳತನವಾಗಿದೆ. ಭದ್ರಾವತಿ ತಾಲೂಕಿನ ಸುಲ್ತಾನಮಟ್ಟಿ ಗ್ರಾಮದಲ್ಲಿ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಗ್ರಾಮದ ರಂಜಿತಾ ಅವರ ಮನೆಯಲ್ಲಿ ಅವರ ತಮ್ಮನ ಹೆಂಡತಿಯ ಸೀಮಂತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಮಾರಂಭಕ್ಕೆ ಕುಟುಂಬದ ಬಂಧುಗಳು ಹಾಗೂ ಗ್ರಾಮಸ್ಥರು ಆಗಮಿಸಿದ್ದರು. ಕಾರ್ಯಕ್ರಮದ ವೇಳೆ ರಂಜಿತಾ ಅವರ ಮಗಳ ಕೊರಳಿಗೆ 12 ಗ್ರಾಂ ತೂಕದ ಬಂಗಾರದ ಸರ ಹಾಕಲಾಗಿತ್ತು. ಕಾರ್ಯಕ್ರಮದ ವೇಳೆ ಬಾಲಕಿಯ ಕೊರಳಿನಲ್ಲಿದ್ದ ಸರ ನಾಪತ್ತೆಯಾಗಿರುವುದು ಕುಟುಂಬದವರ ಗಮನಕ್ಕೆ ಬಂದಿದೆ.

ಕಳುವಾಗಿರುವ ಚಿನ್ನದ ಸರದ ಮೌಲ್ಯ ₹1,20,000 ಎಂದು ಅಂದಾಜಿಸಲಾಗಿದೆ. ಮನೆಯವರು ಮತ್ತು ಸಂಬಂಧಿಕರು ಎಲ್ಲಾ ಕಡೆ ಹುಡುಕಾಟ ನಡೆಸಿದರೂ ಚಿನ್ನದ ಸರ ಪತ್ತೆಯಾಗಿಲ್ಲ. ಅಡುಗೆ ಕೆಲಸಕ್ಕೆ ಬಂದಿದ್ದವರ ಜೊತೆ ಗುರುತಿಸಿಕೊಂಡಿದ್ದ ಮೂವರು ಮಹಿಳೆಯರ ಮೇಲೆ ಶಂಕೆ ವ್ಯಕ್ತವಾಗಿದೆ. ಈ ಕುರಿತು ಕುಟುಂಬದವರು ತಡವಾಗಿ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದ್ದಾರೆ.
