ಡ್ರೋಣ್‌ ದಾಳಿ: ಭದ್ರಾವತಿಯಲ್ಲಿ 19 ಮಂದಿ ವಿರುದ್ಧ ಕೇಸ್‌, ಏನಿದು?

ಭದ್ರಾವತಿ: ಅರಣ್ಯವನ್ನೇ ಅಡ್ಡಾ ಮಾಡಿಕೊಂಡು ಅಂದರ್‌ ಬಾಹರ್‌ ಜೂಜಾಟ ಆಡುತ್ತಿದ್ದವರಿಗೆ ಬಿಸಿ ಮುಟ್ಟಿಸಲು ಪೊಲೀಸ್‌ ಇಲಾಖೆ ಡ್ರೋಣ್‌ ದಾಳಿ ಆರಂಭಿಸಿದೆ. ಭದ್ರಾವತಿಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸ್‌ ಡ್ರೋಣ್‌, ಹಲವರ ಚಹರೆ ಪತ್ತೆ ಹಚ್ಚಿದೆ. ಕೇಸ್‌ ದಾಖಲಾಗುವಂತೆ ಮಾಡಿದೆ.

ಪೊಲೀಸ್‌ ಡ್ರೋಣ್‌ ದಾಳಿ

ಭದ್ರಾವತಿ ತಾಲೂಕು ಕೂಡ್ಲಿಗೆರೆ ಗ್ರಾಮದ ಚಾನಲ್‌ ಏರಿಯಾ ಪಕ್ಕದ ಅರಣ್ಯದಲ್ಲಿ ಅಂದರ್‌ ಬಾಹರ್‌ ನಡೆಯುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಪೊಲೀಸ್‌ ಇಲಾಖೆ ಡ್ರೋಣ್‌ ಮೂಲಕ ಕಾರ್ಯಾಚರಣೆ ನಡೆಸಿತು. ಜನ ಗುಂಪುಗೂಡಿಕೊಂಡು ಜೂಜಾಟದಲ್ಲಿ ತೊಡಗಿರವ ದೃಶ್ಯ ಸೆರೆಯಾಗಿತ್ತು.

ಇದನ್ನೂ ಓದಿ : ವಿನೋದ್‌ಗಾಗಿ ಕಂಬನಿ ಮಿಡಿದ ಭದ್ರಾವತಿ, VISLನಿಂದ ಮಹತ್ವದ ನಿರ್ಧಾರ ಪ್ರಕಟ

ದಾಳಿ ನಡೆಸಿದ ಪೊಲೀಸರು

ಜೂಜಾಟದ ದೃಶ್ಯ ಪರಿಶೀಲಿಸಿದ ಪೊಲೀಸರು ಬಳಿಕ ದಾಳಿ ನಡೆಸಿದ್ದಾರೆ. 19 ಮಂದಿಯನ್ನು ವಶಕ್ಕೆ ಪಡೆದು ಅವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ಕೇಸ್‌ ದಾಖಲಾಗಿದೆ ಎಂದು ಪೊಲೀಸ್‌ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಡ್ರೋಣ್‌ ದಾಳಿ: ಭದ್ರಾವತಿಯಲ್ಲಿ 19 ಮಂದಿ ವಿರುದ್ಧ ಕೇಸ್‌
ಕಾರ್ಯಾಚರಣೆ ನಡೆಸುತ್ತಿರುವ ಪೊಲೀಸ್‌ ಡ್ರೋಣ್‌. ಜೂಜಾಟದಲ್ಲಿ ತೊಡಗಿರುವವರ ವಿಡಿಯೋ ದೃಶ್ಯ.

ಕ್ಯಾಸಿನೋ ಆದ ಕಾಡುಗಳು

ಶಿವಮೊಗ್ಗ, ಭದ್ರಾವತಿ ತಾಲೂಕಿನ ಅರಣ್ಯ ವ್ಯಾಪ್ತಿಯಲ್ಲಿ ಜೂಜಾಟ ನಡೆಯುತ್ತಿರುವ ಆರೋಪವಿತ್ತು. ಇದರ ವಿರುದ್ಧ ಪ್ರತಿಭಟನೆಗಳು ನಡೆದಿದ್ದವು. ರಾಜಕೀಯ ಕೆಸರೆರಚಾಟವು ಆಗಿತ್ತು. ಆದರೂ ಈ ಭಾಗದ ಅರಣ್ಯ ವ್ಯಾಪ್ತಿ ಕ್ಯಾಸಿನೋಗಳಾಗಿ ಬದಲಾಗಿದ್ದವು. ಬೆಂಗಳೂರು ಸೇರಿದಂತೆ ವಿವಿಧೆಡೆಯಿಂದ ಇಲ್ಲಿಗೆ ಬಂದು ಅಂದರ್‌ ಬಾಹರ್‌ ಆಡುತ್ತಾರೆ ಎಂಬ ಆರೋಪಗಳಿವೆ.

ಒಂದೇ ಲೊಕೇಷನ್‌ನಲ್ಲಿ ದಂಧೆ

ಪೊಲೀಸ್‌ ಇಲಾಖೆ ಬಿಡುಗಡೆ ಮಾಡಿರುವ ವಿಡಿಯೋದಲ್ಲಿಯೇ ಜೂಜಾಟದ ಅಖಾಡ ಸ್ಪಷ್ಟವಾಗಿ ಕಾಣಿಸುತ್ತದೆ. ನಿರಂತರವಾಗಿ ಒಂದೇ ಸ್ಥಳದಲ್ಲಿ ಜೂಜಾಟ ನಡೆಯುತ್ತಿದೆ ಎಂಬುದಕ್ಕೆ ಜಾಗ ಸಮತಟ್ಟಾಗಿರುವುದೇ ಸಾಕ್ಷಿ. ಇದೇ ರೀತಿ ಹಲವು ಕಡೆ ಕಾಡುಗಳಲ್ಲಿ ಜೂಜಾಟ ನಡೆಯುತ್ತಿದೆ ಎಂಬ ಆರೋಪವಿದೆ. ಡ್ರೋಣ್‌ ಕಾರ್ಯಾಚರಣೆ ಮುಂದುವರೆದರೆ ಜಿಲ್ಲೆಯ ಕಾಡು ಕ್ಯಾಸಿನೋ ಆರೋಪದಿಂದ ಮುಕ್ತವಾಗಲಿವೆ ಎಂಬುದು ಸಾರ್ವಜನಿಕರ ಅಭಿಪ್ರಾಯ.

ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : April 29, 2026 at 8:00 AM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಏಪ್ರಿಲ್ 29, 2026

Leave a Comment