ಭದ್ರಾವತಿಯಲ್ಲಿ ಅದ್ಧೂರಿ ಈದ್ ಮೆರವಣಿಗೆ
ಪ್ರವಾದಿ ಮೊಹಮ್ಮದ್ ಪೈಗಂಬರ್ ಜನ್ಮದಿನದ ಅಂಗವಾಗಿ ಅಂಜುಮನ್ ಕಮಿಟಿ ಭದ್ರಾವತಿಯಲ್ಲಿ ಈದ್ ಮಿಲಾದ್ ಮೆರವಣಿಗೆ ಹಮ್ಮಿಕೊಂಡಿತ್ತು. ಇದಕ್ಕಾಗಿ ನಗರದಲ್ಲಿ ಅಲಂಕಾರ ಮಾಡಲಾಗಿತ್ತು. ರಂಗಪ್ಪ ಸರ್ಕಲ್ನಿಂದ ತರೀಕೆರೆ ರಸ್ತೆಯ ಪಿಡಬ್ಲುಡಿ ಕಾಲೋನಿ ಸಮೀಪ ಈದ್ಗಾ ಮೈದಾನದವರೆಗೆ ಮೆರವಣಿಗೆ ನಡೆಯಿತು.

ಮುಸ್ಲಿಂ ಸಮುದಾಯದ ಸಾವಿರಾರು ಸಂಖ್ಯೆಯ ಜನರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಮೆಕ್ಕಾ, ಮದೀನಾ ಸೇರಿದಂತೆ ವಿವಿಧ ಮಾದರಿಗಳನ್ನು ವಾಹನಗಳಲ್ಲಿ ಮೆರವಣಿಗೆ ಮಾಡಿದರು. ಇನ್ನು, ರಕ್ತದಾನ ಶಿಬಿರ, ಅನ್ನದಾನ, ಪಾನೀಯ ವಿತರಣೆ ಮಾಡಲಾಗಿತ್ತು.

ವಿಡಿಯೋ ವೈರಲ್, ಪೊಲೀಸ್ ಅಲರ್ಟ್
ಸೆ.9ರ ಬೆಳಗ್ಗೆ ಭದ್ರಾವತಿಯ ಈದ್ ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ಚಿತ್ರೀಕರಿಸಿದ್ದು ಎನ್ನಲಾದ 12 ಸೆಕೆಂಡ್ನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು. ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಯುವಕರು ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾರೆ ಎಂದು ಆರೋಪಿಸಲಾಗಿತ್ತು. ವಿಷಯ ತಿಳಿಯುತ್ತಲೆ ಪೊಲೀಸರು ಅಲರ್ಟ್ ಆದರು. ಜಿಲ್ಲಾ ರಕ್ಷಣಾಧಿಕಾರಿ ಸೂಚನೆ ಮೇರೆಗೆ ಹಳೆ ನಗರ ಠಾಣೆಯಲ್ಲಿ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಾಯಿತು.

“ವಿಡಿಯೋ ಸಂಬಂಧ ಎಫ್ಐಅರ್ ದಾಖಲಿಸಿಕೊಂಡಿದ್ದೇವೆ. ವಿಡಿಯೋದಲ್ಲಿ ಯಾರೆಲ್ಲ ಇದ್ದಾರೆ ಎಂದು ಗುರುತಿಸಲಾಗುತ್ತಿದೆ. ವಿಡಿಯೋ ಚಿತ್ರೀಕರಿಸಿದ್ದು ಯಾರು? ಸ್ಥಳ ಯಾವುದು? ಎಂದು ಪತ್ತೆ ಮಾಡಲು ಮೂವರು ಇನ್ಸ್ಪೆಕ್ಟರ್ಗಳ ನೇತೃತ್ವದಲ್ಲಿ ಮೂರು ತಂಡ ರಚಿಸಲಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ.”
- ಜಿ.ಕೆ.ಮಿಥುನ್ ಕುಮಾರ್, ಜಿಲ್ಲಾ ರಕ್ಷಣಾಧಿಕಾರಿ
![]()
ಇದನ್ನೂ ಓದಿ » ಭದ್ರಾವತಿಯಲ್ಲಿ ‘ಪಾಕಿಸ್ತಾನ ಜಿಂದಾಬಾದ್’ ಘೋಷಣೆ ಕೇಸ್, ಜಿಲ್ಲಾ ರಕ್ಷಣಾಧಿಕಾರಿ ಮೊದಲ ಪ್ರತಿಕ್ರಿಯೆ, ಏನಂದ್ರು?
ಎಂಎಲ್ಎ ಭಾಷಣದ ವಿಡಿಯೋ ವೈರಲ್
ಮತ್ತೊಂದೆಡೆ ಹೊಳೆಹೊನ್ನೂರು ಸರ್ಕಲ್ ಬಳಿ ಉಸ್ಮಾನಿಯಾ ಚಾರಿಟೆಬಲ್ ಟ್ರಸ್ಟ್ನಿಂದ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಶಾಸಕ ಬಿ.ಕೆ.ಸಂಗಮೇಶ್ವರ ಭಾಗವಹಿಸಿದ್ದರು. ಈ ಸಂದರ್ಭ, ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟುವ ಆಸೆ ಇದೆ ಎಂದು ಸಂಗಮೇಶ್ವರ ಅವರು ಹೇಳಿದ್ದ ವಿಡಿಯೋ ವೈರಲ್ ಆಯಿತು.

ಬೀದಿಗಿಳಿದ ಬಿಜೆಪಿ, ರಾಷ್ಟ್ರಧ್ವಜ ಹಿಡಿದು ಮೆರವಣಿಗೆ
ವಿಡಿಯೋ ವೈರಲ್ ಬೆನ್ನಿಗೆ ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳು ದಿಢೀರ್ ಪ್ರತಿಭಟನೆ ನಡೆಸಿದರು. ಭದ್ರಾವತಿಯ ಮಾಧವಾಚಾರ್ ಸರ್ಕಲ್ನಿಂದ ಗಾಂಧಿ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ರಾಷ್ಟ್ರಧ್ವಜ ಹಿಡಿದು, ಭಾರತ ಮಾತೆ ಪರ ಘೋಷಣೆ ಕೂಗುತ್ತ ಮೆರವಣಿಗೆ ನಡೆಸಿದರು. ಟೈರ್ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಇನ್ನು, ಪಾಕ್ ಪರ ಘೋಷಣೆ ಕೂಗಿದ್ದಾರೆ ಎನ್ನಲಾದ ಸ್ಥಳದಲ್ಲೆ ನಿಂತು ರಾಷ್ಟ್ರಗೀತೆ ಹಾಡಿದರು.

ಇದನ್ನೂ ಓದಿ » ಭದ್ರಾವತಿಯಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ, ಸಂಸದರು ಗರಂ, ಇಲ್ಲಿದೆ ರಾಘವೇಂದ್ರ ಹೇಳಿಕೆಯ ಪಾಯಿಂಟ್ಸ್
ಶಿವಮೊಗ್ಗ ಶಾಸಕ ಎಸ್.ಎನ್.ಚನ್ನಸಬಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್, ಪ್ರಮುಖರಾದ ಧರ್ಮಪ್ರಸಾದ್ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿದ್ದರು.
ಬಂದ್ ವಾತಾವರಣ, ಬಿಗಿ ಬಂದೋಬಸ್ತ್
ಇನ್ನು, ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳು ದಿಢೀರ್ ಪ್ರತಿಭಟನೆ ಆ ಭಾಗದಲ್ಲಿ ಬಂದ್ ವಾತಾವರಣ ನಿರ್ಮಾಣವಾಗಿತ್ತು. ಅಂಗಡಿ ಮುಂಗಟ್ಟು ಬಂದ್ ಮಾಡಲಾಗಿತ್ತು. ಇನ್ನು, ಇಲ್ಲಿನ ಮಸೀದಿ ಬಳಿ ಕೆಎಸ್ಆರ್ಪಿ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. ಮಾಧವಾಚಾರ್ ಸರ್ಕಲ್ನಿಂದ ಗಾಂಧಿ ನಗರ ಸರ್ಕಲ್ವರೆಗೆ ಪೊಲೀಸರನ್ನು ನಿಯೋಜಿಸಲಾಗಿತ್ತು.

ಸದ್ಯ ವಿಡಿಯೋ ಎಫ್ಎಸ್ಎಲ್ಗೆ ಕಳುಹಿಸಲಾಗಿದೆ. ಭದ್ರಾವತಿ ಹಳೆ ನಗರ ಠಾಣೆ ಪೊಲೀಸರು ಸದ್ಯ ತನಿಖೆ ನಡೆಸುತ್ತಿದ್ದು, ವಿಚಾರಣೆ ಆರಂಭಿಸಿದ್ದಾರೆ.
