ಹೊಸನಗರ: ಚಲಿಸುತ್ತಿದ್ದ ಖಾಸಗಿ ಬಸ್ನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದ್ದು, ಕೆಲವೆ ಹೊತ್ತಿಗೆ ಸಂಪೂರ್ಣ ಸುಟ್ಟು ಹೋಗಿದೆ. ಹುಲಿಕಲ್ ಘಾಟಿಯಲ್ಲಿ ಇಂದು ಬೆಳಗ್ಗೆ ಘಟನೆ ಸಂಭವಿಸಿದೆ.
ಚಾಲಕ ಮತ್ತು ನಿರ್ವಾಹಕರ ಸಮಯ ಪ್ರಜ್ಞೆಯಿಂದ ಅವಘಡ ತಪ್ಪಿದೆ. ಬಸ್ಸಿನಲ್ಲಿದ್ದ 17 ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.

ಹೇಗಾಯ್ತು ಘಟನೆ?
ಹುಲಿಕಲ್ನಿಂದ ಉಡುಪಿಗೆ ತೆರಳುತ್ತಿದ್ದ ಶ್ರೀ ದುರ್ಗಾಂಬಾ ಟ್ರಾವೆಲ್ಸ್ಗೆ ಸೇರಿದ ಖಾಸಗಿ ಬಸ್ನಲ್ಲಿ ಈ ಅವಘಡ ಸಂಭವಿಸಿದೆ. ಹುಲಿಕಲ್ ಘಾಟ್ ರಸ್ತೆ ಕುಸಿತದ ಹಿನ್ನೆಲೆ ಈ ಮಾರ್ಗದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಕನೆಕ್ಟಿಂಗ್ ಬಸ್ಗಳಾಗಿ ಇವು ಕಾರ್ಯನಿರ್ವಹಿಸುತ್ತಿದ್ದವು.
ಹುಲಿಕಲ್ನಿಂದ ಹೊರಟ ಬಸ್ ಸ್ವಲ್ಪ ದೂರ ಸಾಗುವಷ್ಟರಲ್ಲೇ ಬೆಂಕಿ ಕಾಣಿಸಿಕೊಂಡಿದೆ.
ಎಲ್ಲಾ ಪ್ರಯಾಣಿಕರು ಸೇಫ್
ಬಸ್ನಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿದ್ದು ಗಮನಿಸಿದ ಚಾಲಕ ಮತ್ತು ನಿರ್ವಾಹಕ, ಕೂಡಲೇ ಬಸ್ ನಿಲ್ಲಿಸಿದ್ದಾರೆ. 17 ಮಂದಿ ಪ್ರಯಾಣಿಕರನ್ನು ತರಾತುರಿಯಲ್ಲಿ ಕೆಳಗಿಳಿಸಿದ್ದಾರೆ. ಕೆಲವೆ ಕ್ಷಣದಲ್ಲಿ ಬೆಂಕಿ ತೀವ್ರಗೊಂಡು ಇಡೀ ಬಸ್ಗೆ ಆವರಿಸಿದೆ. ನೋಡನೋಡುತ್ತಿದ್ದಂತೆ ಬಸ್ ಸಂಪೂರ್ಣ ಹೊತ್ತಿ ಉರಿದಿದೆ.
ಘಟನೆಯಿಂದಾಗಿ ಹುಲಿಕಲ್ ಘಾಟ್ ರಸ್ತೆಯಲ್ಲಿ ವಾಹನ ಸಂಚಾರ ಕೆಲಕಾಲ ವ್ಯತ್ಯಯ ಉಂಟಾಗಿತ್ತು. ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
