ರಿಪ್ಪನ್ಪೇಟೆ:ಹೊಸನಗರ ಕ್ಷೇತ್ರ ಮರು ರಚನೆಗೆ ಒತ್ತಾಯಿಸಿ ತಾಲೂಕಿನ ನಗರದಿಂದ ಹಮ್ಮಿಕೊಂಡಿದ್ದ ಪಾದಯಾತ್ರೆ (movement) ರಿಪ್ಪನ್ಪೇಟೆ ತಲುಪಿತು. ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಸಮಾರೋಪ ಸಮಾರಂಭ ನಡೆಯಿತು.
ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಸಂಸದ ಬಿ.ವೈ.ರಾಘವೇಂದ್ರ ಸೇರಿ ಹಲವರು ಭಾಗವಹಿಸಿದ್ದರು.
ಯಾರೆಲ್ಲ ಏನೆಲ್ಲ ಹೇಳಿದರು?
ಕಡ್ಡಾಯವಾಗಿ ಹೊಸನಗರ ಕ್ಷೇತ್ರ ಆಗಲೇಬೇಕು. ನಿಮ್ಮ ಆಗ್ರಹಕ್ಕೆ ನಮ್ಮ ಬೆಂಬಲ ಇದ್ದೇ ಇರುತ್ತದೆ. ರಾಜ್ಯದಿಂದ ಆಗಬೇಕಾದ ಎಲ್ಲ ಸಹಕಾರ ನೀಡಲು ನಾವು ಬದ್ಧರಿದ್ದೇವೆ. ಕ್ಷೇತ್ರ ವಿಂಗಡಣೆ ಕಾರ್ಯ ಕೇಂದ್ರ ಸರ್ಕಾರದ್ದು. ಹಾಗಾಗಿ ಸಂಸದರಾದ ಬಿ.ವೈ.ರಾಘವೇಂದ್ರ ಅವರು ಈ ಬಗ್ಗೆ ಆಸಕ್ತಿ ತೋರಬೇಕು.ಎಸ್. ಮಧು ಬಂಗಾರಪ್ಪ, ಜಿಲ್ಲಾ ಉಸ್ತುವಾರಿ ಸಚಿವ
ರಾಜ್ಯ ಮತ್ತು ಕೇಂದ್ರ ಸರ್ಕಾರ ಜಂಟಿಯಾಗಿ ಕಾನೂನಿಗೆ ಒಳಪಟ್ಟು ಕೇತ್ರ ಮರು ಸ್ಥಾಪನೆಗಾಗಿ ಶ್ರಮಿಸೋಣ. ಈ ಭಾಗದ ಜನ ಮುಳುಗಡೆಯಿಂದ ನಲುಗಿದ್ದಾರೆ. ಈ ಪ್ರದೇಶದ ಸಮಗ್ರ ಅಭಿವೃದ್ಧಿಯೊಂದಿಗೆ ಕ್ಷೇತ್ರ ಮರು ರಚನೆ ಮಾಡಲು ಹೋರಡೋಣ.ಬಿ.ವೈ.ರಾಘವೇಂದ್ರ, ಸಂಸದ
ಕ್ಷೇತ್ರ ಮರು ರಚನೆ ಹೋರಾಟದಲ್ಲಿ ಮೂಲೆಗದ್ದೆ ಶ್ರೀಗಳು ಮತ್ತು ಮಾಜಿ ಶಾಸಕ ಸ್ವಾಮಿರಾವ್ ಅವರ ಅವಿರತ ಶ್ರಮದಿಂದ ಈ ಪಾದಯಾತ್ರೆ ಯಶಸ್ವಿಯಾಗಿದೆ. ದೇಶದ ವಿವಿಧಡೆ 25 ಸಾವಿರ ಜನಸಂಖ್ಯೆಗೆ ವಿಧಾನಸಭೆ ಕ್ಷೇತ್ರಗಳಿವೆ. ಹಾಗಾಗಿ ಪ್ರತ್ಯೇಕ ಕ್ಷೇತ್ರ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ.ಗೋಪಾಲಕೃಷ್ಣ ಬೇಳೂರು, ಶಾಸಕ
ಮೂಲೆಗದ್ದೆ ಮಠದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ, ಹೊಂಬುಜ ಜೈನ ಮಠದ ಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ, ನಿಟ್ಟೂರು ನಾರಾಯಣಗುರು ಮಠದ ಶ್ರೀ ರೇಣುಕಾನಂದ ಸ್ವಾಮೀಜಿ, ಮುಸ್ಲಿಂ ಧರ್ಮಗುರು ಮುನೀರ್ ಸಾಖಾಫಿ, ಶಾಸಕ ಆರಗ ಜ್ಞಾನೇಂದ್ರ, ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ಮಾಜಿ ಸಚಿವ ಹರತಾಳು ಹಾಲಪ್ಪ, ಮಾಜಿ ಶಾಸಕ ಬಿ.ಸ್ವಾಮಿ ರಾವ್, ಕಲಗೋಡು ರತ್ನಾಕರ್, ದೇವಾನಂದ, ಅಲುವಳ್ಳಿ ವೀರೇಶ್, ವರ್ತೇಶ್, ಸುರೇಶ್ ಸ್ವಾಮಿರಾವ್, ಮಾಸ್ತಿಕಟ್ಟೆ ಸುಬ್ರಮಣ್ಯ ಇತರರಿದ್ದರು.