ಹೊಸನಗರ: ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ (Government First Grade College) ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದ ಅಂಜನಕುಮಾರ್ ಅವರ ಮೇಲೆ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರ ಅಮಾನತು ಆದೇಶವನ್ನು (Suspension order) ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯಮಂಡಳಿ (KAT) ರದ್ದುಪಡಿಸಿದೆ.
ಅಂಜನಕುಮಾರ್ ಅವರು ಕಾಲೇಜು ಆಡಳಿತಾತ್ಮಕ ವ್ಯವಸ್ಥೆಗೆ ಧಕ್ಕೆ ತರುವ ರೀತಿಯಲ್ಲಿ ವರ್ತಿಸಿದ್ದಾರೆ ಎಂಬುದು ಸೇರಿದಂತೆ ಹಲವು ಆರೋಪಗಳನ್ನು ಮಾಡಲಾಗಿತ್ತು. ಈ ಸಂಬಂಧ ಪ್ರಾಂಶುಪಾಲರ (Principal) ಪತ್ರವನ್ನು ಕಾಲೇಜು ಅಭಿವೃದ್ಧಿ ಸಮಿತಿ (CDC) ಅಧ್ಯಕ್ಷರು ಶಿಕ್ಷಣ ಸಚಿವರಿಗೆ ನೀಡಿದ್ದರು. ಈ ಹಿನ್ನೆಲೆ ಇಲಾಖೆ ಆಯುಕ್ತರು ಅಂಜನ್ಕುಮಾರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿದ್ದರು. ಆದರೆ ಈ ಆದೇಶವನ್ನು ಅಂಜನ್ಕುಮಾರ್ ಕೆಎಟಿಯಲ್ಲಿ ಪ್ರಶ್ನಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮಂಡಳಿಯ ನ್ಯಾಯಾಂಗ ಸದಸ್ಯರಾದ ಎಸ್.ವೈ. ವಟವಟಿ ಹಾಗೂ ಆಡಳಿತ ಸದಸ್ಯರಾದ ಡಾ. ಅಮಿತಾ ಪ್ರಸಾದ್ ಅವರನ್ನೊಳಗೊಂಡ ಪೀಠವು (Bench), ಇಲಾಖೆ ಕ್ರಮವನ್ನು ಪರಿಶೀಲಿಸಿ ಅಮಾನತು ಮಾಡಿರುವುದು ಸಮಂಜಸವಲ್ಲ ಎಂದು ಅಭಿಪ್ರಾಯಪಟ್ಟಿತು. ಅಮಾನತು ಕ್ರಮ ಕೈಗೊಂಡಿರುವುದು ಕರ್ನಾಟಕ ನಾಗರಿಕ ಸೇವಾ (KCS Rules) ನಿಯಮಗಳು, 1957ರ ನಿಯಮ 10(3) ಉಲ್ಲಂಘನೆಯಾಗಿದೆ (Violation) ಎಂದು ನ್ಯಾಯಮಂಡಳಿ ಸ್ಪಷ್ಟಪಡಿಸಿದೆ. ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರು ಹೊರಡಿಸಿದ್ದ ಅಮಾನತು ಆದೇಶವನ್ನು ರದ್ದುಪಡಿಸಿದೆ (Quashed).
