ರಿಪ್ಪನ್ಪೇಟೆ: ಮಾಲ್ಗುಡಿ ಡೇಸ್ ನೆನಪಿಸುವ ಅರಸಾಳು ರೈಲು ನಿಲ್ದಾಣಕ್ಕೆ ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಮುದಿತ್ ಮಿತ್ತಲ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಿಲ್ದಾಣದ ಸ್ಥಿತಿ ಹಾಗೂ ಇಲ್ಲಿನ ಸಮಸ್ಯೆಗಳನ್ನು ಕಂಡು, ಪ್ರಯಾಣಿಕರಿಗೆ ಆಗುತ್ತಿರುವ ತೊಂದರೆಗಳನ್ನು ಕೂಡಲೇ ಬಗೆಹರಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟು ಸೂಚನೆ ನೀಡಿದರು.➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.
ಅರಸಾಳು ನಿಲ್ದಾಣಕ್ಕೆ ಭೇಟಿ ನೀಡಿದ ಮುದಿತ್ ಮಿತ್ತಲ್, ಆವರಣದಲ್ಲೇ ಇರುವ ಮಾಲ್ಗುಡಿ ಮ್ಯೂಸಿಯಂ ಅನ್ನು ವೀಕ್ಷಿಸಿದರು. ಈ ವೇಳೆ ನಿಲ್ದಾಣದಲ್ಲಿ ಸ್ವಚ್ಛತೆ ಕೊರತೆ, ಪ್ರಯಾಣಿಕರಿಗೆ ಕುಡಿಯುವ ನೀರಿನ ಸಮಸ್ಯೆ, ಸೂಕ್ತ ನಿರ್ವಹಣೆ ಹಾಗೂ ಇತರೆ ಮೂಲಸೌಕರ್ಯ ಕೊರತೆ ಗಮನಕ್ಕೆ ಬಂತು.

‘ಮಾಲ್ಗುಡಿ ಮ್ಯೂಸಿಯಂ ಅಭಿವೃದ್ಧಿಗಾಗಿ ಈಗಾಗಲೇ ಅನುದಾನದ ಬೇಡಿಕೆಯನ್ನು ಸಲ್ಲಿಸಲಾಗಿದೆ. ಅನುದಾನ ಬಿಡುಗಡೆಯಾದ ಕೂಡಲೇ ಮ್ಯೂಸಿಯಂ ಅನ್ನು ಆಕರ್ಷಕ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗುವುದು’
– ಮುದಿತ್ ಮಿತ್ತಲ್, ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ
ಈ ಸಂದರ್ಭ ರೈಲ್ವೆ ಇಲಾಖೆಯ ಆರ್.ಪಿ.ಎಫ್. ಉಸ್ತುವಾರಿ ಕೊಂಡರೆಡ್ಡಿ, ಜಗದೀಶ್, ಮೂರ್ತಿ ಸೇರಿ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.